ಉಪ್ಪಿನಂಗಡಿಯಲ್ಲಿ ಸಾರಿಗೆ ಬಸ್ ನಿಲ್ದಾಣಕ್ಕೆ ಭೂಮಂಜೂರಾತಿಗೆ ಶಾಸಕ ಅಶೋಕ್‌ ರೈ ಮನವಿ

KannadaprabhaNewsNetwork | Published : Sep 21, 2024 1:52 AM

ಸಾರಾಂಶ

ಮಾಲಕರಿಗೆ ಭೂಸ್ವಾಧೀನದ ಮೌಲ್ಯದ ಮೊತ್ತವನ್ನು ಪಾವತಿಸಿ, ಸದರಿ ಜಾಗದಲ್ಲಿ ಉಪ್ಪಿನಂಗಡಿ ಬಸ್ ನಿರ್ಮಾಣ ಮಾಡಲು ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಸಾರಿಗೆ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಉಪ್ಪಿನಂಗಡಿ: ಇಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಸ್ಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣದದ ಅಗತ್ಯವಿದ್ದು ಈಗ ಇರುವ ನಿಲ್ದಾಣದ ಸಮೀಪದಲ್ಲೇ ಜಾಗವನ್ನು ಗುರುತಿಸಲಾಗಿದೆ. ಅದನ್ನು ಮಂಜೂರು ಮಾಡಿಸುವುದರ ಜೊತೆ ಅನುದಾನವನ್ನೂ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರು ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.ಪುತ್ತೂರು ವಿಧಾನಸಭಾ ಕ್ಷೇತ್ರದ ಉಪ್ಪಿನಂಗಡಿ ಹೋಬಳಿ ಕೇಂದ್ರವಾಗಿದ್ದು ಮಂಗಳೂರು- ಬೆಂಗಳೂರು, ಪುತ್ತೂರು-ಧರ್ಮಸ್ಥಳ, ಮಂಗಳೂರು- ಸುಬ್ರಹ್ಮಣ್ಯ ಮಾರ್ಗದಲ್ಲಿರುವ ಅತೀ ದೊಡ್ಡ ಪಂಚಾಯಿತಿ ಆಗಿದೆ, ದಿನವೊಂದಕ್ಕೆ ಸರಿ ಸುಮಾರು ೨೦೦ ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸುತ್ತದೆ. ಉಪ್ಪಿನಂಗಡಿ ಗ್ರಾಮವು ಈ ಮಾರ್ಗದಲ್ಲಿರುವ ಅತೀ ಮುಖ್ಯ ಪಟ್ಟಣವಾಗಿರುತ್ತದೆ. ಈಗಾಗಲೇ ಸದರಿ ಜಾಗವನ್ನು ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಕಾಯ್ದಿರಿಸುವ ಬಗ್ಗೆ ಭೂ ಸ್ವಾಧೀನದ ಮೌಲ್ಯವಾಗಿ ೭೨.೦೬.೦೫೮ ರು. ನಿಗದಿ ಮಾಡಲಾಗಿತ್ತು. ನಂತರ ಜನವರಿ ೨೦೧೪ರ ಹೊಸ ಭೂ ಸ್ವಾಧೀನ ಕಾಯ್ದೆಯ ನಿಯಮ ಜಾರಿಗೆ ಬಂದಿರುವ ಕಾರಣ ೧೩.೨೬ ಕೋಟಿ ರು. ಮೊತ್ತವನ್ನು ನಿಗದಿಪಡಿಸಿ ೯ ಕೋಟಿ ಠೇವಣಿಯಾಗಿಡುವ ಬಗ್ಗೆ ಸಹಾಯಕ ಆಯುಕ್ತರು ಸೂಚಿಸಿದ್ದಾರೆ. ಈ ಜಾಗವು ಬಸ್‌ ನಿಲ್ದಾಣಕ್ಕೆ ಸೂಕ್ತವಾಗಿರುವುದರಿಂದ ಹಾಗೂ ಭೂ ಮಾಲಕರು ಜಾಗವನ್ನು ಪ್ರಸ್ತುತ ದರ ನೀಡಿದರೆ ಜಾಗ ನೀಡಲು ಸಿದ್ಧರಿದ್ದಾರೆ. ಮಾಲಕರಿಗೆ ಭೂಸ್ವಾಧೀನದ ಮೌಲ್ಯದ ಮೊತ್ತವನ್ನು ಪಾವತಿಸಿ, ಸದರಿ ಜಾಗದಲ್ಲಿ ಉಪ್ಪಿನಂಗಡಿ ಬಸ್ ನಿರ್ಮಾಣ ಮಾಡಲು ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಸಾರಿಗೆ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಮೆಸ್ಕಾಂ ಸಮಿತಿ ಸದಸ್ಯರಾದ ಚಂದ್ರ ಕಲ್ಲಗುಡ್ಡೆ, ರಾಕೇಶ್ ರೈ ಕುದ್ಕಾಡಿ ಹಾಗೂ ಸತೀಶ್ ನಿಡ್ಪಳ್ಳಿ ಉಪಸ್ಥಿತರಿದ್ದರು.

Share this article