ರಾಣಿಬೆನ್ನೂರು: ದಶಕಗಳಿಂದ ಆಗದ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿರುವುದು ಸಂತಸದ ವಿಚಾರವಾಗಿದೆ. ಇದರಿಂದ ಸಾವಿರಾರು ಬಡಕುಟುಂಬಗಳ ಕನಸು ಈಡೇರಿದಂತಾಗುತ್ತದೆ. ಬಿ-ಖಾತಾ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಬೇಕಾದ ಅವಶ್ಯಕತೆಯಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಕಂದಾಯ ಭೂಮಿ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಆಗದ ಬಡಾವಣೆಗಳಲ್ಲಿ ನಿವೇಶನ ಹೊಂದಿರುವರು, ಮನೆ ಕಟ್ಟಿಕೊಂಡವರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ ಬಿ-ಖಾತಾ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಹಲವು ವರ್ಷಗಳಿಂದ ನಮೂನೆ-3 ಸಿಗದೇ ಅತಂತ್ರ ಸ್ಥಿತಿಯಲ್ಲಿದ್ದ ಬಡ, ಮಧ್ಯಮ ವರ್ಗದವರಿಗೆ ಇದರಿಂದ ದೊಡ್ಡ ಉಪಕಾರ ಆಗಲಿದೆ. ನಗರಸಭೆ ಸದಸ್ಯರು ತಮ್ಮ ವಾರ್ಡ್ಗಳಲ್ಲಿ ಜನರಿಗೆ ಅಭಿಯಾನದ ಕುರಿತು ಸೂಕ್ತ ತಿಳಿವಳಿಕೆ ನೀಡಿ ಯೋಜನೆಯ ಸದುಪಯೋಗ ಪಡೆಯಲು ತಿಳಿಸಬೇಕು ಎಂದರು.
ಮೇ 10ರ ವರೆಗೆ ಇ-ಖಾತಾ ಅಭಿಯಾನ ನಡೆಯಲಿದ್ದು, ಅದರ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲು ಆಗುವುದಿಲ್ಲ. ನಿಗದಿತ ದಿನದ ನಂತರ ತಂತ್ರಾಂಶ ಕೊನೆಗೊಳ್ಳಲಿದ್ದು, ತಮ್ಮ ಆಸ್ತಿಗಳಿಗೆ ಖಾತೆ ಹೊಂದಬೇಕು. ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಇ-ಖಾತಾ ನೀಡುವ ಪ್ರಕ್ರಿಯೆ ಮುಗಿಯಲಿದೆ ಎಂದರು.ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಮಾತನಾಡಿ, ಪ್ರತಿಯೊಂದು ಆಸ್ತಿಗೂ ಇ-ಖಾತಾ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಗೊಳಿಸಿ ಪಾವತಿಸಿಕೊಳ್ಳಲಾಗಿದೆ. ನಂತರ ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲೆಗಳನ್ನು ಪಡೆದು ಇ-ಖಾತಾ ದಾಖಲೆ ನೀಡಲಾಗುವುದು.
ಅನಧಿಕೃತ ಆಸ್ತಿಗಳಿಗೆ ಮೊದಲನೇ ಬಾರಿಗೆ ತೆರಿಗೆಯ ಎರಡು ಪಟ್ಟು ವಿಧಿಸಲಾಗುವುದು. ಆನಂತರದ ವರ್ಷದಲ್ಲಿ ನಿಯಮಿತ ತೆರಿಗೆಯನ್ನು ತುಂಬಬೇಕು ಎಂದರು.
ನಗರಸಭೆ ಅಧ್ಯಕ್ಷ ಚಂಪಕ ಬಿಸಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗರಾಜ ಪವಾರ, ಕಂದಾಯ ಅಧಿಕಾರಿ ವಸಂತಕುಮಾರ ರೆಡ್ಡಿ, ಕೋಟೆಪ್ಪ ಗೋಣಿಬಸಮ್ಮನವರ, ವ್ಯವಸ್ಥಾಪಕ ಮಂಜುನಾಥ ಹಾಗೂ ನಗರಸಭೆ ಸದಸ್ಯರು ಇದ್ದರು.