ಬೆಂಗಳೂರಿನ ಭವಿಷ್ಯದ ಉಪನಗರಿ 16 ಜಿಲ್ಲೆಗಳನ್ನು ರಾಜ್ಯದ ರಾಜಧಾನಿಗೆ ಸೇರಿಸುವ ತುಮಕೂರಿಗೆ ಗಗನ ಕುಸುಮವಾದ ಮೆಟ್ರೋ ಯೋಜನೆ

KannadaprabhaNewsNetwork |  
Published : Mar 07, 2025, 12:47 AM ISTUpdated : Mar 07, 2025, 12:16 PM IST
ಬಜೆಟ್ ಲೀಡ್.... ಗಗನ ಕುಸುಮವಾಗಿದೆ ಮೆಟ್ರೋ ಯೋಜನೆ | Kannada Prabha

ಸಾರಾಂಶ

ಬೆಂಗಳೂರಿನ ಭವಿಷ್ಯದ ಉಪನಗರಿ ಹಾಗೂ ರಾಜ್ಯದ 16 ಜಿಲ್ಲೆಗಳನ್ನು ರಾಜ್ಯದ ರಾಜಧಾನಿಗೆ ಸೇರಿಸುವ ಹೆಬ್ಬಾಗಿಲೆಂದು ಹೆಸರಾಗಿದ್ದ ತುಮಕೂರಿಗೆ ಮೆಟ್ರೋ ಬರುವುದು ಸದ್ಯಕ್ಕೆ ಕನ್ನಡಿಯೊಳಗಿನ ಗಂಟಾಗಿದೆ.

ಉಗಮ ಶ್ರೀನಿವಾಸ್

 ತುಮಕೂರು  : ಬೆಂಗಳೂರಿನ ಭವಿಷ್ಯದ ಉಪನಗರಿ ಹಾಗೂ ರಾಜ್ಯದ 16 ಜಿಲ್ಲೆಗಳನ್ನು ರಾಜ್ಯದ ರಾಜಧಾನಿಗೆ ಸೇರಿಸುವ ಹೆಬ್ಬಾಗಿಲೆಂದು ಹೆಸರಾಗಿದ್ದ ತುಮಕೂರಿಗೆ ಮೆಟ್ರೋ ಬರುವುದು ಸದ್ಯಕ್ಕೆ ಕನ್ನಡಿಯೊಳಗಿನ ಗಂಟಾಗಿದೆ. 

ಬೆಂಗಳೂರಿನಿಂದ ತುಮಕೂರಿನವರೆಗೆ ಮೆಟ್ರೋ ಯೋಜನೆ ಜಾರಿ ಸಂಬಂಧ ಕಳೆದ ಬಜೆಟ್ ನಲ್ಲಿ ಹೇಳಲಾಗಿತ್ತು. ಆದರೆ ಈವರೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಬಗ್ಗೆ ಜನಪ್ರತಿನಿಧಿಗಳು ಮಾತನಾಡುತ್ತಿದ್ದಾರೆ ವಿನಃ ಮೆಟ್ರೋ ತರುವ ಬಗ್ಗೆ ಚಕಾರವಿಲ್ಲ. ಸೋಮಣ್ಣ ಕೇಂದ್ರ ರೈಲ್ವೆ ಸಚಿವರಾದ ಬಳಿಕ ಕುಂಟುತ್ತಾ ಸಾಗಿದ್ದ ಬೆಂಗಳೂರು ದಾವಣೆಗೆರೆ ಹಾಗೂ ತುಮಕೂರು ರಾಯದುರ್ಗ ಮಾರ್ಗಕ್ಕೆ ವೇಗ ಸಿಕ್ಕಿದೆ. 

ಅಲ್ಲದೇ ಕೆಳಸೇತುವೆ ಕಾಮಗಾರಿ ಕೂಡ ಬಿರುಸಿನಿಂದ ಸಾಗಿದೆ. ಆದರೆ ಮೆಟ್ರೋ ಬಗ್ಗೆ ಚಕಾರವಿಲ್ಲ.ಈಗಾಗಲೇ ತುಮಕೂರಿನಿಂದ ಸಾವಿರಾರು ಮಂದಿ ಬೆಂಗಳೂರಿಗೆ ಉದ್ಯೋಗ, ವ್ಯಾಪಾರ ಮತ್ತಿತರೆ ಕಾರಣಗಳಿಗಾಗಿ ಹೋಗುತ್ತಿರುತ್ತಾರೆ. ಅಲ್ಲದೇ ವಸಂತನರಸಾಪುರ ಕೈಗಾರಿಕಾ ಹಬ್ ಇರುವುದರಿಂದ ಮೆಟ್ರೋ ಅತ್ಯಗತ್ಯವಾಗಿದೆ. ಆದರೆ ಬಜೆಟ್ ನಲ್ಲಿ ಘೋಷಿಸಿದ್ದು ಬಿಟ್ಟರೆ ಇಲ್ಲಿಯವರೆಗೆ ಯಾವುದೇ ಪ್ರೊಗ್ರೆಸ್ ಮಾತ್ರ ಆಗಿಲ್ಲ. ಇನ್ನು ವಸಂತನರಸಾಪುರ ಹಾಗೂ ತುಮಕೂರಿನಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ಧಿ ಬಗ್ಗೆ ಬಜೆಟ್ ನಲ್ಲಿ ಘೋಷಿಸಲಾಗಿತ್ತು.

 ಆದರೆ ಬಜೆಟ್ ಮಂಡಿಸಿ ಒಂದು ವರ್ಷವಾದರೂ ಅಂತಹ ಯಾವುದೇ ಪ್ರಯತ್ನ ಕೂಡ ನಡೆದಿಲ್ಲ. ಈಗಾಗಲೇ ತುಮಕೂರು ಸಮೀಪ 16 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ವಸಂತನರಸಾಪುರ ಕೈಗಾರಿಕಾ ವಲಯ ಆರಂಭವಾಗಿದ್ದು ಅದಕ್ಕೆ ಇನ್ನು ದೊಡ್ಡ ಮಟ್ಟದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಹಾಗೆಯೇ ತುಮಕೂರು ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಸೇರಿದ್ದರೂ ಕೂಡ ಇಂಟಿಗ್ರೇಟೆಡ್ ಟೌನ್ ಶಿಪ್ ಮಾತ್ರ ಇನ್ನು ವೇಗ ಸಿಕ್ಕಿಲ್ಲ.

ಗುಬ್ಬಿ ತಾಲೂಕು ಮಠದಹಳ್ಳಿ ಹಾಗೂ ಅಂಕಸಂದ್ರ ಬಳಿ ಕುರುಬರಹಳ್ಳಿ ಕೆರೆ ಮತ್ತು ಶೇಷಣ್ಣನ ಹಳ್ಳಿ ಕೆರೆಗೆ ಕುಡಿಯುವ ನೀರು ಯೋಜನೆ ಸಂಬಂಧ ಅಂತರ್ಜಲ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲು ಕಳೆದ ಬಜೆಟ್ ನಲ್ಲಿ ಹೇಳಿದ್ದರು. ಆದರೆ ಯೋಜನೆ ಅನುಷ್ಠಾನವಾಗಿಲ್ಲ. ಯೋಜನೆ ಅನುಷ್ಠಾನವಿರಲಿ ಟೆಂಡರ್ ಪ್ರಕ್ರಿಯೆ ಕೂಡ ಆಗಿಲ್ಲ.

 ಒಂದು ವೇಳೆ ಯೋಜನೆ ಅನುಷ್ಠಾನವಾಗಿದ್ದರೆ ಸುಮಾರು 45 ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ಲಭ್ಯವಾಗುತ್ತಿತ್ತು. ಆದರೆ ಈ ಬಜೆಟ್ ನಲ್ಲಾದರೂ ಹಣ ಮೀಸಲಿಡಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.ಕಳೆದ ಬಜೆಟ್ ನಲ್ಲಿ ಮಧುಗಿರಿ ತಾಲೂಕಿನಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಆ ಯೋಜನೆ ಕೂಡ ನೆನಗುದಿಗೆ ಬಿದ್ದಿದೆ. ಸ್ವತಃ ಸಹಕಾರ ಸಚಿವ ಕೆ.ಎನ್. ರಾಜಣ್ಣ ಪ್ರತಿನಿಧಿಸುವ ಕ್ಷೇತ್ರ ಇದಾಗಿದೆ. ಇಷ್ಟರೊಳಗೆ ಯೋಜನೆ ಆರಂಭವಾಗಿ ಶೇ. 60 ರಷ್ಟು ಕೆಲಸ ಮುಗಿಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಯೋಜನೆ ಇನ್ನೂ ಟೇಕಾಫ್ ಆಗಿಲ್ಲ. ಇನ್ನು ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆಯಾಗಲಿ, ಸೀಜಿಂಗ್ ಯಾರ್ಡ್ ನಿರ್ಮಾಣವಾಗಲಿ ಅಷ್ಟೇಕೆ ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಯಾವೊಂದು ಕೆಲಸಗಳು ಟೇಕಾಫ್ ಆಗಿಲ್ಲದೆ ನಿರಾಶೆ ಮೂಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ