ಹೊಸಪೇಟೆ: ನಗರದಲ್ಲಿ ನಗರಸಭೆ ಆಸ್ತಿ ಹಾಗೂ ಸರ್ಕಾರಿ ಜಾಗ ಹಾಗೂ ಉದ್ಯಾನಗಳನ್ನು ಗುರುತಿಸಿ ತಂತಿ ಬೇಲಿ ಹಾಕಿ ಸಂರಕ್ಷಣೆ ಮಾಡಬೇಕಿದೆ. ಸರ್ಕಾರಿ ಜಾಗಗಳನ್ನು ಗುರುತಿಸಿ ಅವುಗಳನ್ನು ಕಾಪಾಡಿಕೊಳ್ಳುವ ಕೆಲಸ ಆಗಬೇಕಿದೆ. ಇಲ್ಲದಿದ್ದರೆ ಮುಂದೊಂದು ದಿನ ನಗರಸಭೆ ಆಸ್ತಿಯೇ ಉಳಿಯುವುದಿಲ್ಲ. ಎಲ್ಲವೂ ಒತ್ತುವರಿ ಆಗಲಿದೆ. ಈ ಕೆಲಸವನ್ನು ತುರ್ತಾಗಿ ಮಾಡಬೇಕು ಎಂದು ನಗರಸಭೆ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
ಇದಕ್ಕೆ ನಗರಸಭೆ ಸರ್ವ ಸದಸ್ಯರು ಧ್ವನಿಗೂಡಿಸಿ ಕೂಡಲೇ ನಗರಸಭೆ ಆಸ್ತಿ ಗುರುತಿಸುವ ಕೆಲಸ ಆಗಬೇಕು. ಈ ಕಾರ್ಯಕ್ಕಾಗಿ ತಂತಿಬೇಲಿ ಹಾಕಲು ಎಂಜಿನಿಯರ್ ಸೆಕ್ಷನ್ಗೆ ಸೂಚಿಸಬೇಕು ಎಂದರು.
ಈ ವೇಳೆ ಸದಸ್ಯ ಎಲ್.ಎಸ್. ಆನಂದ ಮಾತನಾಡಿ, ಎಂಜಿನಿಯರ್ ಸೆಕ್ಷನ್ನವರು ತಂತಿಬೇಲಿ ಹಾಕಲು ಹೋಗಿದ್ದರು. ಆದರೆ, ಇದುವರೆಗೆ ನಗರಸಭೆ ಕಂದಾಯ ಇಲಾಖೆಯಿಂದ ಸಹಕಾರವೇ ದೊರೆತಿಲ್ಲ. ಬಿಲ್ ಕಲೆಕ್ಟರ್ಗಳು ಇದುವರೆಗೆ ಸರ್ಕಾರಿ ಜಾಗಗಳನ್ನೇ ಗುರುತಿಸಲು ಮುಂದಾಗಿಲ್ಲ. ಈ ಹಿಂದಿನ ಪೌರಾಯುಕ್ತರ ಬಳಿ ಎಂಜಿನಿಯರ್ ವಿಭಾಗದ ಅಧಿಕಾರಿಗಳೇ ಬಿಲ್ ಕಲೆಕ್ಟರ್ಗಳು ಈ ವಿಷಯದಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಅವಲತ್ತುಕೊಂಡಿದ್ದಾರೆ. ಈ ಮಾಹಿತಿ ನಮ್ಮ ಗಮನಕ್ಕೆ ಬಂದಿದೆ. ಮೊದಲು ಸರ್ಕಾರಿ ಜಾಗ ಉಳಿಸಲು ಬಿಲ್ ಕಲೆಕ್ಟರ್ಗಳು ಸಹಕಾರ ನೀಡಬೇಕು ಎಂದರು.ಇದಕ್ಕೆ ಸದಸ್ಯರಾದ ಕೆ. ಗೌಸ್, ಗುಜ್ಜಲ ರಾಘವೇಂದ್ರ, ಶೇಕ್ಷಾವಲಿ, ತಾರಿಹಳ್ಳಿ ಜಂಬುನಾಥ, ಜೀವರತ್ನಂ, ಹನುಮಂತಪ್ಪ(ಬುಜ್ಜಿ), ಮುನ್ನಿಕಾಸಿಂ ಕೂಡ ಬೆಂಬಲ ಸೂಚಿಸಿದರು. ಸರ್ಕಾರಿ ಜಮೀನು ಉಳಿಸುವ ಕಾರ್ಯ ಆಗಲಿ ಎಂದು ಆಗ್ರಹಿಸಿದರು.
ಶಾಸಕರ ಪತ್ರದ ಬಗ್ಗೆ ಬಿಸಿ ಬಿಸಿ ಚರ್ಚೆ: ಶಾಸಕ ಎಚ್.ಆರ್. ಗವಿಯಪ್ಪ ಅವರು 2023ರ ಅಕ್ಟೋಬರ್ 7ರಂದು ನಗರಸಭೆಗೆ ಪತ್ರ ಬರೆದು ಎಂ. ಲೋಕರಾಜ್ ಎಂಬವರು ಬಡವರಾಗಿದ್ದು, ಮೀರ್ಆಲಂ ಟಾಕೀಸ್ ಬಳಿ ನಂದಿನಿ ಪಾರ್ಲರ್ ಹಾಕಿಕೊಂಡು ಸ್ವಂತ ಉದ್ಯೋಗ ಕೈಗೊಳ್ಳಲು ಅನುಮತಿ ನೀಡಬೇಕು ಎಂದು ಬರೆದಿರುವ ಪತ್ರದ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರಕ್ಕೆ ನಾಂದಿಯಾಯಿತು. ಬಿಜೆಪಿ ಸದಸ್ಯರು ಈ ಬಗ್ಗೆ ಪರಿಶೀಲನೆ ನಡೆಸಿ, ಶಾಸಕರ ಜತೆಗೆ ಚರ್ಚಿಸಿ ಕ್ರಮ ವಹಿಸೋಣ ಎಂದು ಪಟ್ಟುಹಿಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಶಾಸಕರ ಬಗ್ಗೆ ಗೌರವ ಇರಲಿ, ಅವರು ಕೋರಿದ್ದಾರೆ. ನಾವು ಪರವಾನಗಿ ನೀಡೋಣ ಎಂದು ಒತ್ತಾಯಿಸಿದರು.
ನಗರದಲ್ಲಿ ವಾಲ್ಮೀಕಿ ಸಮಾಜ ದೊಡ್ಡ ಸಮಾಜವಾಗಿದ್ದು, ಈಗಿರುವ ರುದ್ರಭೂಮಿ ಏಳುಕೇರಿಗಳಿಗೆ ಚಿಕ್ಕದಾಗುತ್ತದೆ. ಹಾಗಾಗಿ ನಗರಸಭೆಯಿಂದ 10 ಎಕರೆ ಜಾಗ ನೀಡಬೇಕು ಎಂದು ಒತ್ತಾಯಿಸಿದರು. ಆಗ ಸದಸ್ಯರಾದ ರಾಘವೇಂದ್ರ ಗುಜ್ಜಲ, ತಾರಿಹಳ್ಳಿ ಜಂಬುನಾಥ, ಬುಜ್ಜಿ ಸೇರಿದಂತೆ ಉಳಿದ ಸದಸ್ಯರು ಕೂಡ ಧ್ವನಿಗೂಡಿಸಿದರು. ಪೌರಾಯುಕ್ತರು ಈ ಬಗ್ಗೆ ಸೂಕ್ತ ಕ್ರಮವಹಿಸಲು ಸೂಚಿಸಿದರು.
ನಗರದಲ್ಲಿ ಶೌಚಾಲಯಗಳ ನಿರ್ಮಾಣ, ವಿವಿಧ ಅಭಿವೃದ್ಧಿ ಕಾಮಗಾರಿಗಳು, ನಗರಸಭೆ ಮಳಿಗೆಗಳ ಬಾಡಿಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.