ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಪುರಸಭೆ ವತಿಯಿಂದ ಸಾರ್ವಜನಿಕರಲ್ಲಿ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯ ಜಾಗೃತಿ ಮೂಡಿಸಲು ಸ್ವಚ್ಛ ಭಾರತ್ ಮಿಷನ್ 2.0, ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಯಡಿ ಘನ ತ್ಯಾಜ್ಯ ನಿರ್ವಹಣೆ, ವಸ್ತುಪ್ರದರ್ಶನ ಹಾಗೂ ಮ್ಯಾರಾಥಾನ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾರದ್ದೋ ಒತ್ತಾಯಕ್ಕೆ, ಯಾರದ್ದೋ ತೋರಿಕೆಗೆ ನಡೆಸುವ ಬದಲು ಪ್ರತಿಯೊಬ್ಬರೂ ಸ್ವ- ಇಚ್ಛೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದಾಗ ಮಾತ್ರ ಅದರ ಆಶಯ ಸಂಪೂರ್ಣ ಯಶಸ್ಸು ಕಾಣುತ್ತದೆ ಎಂದರು.
ಘನತ್ಯಾಜ್ಯ ವಸ್ತುಗಳ ನಿರ್ವಹಣಾ ನಿಯಮ- 2026 ಕಾಯ್ದೆ ಪಾಲನೆ ಕಡ್ಡಾಯವಾಗಿದ್ದು, ೨೦೨೬ ಏಪ್ರಿಲ್ ೧ರಿಂದ ಜಾರಿಗೆ ಬಂದಿದೆ. ಹಸಿ- ಒಣ ತ್ಯಾಜ್ಯದೊಂದಿಗೆ ಇದೀಗ ಮತ್ತೆರಡು ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಚಿಂತನೆ ನಡೆಸಿದ್ದು, ಸಾರ್ವಜನಿಕರು ಇನ್ಮುಂದೆ ಮೂಲದಲ್ಲಿಯೇ ಕಸ ವಿಂಗಡಣೆ ಮಾಡಬೇಕಾಗಿದೆ. ಪ್ರತಿ ಮನೆಯಿಂದ ನಾಲ್ಕು ತರಹದ ಕಸವನ್ನು ವಿಂಗಡೆ ಮಾಡಿ ಕೊಡಲೇಬೇಕಿದೆ. ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಸಂಗ್ರಹಿಸಿ ನೀಡುವಂತೆ ಸಾರ್ವಜನಿಕರಿಗೆ ನಿರ್ದೇಶನ ನೀಡಲಾಗಿದೆ. ಪಟ್ಟಣದಲ್ಲಿ ನಿತ್ಯ ಮನೆ ಬಾಗಿಲಿಗೆ ಕಸದ ಗಾಡಿಗಳು ಬರುತ್ತಿವೆ. ಈ ಸಮಯದಲ್ಲಿ ಬಹಳಷ್ಟು ಮಂದಿ ಹೊರಗೆ ಬಂದು ಕಸಕೊಡದೇ, ಗಾಡಿ ತೆರಳಿದ ನಂತರ ಚಂರಡಿಗಳಿಗೆ, ರಸ್ತೆ ಬದಿಗಳಲ್ಲಿ ಬೀಸಾಡುತ್ತಿದ್ದಾರೆಂದುಅಸಮಾಧಾನ ವ್ಯಕ್ತಪಡಿಸಿದರು.
ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್ ಮಾತನಾಡಿ, 2026ರ ನಿಯಮಗಳ ಪ್ರಕಾರ ಹಸಿ, ಒಣಕಸಗಳ ಜೊತೆ ಸ್ಯಾನಿಟರಿ ತ್ಯಾಜ್ಯ (ಡೈಪರ್, ಪ್ಯಾಡ್, ನಿರೋಧಗಳು) ಹಾಗೂ ವಿಶೇಷ ಕಾಳಜಿ ತ್ಯಾಜ್ಯ (ಗಾಜು, ಬಲ್ಪ್, ಬ್ಯಾಟರಿ, ಔಷಧಿ ಬಾಟಲ್, ಬಣ್ಣದ ಡಬ್ಬ, ಕ್ರಿಮಿನಾಶಕ ಡಬ್ಬ, ಬಳಸಿದ ಸೂಜಿ, ಸಿರೀಂಜ್ ಇತ್ಯಾದಿ) ವಸ್ತುಗಳನ್ನು ಕೂಡ ಪ್ರತ್ಯೇಕವಾಗಿ ನೀಡಬೇಕಿದೆ ಎಂದರು.
ಘನತ್ಯಾಜ್ಯ ವಿಲೇವಾರಿ, ಹಸಿ ಕಸ, ಒಣ ಕಸ ಹಾಗೂ ಸ್ಯಾನಿಟರಿ ಕಸ ವಿಂಗಡಣೆ, ಆರಂಭದಲ್ಲಿ ತ್ಯಾಜ್ಯವನ್ನು ಸಂಸ್ಕರಿಸುವ, ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ, ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡದಿರುವುದು. ಖಾಲಿ ನಿವೇಶನಗಳಲ್ಲಿ ಕಸ ಹಾಕದಿರುವುದು ಸೇರಿ ಇನ್ನಿತರ ವಿಷಯಗಳ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲಾಯಿತು.