ಜೆಡಿಯು ಪಕ್ಷದಿಂದ ಸದಸ್ಯತ್ವ ನೋಂದಣಿ ಅಭಿಯಾನ

KannadaprabhaNewsNetwork |  
Published : Feb 05, 2026, 01:15 AM IST
೪ಕೆಎಲ್‌ಆರ್-೩ಕೋಲಾರ ತಾಲ್ಲೂಕು ಕಲ್ಲಂಡೂರಿನಲ್ಲಿ ಜನತಾದಳ (ಸಂಯುಕ್ತ) ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಜೆಡಿಯು ಪಕ್ಷದ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಹಿಮ ಜೆ.ಪಟೇಲ್ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಈಗಿನ ರಾಜಕಾರಣ ಎಂದರೆ ಹಳಿ ತಪ್ಪಿದ ರೈಲು ಇದ್ದಂತೆ. ನಾವೆಲ್ಲಾ ಆ ರೈಲು ಹತ್ತಿದ್ದೇವೆ, ಯಾವ ದಿಕ್ಕಿನತ್ತ ಹೋಗುತ್ತಿದ್ದೇವೆ ಎಂಬುದೇ ಗೊತ್ತಾಗುವುದಿಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎಂದರೆ ಪರಸ್ಪರ ಬೈಯ್ದುಕೊಳ್ಳುವುದೇ ಆಗಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಜೆಡಿಯು ಪಕ್ಷದಿಂದ ಮಾಡಬೇಕಿದೆ. ಪಾಪದ ದಿಕ್ಕಿಗೆ ಹೋಗದೆ ಜನರಿಗೆ ಒಳ್ಳೆಯದನ್ನು ಮಾಡುವ ದಿಕ್ಕಿನಲ್ಲಿ ಸಾಗಬೇಕಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯದಾದ್ಯಂತ ಪ್ರವಾಸ ಮಾಡಿ ಸದಸ್ಯತ್ವ ನೋಂದಣಿ ಮಾಡುವ ಮೂಲಕ ಜೆಡಿಯು ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಲಾಗುವುದು, ೫೦ ಸಾವಿರ ಸದಸ್ಯತ್ವ ಮಾಡುವ ಗುರಿ ಇದೆ. ಮುಂದಿನ ದಿನಗಳಲ್ಲಿ ನಮ್ಮದೇ ಅಥವಾ ಬೆಂಬಲಿತ ಸರ್ಕಾರ ರಚಿಸುವ ಮಹಾ ಆಕಾಂಕ್ಷೆ ಇದೆ ಎಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಮಹಿಮ ಜೆ.ಪಟೇಲ್ ತಿಳಿಸಿದರು.

ತಾಲೂಕಿನ ಕಲ್ಲಂಡೂರಿನಲ್ಲಿ ಜನತಾದಳ (ಸಂಯುಕ್ತ) ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪಕ್ಷಕ್ಕೆ ಸೇರಲು ಜನರೇ ಮುಂದೆ ಬಂದು ಅರ್ಜಿ ಹಾಕುವ ರೀತಿ ಪಕ್ಷ ಕಟ್ಟಬೇಕು. ಸಿದ್ಧಾಂತದ ಆಧಾರದ ಮೇಲೆ ಹಾಗೂ ಜನರು ನಮ್ಮ ಪಕ್ಷದತ್ತ ವಾಲುವಂಥ ರೀತಿಯಲ್ಲಿ ಪಕ್ಷ ಕಟ್ಟಬೇಕು.ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಈಗಿನ ರಾಜಕಾರಣ ಎಂದರೆ ಹಳಿ ತಪ್ಪಿದ ರೈಲು ಇದ್ದಂತೆ. ನಾವೆಲ್ಲಾ ಆ ರೈಲು ಹತ್ತಿದ್ದೇವೆ, ಯಾವ ದಿಕ್ಕಿನತ್ತ ಹೋಗುತ್ತಿದ್ದೇವೆ ಎಂಬುದೇ ಗೊತ್ತಾಗುವುದಿಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎಂದರೆ ಪರಸ್ಪರ ಬೈಯ್ದುಕೊಳ್ಳುವುದೇ ಆಗಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಜೆಡಿಯು ಪಕ್ಷದಿಂದ ಮಾಡಬೇಕಿದೆ. ಪಾಪದ ದಿಕ್ಕಿಗೆ ಹೋಗದೆ ಜನರಿಗೆ ಒಳ್ಳೆಯದನ್ನು ಮಾಡುವ ದಿಕ್ಕಿನಲ್ಲಿ ಸಾಗಬೇಕಿದೆ ಎಂದು ನುಡಿದರು.

ಈಗ ಬರೀ ಪ್ರತಿಕ್ರಿಯಾತ್ಮಕ ಆಲೋಚನೆ ನಡೆಯುತ್ತಿದೆ. ಜಗತ್ತಿನಲ್ಲಿ ನಡೆಯುತ್ತಿರುವ ಯಾವುದೋ ಘಟನೆಗೆ ನಾವು ಪ್ರತಿಕ್ರಿಯಿಸುತ್ತಿದ್ದೇವೆ. ಪರಸ್ಪರ ದೂಷಣೆಗಿಂತ ನಾವು ರಾಜ್ಯಕ್ಕೆ ಏನು ಕೊಡಬಹುದು ಎಂಬುದರ ಬಗ್ಗೆ ಚಿಂತನೆ ಮಾಡಬೇಕಿದೆ, ಸಾವಯವ ಕೃಷಿ ಹಾಗೂ ಪರಿಸರದ ಬಗ್ಗೆ ಚಿಂತಿಸಬೇಕಿದೆ. ಪ್ರಕೃತಿ ಕಡೆ ಗಮನ ಹರಿಸಬೇಕಿದೆ. ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಹಾಗೂ ಜೆಡಿಯು ರಾಜ್ಯ ಯುವ ಘಟಕದ ಅಧ್ಯಕ್ಷ ಕಲ್ಲಂಡೂರು ಡಾ.ನಾಗರಾಜ್ ಮಾತನಾಡಿ, ಸದಸ್ಯತ್ವ ನೋಂದಣಿ ಅಭಿಯಾನ ರಾಷ್ಟ್ರದಾದ್ಯಂತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಮಹಿಮ ಪಟೇಲ್ ನೇತೃತ್ವದಲ್ಲಿ ಆರಂಭಿಸಲಾಗಿದೆ. ಮಹಿಳೆಯರು ಹಾಗೂ ಯುವಕರಿಗೆ ಪಕ್ಷದ ಸಿದ್ಧಾಂತ ತಿಳಿಸಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದರು.

ಭ್ರಷ್ಟಾಚಾರ ರಹಿತ ಆಡಳಿತದ ಗುರಿ ನಮ್ಮದು. ಸರ್ವೋದಯದ ಧ್ಯೇಯಗಳಾದ ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಉತ್ತಮ ಪರಿಸರ ಜನರಿಗೆ ಬೇಕು. ವಾಯುಮಾಲಿನ್ಯದ ಕಾರಣ ಶ್ವಾಸಕೋಶದ ಕಾಯಿಲೆ ಬರುತ್ತಿದೆ. ಮುಂದಿನ ಪೀಳಿಗೆ ಈ ಸಮಸ್ಯೆಗೆ ಒಳಗಾಗಬಾರದು. ರಾಸಾಯನಿಕ ಹಾಕಿ ಬೆಳೆದ ತರಕಾರಿಯಿಂದ ವಿವಿಧ ರೋಗ ಬರುತ್ತಿವೆ. ಹೀಗಾಗಿ, ಸಾವಯವ ಕೃಷಿಗೆ ಒತ್ತು ನೀಡಬೇಕಿದೆ. ಈ ಐದು ಅಂಶ ಇಟ್ಟುಕೊಂಡು ರಾಜ್ಯದಲ್ಲಿ ಜೆಡಿಯು ಪಕ್ಷ ಪುನಶ್ಚೇತನಗೊಳಿಸುವ ಕೆಲಸ ನಡೆಯುತ್ತಿದೆ. ಪಕ್ಷವನ್ನು ಎಲ್ಲಾ ವರ್ಗದವರು ಸೇರಿ ಕಟ್ಟಲು ಸಂಕಲ್ಪ ಮಾಡಲಾಗಿದೆ. ಸದಸ್ಯರಾಗಿ ಪಕ್ಷಕ್ಕೆ ದುಡಿಯಬೇಕಿದೆ ಎಂದು ಹೇಳಿದರು.

ಪಕ್ಷಕ್ಕಾಗಿ ಕೆಲಸ ಮಾಡುವವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಮಹಿಳೆಯರು ಹಾಗೂ ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಜೆಡಿಯು ಈಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಭಾಗವಾಗಿದೆ. ಮುಂದೆ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಎನ್‌ಡಿಎ ಭಾಗವಾಗಿ ಸ್ಪರ್ಧಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜೆಡಿಯು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ ಮಾತನಾಡಿ, ಮೊದಲು ನಾವೆಲ್ಲಾ ಹೊಸದಾಗಿ ಪಕ್ಷದ ಸದಸ್ಯರಾಗಬೇಕು. ಮುಂದೆ ನಾವು ಇರುವ ಸ್ಥಳಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಬೇಕು ಎಂದರು.

ಹಿರಿಯ ಉಪಾಧ್ಯಕ್ಷ ಸುಭಾಷ್ ಮಾತನಾಡಿ, ಸದಸ್ಯರಾಗುವುದು ಎಂದರೆ ಸಸಿ ನೆಟ್ಟಂತೆ. ಮುಂದೆ ಮರವಾಗಿ ಬೆಳೆಯಬಹುದು. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಮಾಡಿರುವ ಕೆಲಸಗಳು ನಮ್ಮ ಮುಂದೆ ಇವೆ. ಸದಸ್ಯರಾಗಿ ಪಕ್ಷ ಬಲಪಡಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಕಚೇರಿಗಳಲ್ಲಿ ಏನೇ ಕೆಲಸ ಮಾಡಿಸಿಕೊಳ್ಳಲು ಹಣ ನೀಡಬೇಕಾದ ಪರಿಸ್ಥಿತಿ ಇದೆ. ಭ್ರಷ್ಟಾಚಾರ ತೊಲಗಬೇಕು, ದೇಶದ ಅಭಿವೃದ್ಧಿಗೆ, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಪಕ್ಷದ ಮುಖಂಡರಾದ ರಂಗನಾಥ್, ವಕ್ತಾರ ರಮೇಶ್ ಗೌಡ, ಉಪಾಧ್ಯಕ್ಷ ಮೈನಾವತಿ, ಯುವ ಘಟಕದ ರಘು, ನೇತ್ರಾ ಗೌಡ, ಸಾಯಿಚರಣ್, ಅಂಬರೀಷ್, ಚಂದ್ರು, ಡಾ.ಸಹನಾ, ಸುಮಾ, ಮಲ್ಲಮ್ಮ, ನಂಜುಂಡಪ್ಪ, ಮಂಜುನಾಥ, ನಾರಾಯಣಸ್ವಾಮಿಗೌಡ, ರಾಹುಲ್, ಸಗೀರ್ ಅಹ್ಮದ್, ಪ್ರದೀಪ್, ವಿಶ್ವನಾಥ್, ಸೂರಿ, ಶಿಲ್ಪಾ, ನಾರಾಯಣರೆಡ್ಡಿ, ಪಾಪಣ್ಣ, ಮೋತಿಲಾಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ