ಕುಷ್ಟಗಿ: ಪಟ್ಟಣದ ಪಿಸಿಎಚ್ ಕಲ್ಯಾಣ ಮಂಟಪದಲ್ಲಿ ನಡೆದ ಶೆಟ್ಟರ್ ಬಂಧುಗಳ ಮದುವೆ ಸಮಾರಂಭದಲ್ಲಿ ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬ ವಿನೂತನ ಜಾಗೃತಿ ಅಭಿಯಾನ ಆಯೋಜಿಸಿ ಓದುಗ ಸಂಸ್ಕೃತಿ ಬೆಳೆಸುವ ಪ್ರಯತ್ನ ಕೈಗೊಳ್ಳಲಾಯಿತು. ಮದುವೆ ಸಮಾರಂಭದಲ್ಲಿ ನವ ವಧು-ವರರು ಮೊಬೈಲ್ ಬಿಡಿ ಪುಸ್ತಕ ಹಿಡಿ ಅಭಿಯಾನ ಜಾಗೃತಿ ಮೂಡಿಸಿ ಗಮನ ಸೆಳೆದರು. ನೂತನ ವಧು-ವರ ದರ್ಶನ್ ಶೆಟ್ಟರ್ ಹಾಗೂ ಚೈತ್ರ ಮೊಬೈಲ್ ಬಿಡಿ ಪುಸ್ತಕ ಹಿಡಿ ಅಭಿಯಾನ ಜಾಗೃತಿ ಎಂಬ ಬರಹ ಪ್ರದರ್ಶಿಸಿ ಗಮನ ಸೆಳೆದರು.ಮದುವೆಗೆ ಬಂದ ಕುಟುಂಬದವರು, ಬೀಗರು ಸ್ನೇಹಿತರು ಈ ಮಾದರಿ ಮದುವೆಯ ಈ ಸಂದೇಶ ಮೆಚ್ಚಿಕೊಂಡರಲ್ಲದೇ ವಿಶೇಷವಾಗಿ ಜಾಗೃತಿ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ದರ್ಶನ್ ಶೆಟ್ಟರ್ ಮಾತನಾಡಿ, ಇಂದಿನ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ. ಮಕ್ಕಳು ಮತ್ತು ಯುವಕರು ಹೆಚ್ಚು ಸಮಯ ಮೊಬೈಲ್ನಲ್ಲಿ ಕಳೆಯುತ್ತಾರೆ. ಆಟ, ಸಾಮಾಜಿಕ ಜಾಲತಾಣ, ವಿಡಿಯೋ ನೋಡುವುದರಿಂದ ಅವರು ಪುಸ್ತಕ ಓದುವುದನ್ನು ಮರೆಯುತ್ತಿದ್ದಾರೆ. ಆದ್ದರಿಂದ ನಮ್ಮ ವಿವಾಹ ಸಂದರ್ಭದಲ್ಲಿ ಮೊಬೈಲ್ ಬಿಡಿ, ಪುಸ್ತಕ ಹಿಡಿ ಎಂಬ ಸಂದೇಶ ನೀಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು. ನಮಗೆ ಜ್ಞಾನ ಕೊಡುತ್ತವೆ, ಉತ್ತಮ ಚಿಂತನೆ ಬೆಳೆಸುತ್ತವೆ ಮತ್ತು ನಮ್ಮ ಭವಿಷ್ಯ ಬೆಳಗಿಸುತ್ತವೆ. ಪುಸ್ತಕಗಳನ್ನು ಓದುವುದರಿಂದ ನಮ್ಮ ಭಾಷಾ ಕೌಶಲ್ಯ ವೃದ್ಧಿಯಾಗುತ್ತದೆ, ಮನಸ್ಸು ಏಕಾಗ್ರತೆಯಾಗುತ್ತದೆ ಎಂದು ತಿಳಿಸಿದರು.