ಶಿವಮೊಗ್ಗ: ಜಸವ ಜಯಂತಿ ಆತ್ಮಾವಲೋಕನ ಮಾಡಿಕೊಳ್ಳುವ ದಿನವಾಗಬೇಕು. ಬಸವಣ್ಣನವರು ಸೇರಿದಂತೆ ದಾರ್ಶನಿಕರನ್ನು ದೇವರನ್ನಾಗಿ ಮಾಡದೇ ನಮ್ಮ ಜೊತೆಗೆ ಇಟ್ಟುಕೊಂಡು ಸಾಗಬೇಕು. ನಮ್ಮ ನಡುವಿನ ಎಚ್ಚರ, ಬುದ್ಧಿಯಾಗಿಸಿಕೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಹಿರಿಯ ಪ್ರಾಧ್ಯಾಪಕ ಡಾ.ಜಿ.ಪ್ರಶಾಂತ್ ನಾಯ್ಕ್ ಹೇಳಿದರು.
800 ವರ್ಷಗಳ ಹಿಂದೆಯೇ ವಿಶ್ವ ಪ್ರಜ್ಞೆ ಮೂಡಿಸಿದವರು, ಸಾಂಸ್ಕೃತಿಕ ಚಳವಳಿ ಕಟ್ಟಿಕೊಟ್ಟವರು ಬಸವಣ್ಣ. ಸಮಾಜದಲ್ಲಿನ ಅಸಮಾನತೆ, ಅವೈಜ್ಞಾನಿಕತೆ, ಮೌಢ್ಯತೆ ನಡುವೆ ಸಮ ಸಮಾಜದ ವಿಶ್ವ ಪ್ರಜ್ಞೆ ಮೂಡಿಸಿದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯಲು ೮೦೦ ವರ್ಷ ಬೇಕಾಯಿತು. ಈ ಜಯಂತಿ ಆಚರಣೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ದಿನವಾಗಬೇಕು. ಯುವಜನತೆ ಮುಖ್ಯವಾಗಿ ಆತ್ಮಾವಲೋಕನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ದಿನವನ್ನು ಇಡೀ ನಾಗರಿಕ ಸಮಾಜ ನೆನಪು ಮಾಡಿಕೊಳ್ಳಬೇಕು. ಇಡೀ ಮನುಕುಲದ ಮಾರ್ಗದರ್ಶಕ ಬಸವಣ್ಣ. ವಿಶ್ವ ಗುರು ಬಸವಣ್ಣನವರ ಸಂದೇಶಗಳು ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಿದ್ದು, ಅವರು ರಾಷ್ಟ್ರ, ಇಡೀ ಪ್ರಪಂಚಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಬಿದ್ದವರನ್ನು ಮೇಲೆತ್ತೋಣ, ಎಲ್ಲರೂ ನಮ್ಮವರು ಎಂದು ಸಾರುತ್ತಾ ಎಲ್ಲರಿಗೂ ಅರ್ಥವಾಗುವ ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಡಿದ ಅವರು ನಮ್ಮೆಲ್ಲರಿಗೆ ಆದರ್ಶ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಮಾತನಾಡಿದರು.
ಬಸವ ಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ಚನ ನೀಡಿದರು.ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಜ್ಯೋತಿ ಪ್ರಕಾಶ್, ಉಪಾಧ್ಯಕ್ಷ ಎಸ್.ಪಿ.ದಿನೇಶ್, ಬಳ್ಳೆಕೆರೆ ಸಂತೋಷ್, ಎಚ್.ಸಿ.ಯೋಗೇಶ್, ತಾರಾನಾಥ್, ಅನಿತಾ ರವಿಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಸೇರಿದಂತೆ ಸಮಾಜದ ಮುಖಂಡರು ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.