ಸಚಿವರಿಗೆ ಪಾಲುದಾರಿಕೆಯಲ್ಲಿ ಬಾರ್‌ ಮಾಡೋದೆ ಕೆಲಸ: ಪಿ.ರಾಜೀವ್‌

KannadaprabhaNewsNetwork | Published : Apr 13, 2025 2:01 AM

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೆ ಜಿಲ್ಲೆಯ ಅಭಿವೃದ್ಧಿಗಿಂತ ಪಾಲುದಾರಿಕೆಯಲ್ಲಿ ಬಾರ್ ಮಾಡುವುದೇ ದೊಡ್ಡ ಕೆಲಸವಾಗಿದೆ ಎಂದು ಮಾಜಿ ಶಾಸಕ ಪಿ.ರಾಜೀವ್‌ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೆ ಜಿಲ್ಲೆಯ ಅಭಿವೃದ್ಧಿಗಿಂತ ಪಾಲುದಾರಿಕೆಯಲ್ಲಿ ಬಾರ್ ಮಾಡುವುದೇ ದೊಡ್ಡ ಕೆಲಸವಾಗಿದೆ ಎಂದು ಮಾಜಿ ಶಾಸಕ ಪಿ.ರಾಜೀವ್‌ ಆರೋಪಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ತಿಮ್ಮಾಪೂರ ಅಧಿಕಾರಕ್ಕೆ ಬಂದು 2 ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು. ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿರುವ ಅಬಕಾರಿ ಹಗರಣಕ್ಕಿಂತ ದೊಡ್ಡ ಹಗರಣ ರಾಜ್ಯ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಬಂದ್ ಮಾಡಿರುವ ಹಾಗೂ ಸ್ಥಗಿತಗೊಂಡಿರುವ ಬಾರ್ ಪರವಾನಗಿಗಳನ್ನೇ ಅಕ್ರಮವಾಗಿ ಮಂಜೂರಾತಿ ಮಾಡಿಕೊಡುವ ದಂದೆ ಜೋರಾಗಿದೆ ಎಂದು ಕಿಡಿಕಾರಿದರು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಜನವಸತಿ ಪ್ರದೇಶದಲ್ಲಿ ಬಾರ್ ಪ್ರಾರಂಭಿಸಲು ಅವಕಾಶ ನೀಡಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಈ ಪ್ರಕರಣ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಬಳಿ ಹೋದಾಗ ಅವರ ಕುಟುಂಬದವರು ಶೇ.23ರಷ್ಟು ಪಾಲುದಾರಿಕೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅನುಮತಿ ಪಡೆದಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಬಕಾರಿ ನಿರೀಕ್ಷಕ ಕಿರಣ ಚಂದರಗಿ ಅವರನ್ನು ಅಮಾನತು ಮಾಡಿದ್ದಾರೆ. ಡಿಸಿ ಅವರನ್ನು ಎತ್ತಂಗಡಿ ಮಾಡಿದ್ದು, ಇಲ್ಲಿಯವರೆಗೆ ಅವರಿಗೆ ಸ್ಥಳ ನಿಗದಿಪಡಿಸಿಲ್ಲ ಎಂದು ದಾಖಲೆ ಬಿಡುಗಡೆಗೊಳಿಸಿದರು.

ಪ್ರತಿಯೊಬ್ಬ ಅಧಿಕಾರಿ ವರ್ಗಾವಣೆಗೆ ಇಷ್ಟು ಲಕ್ಷ, ಇಷ್ಟು ಕೋಟಿ ಎಂದು ಫಿಕ್ಸ್ ಮಾಡಲಾಗಿದೆ. ಆರ್‌.ಬಿ.ತಿಮ್ಮಾಪೂರ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಅಬಕಾರಿ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ಜಾತಿ ಸಮೀಕ್ಷೆಯಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಸಮೀಕ್ಷೆ ವಸ್ತುನಿಷ್ಠವಾಗಿ ಆಗಿದೆಯೋ ಅಥವಾ ಸ್ವಾರ್ಥಕ್ಕಾಗಿ ಆಗಿದೆಯೋ ಎನ್ನುವುದನ್ನು ಸಮೀಕ್ಷೆ ವರದಿ ಬಿಡುಗಡೆಯಾದ ಬಳಿಕ ನೋಡೋಣ ಎಂದು ಹೇಳಿದರು.

ಜಮಖಂಡಿ ಶಾಸಕ ಜಗದೀಶ ದುಡಗುಂಟಿ ಮಾತನಾಡಿ, ಜಮಖಂಡಿ ತಾಲೂಕು ಆಸ್ಪತ್ರೆಗೆ ಊಟ ನೀಡುವವರ ಬಿಲ್ ಅನ್ನು ಸರ್ಕಾರ ನೀಡದೇ ವರ್ಷವಾಗಿದೆ. ಹೀಗಾಗಿ ಅಲ್ಲಿ ಊಟ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ನಾನು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿದ ಮೇಲೆ ಪುನಃ ಊಟ ನೀಡುವುದನ್ನು ಪ್ರಾರಂಭಿಸಲಾಗಿದೆ. ಈ ಹಂತಕ್ಕೆ ಸರ್ಕಾರ ಬಂದು ನಿಂತಿದೆ ಎಂದು ಆರೋಪಿಸಿದರು.

ಸಿಎಂ ಸರ್ವ ಪಕ್ಷಗಳ ಸಭೆ ಕರೆಯಲಿ:

ಮಹಾರಾಷ್ಟ್ರದಿಂದ ಕೃಷ್ಣೆಗೆ ನೀರು ಹರಿಸಲು ಇಲ್ಲಿಯವರೆಗೆ ಸಿಎಂ ಸರ್ವಪಕ್ಷದ ಮುಖಂಡರ ಸಭೆ ಕರೆದಿಲ್ಲ. ಒಂದು ವೇಳೆ ಅದನ್ನು ಮಾಡಿದರೆ ನಾವು ಮಹಾರಾಷ್ಟ್ರ ಸರ್ಕಾರೊಂದಿಗೆ ಮಾತನಾಡಿ ಕೃಷ್ಣೆಗೆ ನೀರು ಬಿಡಿಸಲು ಪ್ರಯತ್ನಿಸುತ್ತೇವೆ. ಕೃಷ್ಣೆಗೆ ನೀರು ಹರಿದು ಬಂದರೆ ಐದಾರು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಮುಖಂಡರಾದ ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ಮಲ್ಲಯ್ಯ ಮುಗನೂರಮಠ, ಡಾ.ವಿಜಯಲಕ್ಷ್ಮೀ ತುಂಗಳ ಸೇರಿ ಇತರರಿದ್ದರು.ನಿಮಗೆ ಹೇಗೆ ಕ್ಯಾಕರಿಸಿ ಉಗೀಬೇಕು...!

ಕೇಂದ್ರ ಸರ್ಕಾರದ ಬೆಲೆ ಏರಿಕೆ ಕುರಿತು ರಾಜ್ಯ ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಪಿ.ರಾಜೀವ್‌, ಏ.17ರಂದು ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ನಾನು ನಿಮ್ಮ ಜೊತೆ ಕೂಡುತ್ತೇನೆ, ನಿಮ್ಮ ಹೋರಾಟ ಸ್ವಾಗತ ಮಾಡುತ್ತೇನೆ. ರೈತರ ಟಿ.ಸಿ.ಗಳಿಗೆ 600 ಪಟ್ಟು ದರ ಏರಿಕೆ ಮಾಡಿದರಲ್ಲ, ನಿಮ್ಮನ್ನ ಏನ್ ಮಾಡಬೇಕು ಹೇಳಿ. ಇಷ್ಟೆಲ್ಲ ಮಾಡಿದ್ದಕ್ಕೆ ನಿಮ್ಮನ್ನ ಯಾತರಲ್ಲಿ ಹೊಡೀಬೇಕು. ನಿಮ್ಮನ್ನ ಹೇಗೆ ಕ್ಯಾಕರಿಸಿ ಉಗೀಬೇಕು, ನೀವೇ ಹೇಳಿ ಎಂದು ಕಿಡಿಕಾರಿದರು.ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಿಲಿಂಡರ್‌ ದರ ₹900 ಇರುವುದನ್ನು ಈಗ ₹950 ಮಾಡಿದ್ದಾರೆ. ಕಾಂಗ್ರೆಸ್ಸಿಗರು ಪ್ರತಿಯೊಂದರ ಬೆಲೆ ಏರಿಸಿ ಸಿಲಿಂಡರ್ ಬೆಲೆ ₹50 ಏರಿಸಿರುವುದರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು ನಾಚಿಕೆಗೇಡು.

-ಪಿ.ರಾಜೀವ್‌, ಮಾಜಿ ಶಾಸಕ