ನಗರ, ಕಾರವಾರ ಸೀಮೆಯ ಶಿಷ್ಯರು ಸಲ್ಲಿಸಿದ ಸೇವೆ ಸ್ವೀಕಾರ
ನಗರ ಪ್ರದೇಶದಲ್ಲಿ ವಾಸಿಸುವವರು ತಮಗೆ ಧರ್ಮಾಚರಣೆಗೆ ಹೆಚ್ಚಿನ ಅವಕಾಶವಿಲ್ಲ ಎಂಬ ಭಾವನೆಯಿಂದ ಹೊರಬರಬೇಕು. ನಿತ್ಯ ಜೀವನದಲ್ಲಿ ಆಸನ, ಪ್ರಾಣಾಯಾಮ, ಜಪ ಹಾಗೂ ಆಹಾರ ನಿಯಮಗಳನ್ನು ಅಳವಡಿಸಿಕೊಂಡರೆ ನಗರದಲ್ಲಿದ್ದರೂ ಧರ್ಮಾಚರಣೆ ಮಾಡುವುದರ ಜೊತೆಗೆ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಚಾತುರ್ಮಾಸ್ಯದ ಅಂಗವಾಗಿ ಶಿರಸಿ ನಗರ ಸೀಮೆ ಹಾಗೂ ಕಾರವಾರ ಸೀಮೆಯ ಶಿಷ್ಯರು ಸಲ್ಲಿಸಿದ ಸೇವೆ ಸ್ವೀಕರಿಸಿ ಅನುಗ್ರಹ ಭಾಷಣ ಮಾಡಿದ ಅವರು, ನಗರೀಕರಣದ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸರಳವಾಗಿ ಅನುಸರಿಸಬಹುದಾದ ಧಾರ್ಮಿಕ ಸಾಧನೆಗಳ ಕುರಿತು ಮಾರ್ಗದರ್ಶನ ನೀಡಿದರು.ಭಗವಂತನ ಚಿಂತನೆ ಹಾಗೂ ಮನಸ್ಸಿನ ಏಕಾಗ್ರತೆಗೆ ಶರೀರದ ಸ್ಥಿರತೆ ಅತ್ಯಗತ್ಯ. ಸ್ಥಿರ ಸುಖಂ ಆಸನಮ್ ಎಂಬಂತೆ ಶರೀರ, ಶಿರ ಮತ್ತು ಕುತ್ತಿಗೆಯನ್ನು ನೇರವಾಗಿರಿಸಿ ಕನಿಷ್ಠ ಒಂದೂವರೆ ಗಂಟೆಯಾದರೂ ಸ್ಥಿರವಾಗಿ ಕುಳಿತುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಶರೀರ ಸ್ಥಿರವಾದಾಗ ಮನಸ್ಸನ್ನೂ ಏಕಾಗ್ರತೆಗೊಳಿಸಲು ಸಾಧ್ಯ ಎಂದು ತಿಳಿಸಿದರು.
ಜಪವು ಮನೋಮಯ ಹಾಗೂ ವಿಜ್ಞಾನಮಯ ಕೋಶಗಳನ್ನು ಶುದ್ಧೀಕರಿಸುತ್ತದೆ. ಧ್ವನಿಯೆತ್ತಿ ಮಾಡುವ ಜಪ, ಉಪಾಂಶು ಜಪ ಹಾಗೂ ಮನಸ್ಸಿನಲ್ಲಿಯೇ ಮಾಡುವ ಜಪ ಎಂಬ ಮೂರು ವಿಧಗಳಿದ್ದು, ಇವುಗಳಲ್ಲಿ ಮಾನಸಿಕ ಜಪ ಅತ್ಯಂತ ಶ್ರೇಷ್ಠವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರವಾರ ಹಾಗೂ ಸಿರಸಿ ನಗರ ಸೀಮೆಯ ಸಾವಿರಾರು ಶಿಷ್ಯರು ಮತ್ತು ಭಕ್ತರು ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು. ಇದೇ ಸಂದರ್ಭ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ನಗರದ ದಾಮೋದರ ಭಟ್, ಎಸ್.ಎಂ. ಉಪಾಧ್ಯ, ಚಂದ್ರಶೇಖರ ಹೆಗಡೆ, ಶ್ರೀಕಾಂತ ಹೆಗಡೆ ಇತರರಿದ್ದರು.