ವಿಶೇಷಚೇತನ ವ್ಯಾಪಾರಿಗಳಿಂದ ಭೂ ತೆರಿಗೆಗೆ ಶಾಸಕ ಸೇಠ್‌ ಕಿಡಿ

KannadaprabhaNewsNetwork |  
Published : Dec 03, 2025, 03:00 AM IST
ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಶಾಸಕ ಆಸೀಫ್‌ ಸೇಠ್‌ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಬೆಳಗಾವಿ ಉತ್ತರ ಶಾಸಕ ಆಸೀಫ್‌ (ರಾಜು) ಸೇಠ್‌ ವಿಕಲಚೇತನ ವ್ಯಾಪಾರಿಗಳಿಂದ ಭೂ ತೆರಿಗೆ ವಸೂಲಿ ಮಾಡುತ್ತಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆಗಳಲ್ಲಿನ ವಿಕಲಚೇತನ ವ್ಯಾಪಾರಿಗಳಿಂದ ಭೂ ತೆರಿಗೆ ವಸೂಲಿ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಮೇಯರ್‌ ಮಂಗೇಶ ಪವಾರ ಅಧ್ಯಕ್ಷತೆಯಲ್ಲಿ ಮಂಗಳವಾರ ಮಹಾನಗರ ಪಾಲಿಕೆ ಸಭಾಭವನದಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು, ಭೂ ಬಾಡಿಗೆ ವಸೂಲಿ ಮಾಡುವ ಗುತ್ತಿಗೆದಾರರ ವಿರುದ್ಧ ಹರಿಹಾಯ್ದರು.

ಬೆಳಗಾವಿ ಉತ್ತರ ಶಾಸಕ ಆಸೀಫ್‌ (ರಾಜು) ಸೇಠ್‌ ಮಾತನಾಡಿ, ವಿಕಲಚೇತನ ವ್ಯಾಪಾರಿಗಳಿಂದ ಭೂ ತೆರಿಗೆ ವಸೂಲಿ ಮಾಡುತ್ತಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಹಾನಗರ ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ವಿಕಲಚೇತನ ವ್ಯಾಪಾರಸ್ಥರಿಂದ ಭೂ ತೆರಿಗೆ ಪಡೆಯಬಾರದೆಂಬ ನಿಯಮ ಇದ್ದರೂ ಖಾಸಗಿ ಗುತ್ತಿಗೆದಾರರು ನಿಯಮ ಮೀರಿ ಭೂ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆಯೇ ವಿಕಲಚೇತನ ವ್ಯಾಪಾರಿ ಮಾರುತಿ ಕರೇಗಾರ ಎಂಬುವರು ಪಾಲಿಕೆಗೆ ಭೂ ತೆರಿಗೆ ವಸೂಲಿ ಕುರಿತು ದೂರು ನೀಡಲು ಪಾಲಿಕೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಬಳಿಕ ಮೇಯರ್‌, ಉಪಮೇಯರ್‌, ಶಾಸಕರು ಹಾಗೂ ಸದಸ್ಯರು ವಿಕಲಚೇತನ ವ್ಯಾಪಾರ ಮಾರುತಿ ಬಳಿ ಬಂದು, ಅವರ ಸಮಸ್ಯೆ ಆಲಿಸಿದರು. ನಿತ್ಯ ನನ್ನಿಂದ ₹20 ಭೂ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಮಾರುತಿ ಮಾಹಿತಿ ನೀಡಿದರು.

ಸಭೆ ಮುಂದುವರಿದ ಬಳಿಕ ಶಾಸಕ ಆಸೀಫ್‌ ಸೇಠ್‌, ವಿಕಲಚೇತನರಿಗೆ ನಿಯಮಗಳಲ್ಲಿ ಸಡಿಲಗೊಳಿಸಬೇಕು ಎಂದು ಆಗ್ರಹಿಸಿದರು. ಮೇಯರ್‌ ಮಂಗೇಶ ಪವಾರ, ಬೀದಿಬದಿಯ ವಿಕಲಚೇತನರ ವ್ಯಾಪಾರಸ್ಥರಿಂದ ಭೂ ತೆರಿಗೆ ವಸೂಲಿ ಮಾಡುತ್ತಿರುವ ವಿಚಾರವಾಗಿ ಕರ ವಸೂಲಿ ಕಮಿಟಿ ಜೊತೆಗೆ ಚರ್ಚಿಸಿ, ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಕಲಚೇತನ ವ್ಯಾಪಾರಸ್ಥರಿಗೆ ಭೂ ತೆರಿಗೆ ವಸೂಲಿಗೆ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದ ಅಧಿಕಾರಿಗಳ ಮಾತಿನಿಂದ ಗರಂ ಆದ ಶಾಸಕ ಆಸೀಫ್‌ ಸೇಠ್, ವಿಕಲಚೇತನ ವ್ಯಾಪಾರಿಗಳಿಂದ ಈ ಕುರಿತು ಹಲವಾರು ಬಾರಿ ದೂರುಗಳು ಬಂದಿವೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ವಿಕಲಚೇತನ ವ್ಯಾಪಾರಿಗಳು ನಿತ್ಯ ₹100 ರಿಂದ 200 ಸಂಪಾದನೆ ಮಾಡುತ್ತಾರೆ. ಅದರಲ್ಲಿ ತೆರಿಗೆ ನೀಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಂದಾಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟೆ, ವಿಕಲಚೇತನ ವ್ಯಾಪಾರಸ್ಥರಿಂದ ಭೂ ತೆರಿಗೆ ವಸೂಲಿಗೆ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ವಿಕಲಚೇತನ ವ್ಯಾಪಾರಸ್ಥರಿಂದ ಭೂ ತೆರಿಗೆ ವಸೂಲಿ ಮಾಡದಂತೆ ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ ಎಂದರು.

ನೂತನ ಆಯುಕ್ತರಿಗೆ ಸ್ವಾಗತ:

ಪಾಲಿಕೆ ನೂತನ ಆಯುಕ್ತ ಕಾರ್ತಿಕ ಅವರನ್ನು ಸ್ವಾಗತಿಸಲಾಯಿತು. ಅದರಂತೆ ನಿರ್ಗಮನ ಆಯುಕ್ತೆ ಶುಭ ಬಿ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಬೀದಿ ಬದಿಯ ವ್ಯಾಪಾರಸ್ಥರಿಗೆ ₹10 ಸಾವಿರ ಸಾಲ ನೀಡಿರುವ ವಿಚಾರದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸಾಲ ವಸೂಲಾತಿಗೆ ಖಾಸಗಿ ಬ್ಯಾಂಕ್‌ಗೆ ಜವಾಬ್ದಾರಿ ನೀಡಲಾಗಿದ್ದರೂ ಯಾರೊಬ್ಬರು ಸಾಲ ಮರುಪಾವತಿ ಮಾಡುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.

ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡಿರುವ ವಿಚಾರದ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಉಪ ಆಯುಕ್ತ (ಆಡಳಿತ) ಉದಯಕುಮಾರ ತಳವಾರ ಸಭೆಗೆ ಮಾಹಿತಿ ನೀಡಿದರು. ಕೋಟೆಕೆರೆ ಆವರಣದಲ್ಲಿ ಶಾಸಕರ ನಿಧಿಯಲ್ಲಿ ತಿನಿಸು ಕಟ್ಟೆ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದ ಸದಸ್ಯರು, ಕೋಟೆ ಕೆರೆಯಲ್ಲಿ ಈ ಹಿಂದೆ ಇದ್ದ ಲೇಸರ್‌ ಟೆಕ್‌ ಪಾರ್ಕ್‌ ಸಾಮಗ್ರಿಗಳು ಎಲ್ಲಿವೇ ಎಂದು ಪ್ರಶ್ನಿಸಿದರು. ಪಾಲಿಕೆಯಲ್ಲಿ ಆಸ್ತಿ ತೆರಿಗೆ ಸರಿಯಾಗಿ ಸಂಗ್ರಹವಾಗುತ್ತಿಲ್ಲ ಎಂದು ಸದಸ್ಯ ಶಹೀದ ಪಠಾಣ ಕಂದಾಯ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಉಪಮೇಯರ್‌ ವಾಣಿ ವಿಲಾಸ ಜೋಶಿ, ಪಾಲಿಕೆ ಆಯುಕ್ತ ಕಾರ್ತಿಕ ಎಂ. ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ