ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಯಾನಗರ ಗ್ರಾಮದ ಸುಖದೇವಾನಂದ ಮಠದ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಸಚಿವರು, ಬಳಿಕ ಶಾಸಕ ಮಹಾಂತೇಶ ಕೌಜಲಗಿ ಅವರ ನಿವಾಸಕ್ಕೆ ತೆರಳಿ, ಮಾಜಿ ಸಚಿವ ಶಿವಾನಂದ ಕೌಜಲಗಿ ಅವರೊಂದಿಗೆ ಕೆಲಹೊತ್ತು ಚರ್ಚೆ ನಡೆಸಿದರು. ನಂತರ ಚನ್ನಮ್ಮಾಜಿಯ ಐಕ್ಯ ಸ್ಥಳಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು.
ಈ ವೇಳೆ ಶಾಸಕ ಮಹಾಂತೇಶ ಕೌಜಲಗಿ ಚನ್ನಮ್ಮಾಜಿಯ ಇತಿಹಾಸ ಹಾಗೂ ನವೀಕರಿಸಲಾದ ರಾಕ್ ಗಾರ್ಡನ್ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ನವೀಕೃತ ರಾಕ್ ಗಾರ್ಡನ್ ವೀಕ್ಷಿಸಿದ ಬಳಿಕ ಸಚಿವರು ನಯಾನಗರ ಗ್ರಾಮದ ಸುಖದೇವಾನಂದ ಮಠಕ್ಕೆ ತೆರಳಿ ಅಭಿನವ ಸಿದ್ದಲಿಂಗೇಶ್ವರ ಶ್ರೀಗಳ ಆಶೀರ್ವಾದ ಪಡೆದರು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಚಿವರು, ರಾಜ್ಯದಲ್ಲಿಯೇ ಉತ್ತಮ ಹೆಸರು ಪಡೆದಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಆಸೀಪ್ ಶೇಠ್, ಬೆಳಗಾವಿಯ ಐಜಿಪಿ ಚೇತನಸಿಂಗ್ ರಾಥೋಡ, ಎಸ್ಪಿ ಕೆ.ರಾಮರಾಜನ್, ತಾಲೂಕಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಮಹಾಂತೇಶ ಕಳ್ಳಿಬಡ್ಡಿ, ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ಶಿವರಂಜನ್ ಬೋಳನ್ನವರ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಬಾಬು ಕುಡಸೋಮಣ್ಣವರ, ಮಹಾಂತೇಶ ತುರಮರಿ, ಹಸನ ಗೊರವನಕೊಳ್ಳ, ಕಾರ್ತಿಕ ಪಾಟೀಲ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.