ಎಪಿಎಂಸಿಯಲ್ಲಿ ಸಾಕಷ್ಟು ಸ್ಥಳದ ಅವಶ್ಯಕತೆ ಇದ್ದರೂ ರಾಗಿ ಖರೀದಿಯನ್ನು ನಗರದ ಬೇರೊಂದು ಬಾಡಿಗೆ ಸ್ಥಳದಲ್ಲಿ ರೈತರಿಂದ ಖರೀದಿಸುತ್ತಿರುವುದು ಅನುಮಾನ ಹುಟ್ಟಿಸಿದೆ ಎಂದು ಎಪಿಎಂಸಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೂ ರಾಗಿ ಖರೀದಿ ಮಾತ್ರ ಬಾಡಿಗೆ ಸ್ಥಳದಲ್ಲಿ ಎಂಬ ಶೀರ್ಷಿಕೆಯಡಿ ಪತ್ರಿಕೆಗಳಲ್ಲಿ ವರದಿ ಬಿತ್ತರವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಡಲೆ ರಾಗಿ ಖರೀದಿ ಕೇಂದ್ರವನ್ನು ಗುರುವಾರ ಎಪಿಎಂಸಿಗೆ ಸ್ಥಳಾಂತರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತಿಪಟೂರು
ಎಪಿಎಂಸಿಯಲ್ಲಿ ಸಾಕಷ್ಟು ಸ್ಥಳದ ಅವಶ್ಯಕತೆ ಇದ್ದರೂ ರಾಗಿ ಖರೀದಿಯನ್ನು ನಗರದ ಬೇರೊಂದು ಬಾಡಿಗೆ ಸ್ಥಳದಲ್ಲಿ ರೈತರಿಂದ ಖರೀದಿಸುತ್ತಿರುವುದು ಅನುಮಾನ ಹುಟ್ಟಿಸಿದೆ ಎಂದು ಎಪಿಎಂಸಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೂ ರಾಗಿ ಖರೀದಿ ಮಾತ್ರ ಬಾಡಿಗೆ ಸ್ಥಳದಲ್ಲಿ ಎಂಬ ಶೀರ್ಷಿಕೆಯಡಿ ಪತ್ರಿಕೆಗಳಲ್ಲಿ ವರದಿ ಬಿತ್ತರವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಡಲೆ ರಾಗಿ ಖರೀದಿ ಕೇಂದ್ರವನ್ನು ಗುರುವಾರ ಎಪಿಎಂಸಿಗೆ ಸ್ಥಳಾಂತರಿಸಿದ್ದಾರೆ. ಎಪಿಎಂಸಿಯಲ್ಲಿ ರಾಗಿ ಖರೀದಿಗೆ ಯಾವುದೇ ಬಾಡಿಗೆ ನೀಡುವಂತಿಲ್ಲ, ಸುಸಜ್ಜಿತವಾದ ವಿಶಾಲ ಆವರಣ, ವಿದ್ಯುತ್, ನೀರು ಸೇರಿದಂತೆ ಎಲ್ಲಾ ವ್ಯವಸ್ಥೆಯೂ ಇದೆ. ಅಲ್ಲದೆ ರಾಗಿ ಖರೀದಿಗೆ ಹೆಸರು ನೋಂದಣಿ ಪ್ರಕ್ರಿಯೆಯೂ ಸಹ ಇಲ್ಲೇ ನಡೆದಿತ್ತು. ಆದರೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದವರು ಏಕಾಏಕಿ ರಾಗಿ ಖರೀದಿ ಪ್ರಕ್ರಿಯೆಯನ್ನು ಎಪಿಎಂಸಿಯಿಂದ ಹೊರಗೆ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವುದು ಕೆಲ ರೈತರಿಗೆ ಅನುಮಾನ ಮೂಡಿತ್ತು. ನಿಗಮದವರು ಹಮಾಲರ ಗಲಾಟೆಯಿಂದ ಎಪಿಎಂಸಿ ಹೊರಗಡೆ ಖರೀದಿ ಕೇಂದ್ರ ಆರಂಭಿಸಿದ್ದೇವೆಂದು ಹೇಳಿದ್ದರು. ಆದರೆ ರೈತರು ಬಂಡಿಹಳ್ಳಿ ಸಮೀಪದ ಗೋಡನ್ನಲ್ಲಿ ರಾಗಿ ಖರೀದಿ ಮಾಡುವುದರಿಂದ ನೀರು, ನೆರಳು ಸೇರಿದಂತೆ ನಮಗೆ ಸೂಕ್ತ ಭದ್ರತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದನ್ನು ಪತ್ರಿಕೆ ಪ್ರಕಟಿಸಿತ್ತು. ವರದಿ ಬಿತ್ತರವಾದ ಕೂಡಲೆ ಬೆಳ್ಳಂಬೆಳಗ್ಗೆ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ಸೇರಿದಂತೆ ಅಧಿಕಾರಿ ವರ್ಗದವರು ಖುದ್ದು ಸ್ಥಳ ಪರಿಶೀಲನೆ ಮಾಡಿ ನಿಗಮದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ರೈತರಿಗೆ ಎಲ್ಲಿ ಸೂಕ್ತವಾಗುವುದು ಎಂದು ತಿಳಿದುಕೊಂಡ ನಂತರ ಕೇವಲ ಮೂರು ಗಂಟೆಯೊಳಗೆ ಬಂಡಿಹಳ್ಳಿ ಗೋಡನ್ನಿಂದ ಎಪಿಎಂಸಿ ಆವರಣಕ್ಕೆ ರಾಗಿ ಖರೀದಿ ಕೇಂದ್ರವನ್ನು ವರ್ಗಾಯಿಸಿದರು. ಎಪಿಎಂಸಿ ರಾಗಿ ಖರೀದಿ ಕೇಂದ್ರಕ್ಕೆ ತಹಸೀಲ್ದಾರ್ ಪವನ್ಕುಮಾರ್, ಎಪಿಎಂಸಿ ಕಾರ್ಯದರ್ಶಿ ನ್ಯಾಮನಗೌಡರು ಆಗಮಿಸಿ ರೈತರಿಗೆ ನೆರಳಿಗಾಗಿ ಶಾಮಿಯಾನ, ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ನಂತರ ಹಮಾಲರೊಂದಿಗೆ ಮಾತುಕತೆ ನಡೆಸಿದರು. ರಾಗಿ ಮಾರಾಟಕ್ಕೆ ಹೆಸರು ನೊಂದಾಯಿಸಿಕೊಂಡಿರುವ ರೈತರು ಗೊಂದಲಕ್ಕೀಡಾಗದೆ ಎಪಿಎಂಸಿಯಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ತರುವಂತೆ ತಿಳಿಸಿದರು. ಬಾಕ್ಸ್ : ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಿರುವುದು ರೈತರಿಗೆ ಅನುಕೂಲವಾಗಿದೆ. ಎಪಿಎಂಸಿಯಿಂದ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ ಆದರೆ ಯಾವ ರೈತರು ಯಾವಾಗ ರಾಗಿಯನ್ನು ತರಬೇಕು ಎಂಬುದರ ಜೇಷ್ಠತಾ ಪಟ್ಟಿಯನ್ನು ರಾಗಿ ಖರೀದಿ ಕೇಂದ್ರದ ಮುಂದೆ ಪ್ರಕಟಿಸಬೇಕು ಇದರಿಂದ ಅನುಕೂಲವಾಗಲಿದೆ ಎಂದು ರೈತರು ತಹಸೀಲ್ದಾರ್ಗೆ ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.