ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕುಂದೂರು ಮಠದಲ್ಲಿ ಕಳೆದ ೯ ದಿನಗಳಿಂದ ಜರುಗಿದ ನವರಾತ್ರಿ ಉತ್ಸವಕ್ಕೆ ಬನ್ನಿ ಪೂಜೆ (ಶಮಿಪೂಜೆ) ನೆರವೇರಿಸಿ ಆಶೀರ್ವಚನ ನೀಡಿದರು.
ಜಗತ್ತಿನಲ್ಲಿ ತುಂಬಿಕೊಂಡಿರುವ ಎಲ್ಲಾ ದೋಷಗಳನ್ನು ಹೋಗಲಾಡಿಸುವ ಉದ್ದೇಶದಿಂದ ೯ ದಿನಗಳ ಕಾಲ ದೇವಿಯನ್ನು ಆರಾಧಿಸಿ ಸಾಧನೆಗೈದ ಭಕ್ತರು ೧೦ನೇ ದಿನ ತಮ್ಮ ಅಂತರಂಗ ಶುದ್ಧಿಯನ್ನು ಜಯಿಸುವ ದಿನವಾಗಿದೆ. ವಿಜಯದಶಮಿಯಂದು ಮಹಿಷಾಸುರನನ್ನು ಮರ್ಧಿಸಿದ ಭಗವತಿಯನ್ನು ಪೂಜಿಸುವುದರಿಂದ ಜಗತ್ತಿನ ಎಲ್ಲರ ಅಂತರಂಗ ಮತ್ತು ಸಮಾಜದ ದೋಷವನ್ನು ಶಮನಗೊಳಿಸುತ್ತಾಳೆ ಎಂದರು.ಆತ್ಮ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುವ ದಿನವನ್ನು ತಾಯಿ ಚಾಮುಂಡಿ ಕರುಣಿಸಿ, ಮಳೆ ಹಾಗೂ ಬೆಳೆಯಿಂದ ನಾಡು ಸಂತೃಪ್ತಿ ಹಾಗೂ ಸಂರಕ್ಷಣೆಯಾಗಲಿ ಎಂದು ಪ್ರಾರ್ಥಿಸಿ, ಎಲ್ಲೆಡೆ ಶಾಂತಿ, ನೆಮ್ಮದಿಯನ್ನು ತಂದು ಸರ್ವರ ಏಳಿಗೆಗೆ ಈ ವಿಜಯದಶಮಿ ಕಾರಣವಾಗಲಿ ಎಂದು ಹರಸಿದರು.
ಹಿನ್ನೆಲೆಯಲ್ಲಿ ಹಸುವಿನೊಂದಿಗೆ ಕ್ಷೇತ್ರದ ಸುಬ್ರಹ್ಮಣ್ಯ ದೇವಸ್ಥಾನದಿಂದ ಆದಿ ದೇವತೆಗಳಾದ ಶ್ರೀ ರಂಗನಾಥಸ್ವಾಮಿ ಹಾಗೂ ಶ್ರೀ ಮೆಳೆಯಮ್ಮ ದೇವಿಯನ್ನು ಅಡ್ಡ ಪಲ್ಲಕ್ಕಿಯಲ್ಲಿ ನಾದಸ್ವರದೊಂದಿಗೆ ಹೊರ ವಲಯದಲ್ಲಿರುವ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಆವರಣಕ್ಕೆ ಕರೆತಂದು ಬನ್ನಿ ಮರದ ಮುಂಭಾಗ ದಲ್ಲಿನ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.
ಬನ್ನಿ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ರಂಗನಾಥಸ್ವಾಮಿ, ಶ್ರೀಮೆಳೆಯಮ್ಮ ದೇವಿಗೆ ಮಹಾ ಮಂಗಳಾರತಿ ನೆರವೇರಿಸಿ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಬನ್ನಿ ಮರವನ್ನು ಮೂರು ಸುತ್ತು ಪ್ರದಕ್ಷಿಣೆ ಸುತ್ತಿದ ನಂತರ ಕತ್ತಿಯಿಂದ ಬನ್ನಿ ಕಡಿದರು. ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಭಕ್ತರು ದೇವಿಗೆ ಜೈಕಾರದ ಘೋಷ ಕೂಗಿದರು.ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಚುಂಚನಗಿರಿ ಮಠದ ಶ್ರೀ ಚೈತನ್ಯನಾಥ, ಕಬ್ಬಳಿ ಶಾಖಾಮಠದ ಶ್ರೀ ಶಿವ ಪುತ್ರನಾಥಸ್ವಾಮೀಜಿ ಹಾಗೂ ಸುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.