ಶ್ರೀಗಳಿಂದ ಭಟ್ಕಳದ ಕಾಮಾಕ್ಷಿ ದೇವಿಗೆ ಕಲಶಾಭಿಷೇಕ
ದೇವರ ಮೂರ್ತಿಯಲ್ಲಿ ದೈವಿಕ ಚೈತನ್ಯ ಮತ್ತು ಸಾನಿಧ್ಯ ನಿರಂತರವಾಗಿ ನೆಲೆಸಿರಬೇಕಾದರೆ ದೇವತಾ ಕಾರ್ಯಗಳು, ಕಲಶಾಭಿಷೇಕ ಅವಿರತವಾಗಿ ನಡೆಯಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ವಿಶೇಷ ಕಲಶಾಭಿಷೇಕ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಧಾರ್ಮಿಕ ಅನುಷ್ಠಾನಗಳ ಮೂಲಕ ದೇವರ ಮೂರ್ತಿಯಲ್ಲಿ ದೇವರ ಸಾನಿಧ್ಯವನ್ನು ನಾವು ಆಹ್ವಾನಿಸುತ್ತೇವೆ. ದೇವರು ನೆಲೆಸಬೇಕಾದರೆ ಅದಕ್ಕೆ ತಕ್ಕ ಪಾವಿತ್ರ್ಯ, ಶ್ರದ್ಧೆ ಮತ್ತು ವ್ಯವಸ್ಥೆ ಇರಬೇಕು. ಅವಿರತವಾಗಿ ಧಾರ್ಮಿಕ ಕಾರ್ಯಗಳು ನಡೆಯುವ ಮೂಲಕ ದೇವರ ಸಾನಿಧ್ಯ ಮತ್ತಷ್ಟು ವೃದ್ಧಿಯಾಗುತ್ತದೆ. ಆಗ ಭಕ್ತರು ದೇವರ ಸನ್ನಿಧಿಯಲ್ಲಿ ಮಾಡುವ ಪ್ರಾರ್ಥನೆಗಳು ಶೀಘ್ರವಾಗಿ ಫಲಿಸುತ್ತವೆ ಎಂದು ತಿಳಿಸಿದರು.ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿ ಇದ್ದಾಗ ನಮ್ಮ ಕೆಲಸಗಳು ಸುಲಭವಾಗಿ ನೆರವೇರುವಂತೆ, ದೇವರ ಉಪಸ್ಥಿತಿ ಇರುವ ಸ್ಥಳದಲ್ಲಿ ಭಕ್ತರ ಸಂಕಲ್ಪಗಳೂ ಸಫಲಗೊಳ್ಳುತ್ತವೆ. ಆದ್ದರಿಂದ ಮೂಲ ಬಿಂಬದಲ್ಲಿ ಚೈತನ್ಯವನ್ನು ಹೆಚ್ಚಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಅಧಿಕ ಮಾಸದ ಪವಿತ್ರ ಸಂದರ್ಭದಲ್ಲಿ ನಡೆದ ಅಭಿಷೇಕ ಹಾಗೂ ದೇವತಾ ಕಾರ್ಯಗಳಿಂದ ದೇವಸ್ಥಾನ ಮತ್ತಷ್ಟು ಅಭಿವೃದ್ಧಿ ಹೊಂದಲಿ. ಇಲ್ಲಿನ ಸಾನಿಧ್ಯದಲ್ಲಿ ಉಚ್ಛರಿಸಿದ ಪ್ರತಿಯೊಂದು ಶುಭ ನುಡಿಯೂ ಸತ್ಯವಾಗಲಿ. ಭಕ್ತರ ವಿಶ್ವಾಸ ಮತ್ತು ಭಕ್ತಿ ಇನ್ನಷ್ಟು ವೃದ್ಧಿಯಾಗಲಿ ಎಂದು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹರೀಶ ಕಾಮತ, ಗಿರಿಧರ ನಾಯಕ, ನಾಗೇಶ ಪೈ ತೋರ್ಷಾಲ, ವಸಂತ ಶ್ಯಾನಭಾಗ, ವ್ಯವಸ್ಥಾಪಕ ನಂದು ಕಾಮಕರ ಸೇರಿದಂತೆ ಕುಳಾವಿ ಭಜಕರರು ಹಾಗೂ ಭಕ್ತರು ಉಪಸ್ಥಿತರಿದ್ದರು.