ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಎಚ್.ಟಿ.ಮಂಜು ಮಾರ್ಗದರ್ಶನದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ತಾಲೂಕಿನಲ್ಲಿರುವ ವಾಣಿಜ್ಯ ಮತ್ತು ವಾಣಿಜ್ಯೇತರ ವಾಹನ ಚಾಲಕರುಗಳಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ತಾಲೂಕಿನ ಆಸಕ್ತರು ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಗ್ರಾಮೀಣ ಪ್ರದೇಶದ ವಾಹನ ಚಾಲಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಭಾರತದ ಅತಿದೊಡ್ಡ ವಾಣಿಜ್ಯ ತಯಾರಿಕಾ ಘಟಕವಾದ ಟಾಟಾ ಮೋಟರ್ಸ್ ಈ ಉದ್ಯೋಗ ಮೇಳವನ್ನು ಆಯೋಜಿಸಿದೆ ಎಂದು ತಿಳಿಸಿದರು.ಬೆಂಗಳೂರು ಮಹಾನಗರದಲ್ಲಿ ವಿದ್ಯುದೀಕೃತ ಸಾರ್ವಜನಿಕ ಸಾರಿಗೆಯನ್ನು ಆರಂಭಿಸುವತ್ತ ದಾಪುಗಾಲು ಇಟ್ಟು ಟಾಟಾ ಮೋಟಾರ್ಸ್ ಅಂಗ ಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಲಿಮಿಟೆಡ್ ಮತ್ತು ಬಿಎಂಟಿಸಿ ನಡುವಿನ ಒಪ್ಪಂದದ ಪ್ರಕಾರ 921 ಅತ್ಯಧುನಿಕ 12೨ ಮೀಟರ್ ಕೆಳ ಮಹಡಿಯ ವಿದ್ಯುತ್ ಬಸ್ ಗಳ ಕಾರ್ಯಚಾಲನೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿದೆ ಎಂದರು.
ತಾಲೂಕಿನ ಆಸಕ್ತ ವಾಣಿಜ್ಯ ವಾಹನ ಚಾಲಕರು ಈ ಮೇಳದಲ್ಲಿ ಪಾಲ್ಗೊಳ್ಳಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆವಿ ಡಿ.ಎಲ್ ಹಾಗೂ ಬ್ಯಾಡ್ಜ್ ಹೊಂದಿರಬೇಕು. ಎರಡು ವರ್ಷಗಳ ಬಸ್ ಅಥವಾ ಟ್ರಕ್ ಚಾಲನೆ ಮಾಡಿದ ಅನುಭವ ಇರಬೇಕು. ಕಂಪನಿಯು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಮಹದೇವೇಗೌಡ, ಸುಕಂದರಾಜು, ಪ್ರಜ್ವಲ್, ರಾಹುಲ್, ಪ್ರಶಾಂತ್, ಶಶಾಂಕ್, ಸಚಿನ್ ಕೃಷ್ಣ, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಹಲವರು ಹಾಜರಿದ್ದರು.