ಮನೆಯಲ್ಲಿ ಮಕ್ಕಳಿಗೆ ಸುಶಿಕ್ಷಣ, ಸಂಸ್ಕಾರ ನೀಡಲಿಲ್ಲ ಅಂದರೆ ಭವಿಷ್ಯದಲ್ಲಿ ನೋವೆಂಬುದು ಪೋಷಕರಿಗೆ ಕಟ್ಟಿಟ್ಟ ಬುತ್ತಿ ಇದ್ದಂತೆ.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಮನೆಯಲ್ಲಿ ಮಕ್ಕಳಿಗೆ ಸುಶಿಕ್ಷಣ, ಸಂಸ್ಕಾರ ನೀಡಲಿಲ್ಲ ಅಂದರೆ ಭವಿಷ್ಯದಲ್ಲಿ ನೋವೆಂಬುದು ಪೋಷಕರಿಗೆ ಕಟ್ಟಿಟ್ಟ ಬುತ್ತಿ ಇದ್ದಂತೆ ಎಂದು ಸಂತೆ ಕೆಲ್ಲೂರಿನ ಘನಮಠೇಶ್ವರ ಮಠದ ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು.
ನಗರದ ಕೊಟ್ಟೂರುಸ್ವಾಮಿ ಸಂಸ್ಥಾನಮಠದಲ್ಲಿ ಎಂಟನೇ ವರ್ಷದ ಸರ್ವಧರ್ಮ ಸಮನ್ವಯ ರಥೋತ್ಸವ ಹಾಗೂ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ ಮೂರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಕೊನೆ ದಿನ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರೀಕೊಟ್ಟೂರು ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾಜ ಸೇವಕಿ ರಾಣಿ ಸಂಯುಕ್ತ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ಚಾಮೀಜಿ ಹೇಮಕೂಟ ಮಹಾದ್ವಾರದ ಭೂಮಿ ಪೂಜೆ ನೆರವೇರಿಸಿದರು.
ಆಳಂದದ ಮಹಾಂತೇಶ್ವರ ಹಿರೇಮಠದ ಶ್ರೀಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ದರೂರಿನ ಶ್ರೀ ಸಂಗನಬಸವೇಶ್ವರ ಮಠದ ಶ್ರೀಕೊಟ್ಟೂರು ಸ್ವಾಮೀಜಿ, ಕೊಟ್ಟೂರು ಸ್ವಾಮಿ ಮಠದ ಶಾಖಾಮಠಗಳ ಶ್ರೀಗಳು, ವೀರಶೈವ ಲಿಂಗಾಯತ ಮಹಾಸಭಾದ ಹೊಸಪೇಟೆ ಅಧ್ಯಕ್ಷ ಗೊಗ್ಗ ಬಸವರಾಜ, ಶಾಂತ ಬಸವರಾಜ, ಅಕ್ಕನ ಬಳಗದ ಅಧ್ಯಕ್ಷೆ ಪ್ರಭಾ ಸಿಂಧಗಿ, ಮಾಜಿ ಅಧ್ಯಕ್ಷೆ ಗೌರಮ್ಮ ಗಂಗಾಧರಪ್ಪ, ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ಟಿ.ಎಚ್.ಎಂ. ಶೀಲಾಕುಮಾರಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಸುಮಾ ಸುರೇಶ್, ಜಿಲ್ಲಾ ಉಪಾಧ್ಯಕ್ಷೆ ಶಶಿಕಲಾ ನಾಗರಾಜ್, ಬಿಂದುಶ್ರೀ ಮಲ್ಲಿಕಾರ್ಜುನ, ರಶ್ಮಿ ಹಿರೇಮಠ ಮತ್ತಿತರರಿದ್ದರು.
ಭಕ್ತಿಗೀತೆಗಳ ಸಿಡಿ ಬಿಡುಗಡೆ:
ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಲಿಂ. ಜ. ಡಾ. ಸಂಗನಬಸವ ಸ್ವಾಮೀಜಿಗಳ ಭಕ್ತಿ ಗೀತೆಗಳ ಸಿಡಿ ಬಿಡುಗಡೆಗೊಳಿಸಿದರು. ಸಿಡಿಯಲ್ಲಿ ರಂಗನಾಥ ಜಿ. ಅಂಬಿಗೇರ ಅವರ ಸಾಹಿತ್ಯ, ಸದಾಶಿವ ಪಾಟೀಲ, ಪಂಡಿತ್ ವೆಂಕಟೇಶ್ ಆಲ್ಕೋಡ್ ಅವರ ಸಂಗೀತ ಮತ್ತು ಗಾಯನ ಇದೆ
11 ದಿನಗಳ ಬೇಸಿಗೆ ಶಿಬಿರ:
ಕೊಟ್ಟೂರು ಸ್ವಾಮಿ ಮಠದ ವತಿಯಿಂದ ಮುಂಬರುವ ಬೇಸಿಗೆ ಸಮಯದಲ್ಲಿ ಮಕ್ಕಳಿಗೆ ಸಂಸ್ಕಾರ ಪಾಠ ಹೇಳುವ ನಿಟ್ಟಿನಲ್ಲಿ 11 ದಿನಗಳ ಕಾಲ ಸಂಸ್ಕಾರ ಶಿಬಿರವನ್ನು ಉಚಿತ ಊಟ ಮತ್ತು ವಸತಿಯೊಂದಿಗೆ ಆಯೋಜಿಸಲಾಗುತ್ತಿದೆ, ಆಸಕ್ತರು ತಮ್ಮ ಮಕ್ಕಳನ್ನು ಶಿಬಿರದಲ್ಲಿ ಸೇರಿಸಬಹುದು ಎಂದು ಕೊಟ್ಟೂರು ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.