ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ರೈತರ ಆರ್ತನಾದಕ್ಕೆ, ಕರ್ನಾಟಕದ ಬರ ಪರಿಹಾರ, ಹಕ್ಕಿನ ತೆರಿಗೆ ಹಣ ಬೇಕೆಂಬ ಬೇಡಿಕೆಗೆ, ಕಲಬುರಗಿ ಭಾಗದ ಪ್ರಗತಿಗೆ ಮೋದಿ ಜಾಣ ಕಿವುಡು ಧೋರಣೆ ಅನುಸರಿಸುತ್ತಿದ್ದಾರೆಂದು ಜರಿದರು. ಕಾಂಗ್ರೆಸ್ ಪರ ಮತ ಯಾಚಿಸಲು ಹೋದಲ್ಲೆಲ್ಲಾ ಹೆಚ್ಚಿನ ಜನ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪರವಾದಂತಹ ಅಲೆ ಒಳಗೊಳಗೇ ಹೆಚ್ಚಾಗಿದೆ. ಮತದಾರರ ಒಲವು ಕೈ ಬಲಪಡಿಸುವ ದಿಶೆಯಲ್ಲಿ ಸ್ಪಷ್ಟವಾಗಿದೆ ಎಂದರು.
ಸ್ವಾಮೀನಾಥನ್ ವರದಿ ಜಾರಿ ಮಾಡದ ಬಿಜೆಪಿ: ಸ್ವಾಮೀನಾಥನ್ ವರದಿ ಜಾರಿ ಮಾಡದೆ ರೈತರ ಗೋಳಿಗೆ ಮೋದಿ ಸರಕಾರ ಕಾರಣವಾಗಿದೆ. ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯೂರೋ ವರದಿಯಂತೆ ಕಳೆದ 1 ದಶಕದಲ್ಲಿ ಭಾರತದಲ್ಲಿ 1,00,474 ರೈತರ ಆತ್ಮಹತ್ಯೆ ನಡೆದಿವೆ. ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಗೆ ರೈತರ ಗೋಳು, ಆರ್ತನಾದ ಕೇಳಿಸಿಲ್ಲ, ನೀಡಿದ್ದ ಭರವಸೆಯಂತೆ ಬಿಜೆಪಿ ಸ್ವಾಮೀನಾಥನ್ ವರದಿ ಜಾರಿಗೆ ತರಲೇ ಇಲ್ಲ ಎಂದರು.ರೈತರ ಸಾಲಮನ್ನಾ ಮಾಡಲೇ ಇಲ್ಲ, ಮೋದಿ ಕಳೆದ 10 ವರ್ಷ ಆಡಳಿತ ನಡೆಸಿದರೂ ರೈತರ ಗೋಳಿಗೆ ಸ್ಪಂದಿಸಿಲ್ಲ. ಆದರೆ ಸಿರಿವಂತರ ₹14 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಇವರು ರೈತರಿಗಿಂತ ಸಿರಿವಂತರ ಪರವಾಗಿದ್ದಾರೆಂಬುದಕ್ಕೆ ಇದು ಕನ್ನಡಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರ ರೈತರ ಸಾಲ ಮನ್ನಾ, ಸ್ವಾಮೀನಾಥನ್ ವರದಿ ಜಾರಿಗೆ ಬದ್ಧವೆಂದರು.
ಅಭಿವೃದ್ಧಿಗೆ ₹5 ಸಾವಿರ ಕೋಟಿ ಹಣ ಕೆಕೆಆರ್ಡಿಬಿಗೆ ಮೀಸಲಿಡಲಾಗಿದೆ. ಇದರಡಿಯಲ್ಲಿ ಅಕ್ಷರ, ಅರಣ್ಯ, ಉದ್ಯೋಗ, ಆರೋಗ್ಯ ಅವಿಷ್ಕಾರ ಯೋಜನೆ ಮೂಲಕ ಕಲ್ಯಾಣ ನಾಡಿನ ನಿಜ ಕಲ್ಯಾಣಕ್ಕೆ ಕಾಂಗ್ರೆಸ್ ಬದ್ಧವಾಗಿದೆ. ಆದರೆ ಬಿಜೆಪಿ ಬರೀ ಹೆಸರು ಬದಲಿಸಿದಿದ್ದೇ ಬಂತು, ಕಾಂಗ್ರೆಸ್ ನಿಜ ಕಲ್ಯಾಣಕ್ಕೆ ಮುಂದಾಗಿದೆ. ಅದಕ್ಕೆ ತಕ್ಕಂತೆ ಹಣ ಮಂಜೂರು ಮಾಡಿದೆ ಎಂದರು.
ದೇಶದಲ್ಲೇ ಕರ್ನಾಟಕ, ಕೇರಳ ಹೊರತುಪಡಿಸಿದರೆ ಎಲ್ಲಾ ರಾಜ್ಯಗಳಲ್ಲಿ ಏಮ್ಸ್ ಇವೆ. ಇಲ್ಲಿನ ಇಎಸ್ಐಸಿ ಆಸ್ಪತ್ರೆ ಸಂಕೀರ್ಣವನ್ನೇ ಏಮ್ಸ್ ಆಗಿ ಮೇಲಲ್ದರ್ಜೆಗೇರಿಸುವಂತೆ ಕೋರಲಾಗಿದ್ದರು ಕೇಂದ್ರ ಕ್ಯಾರೆ ಎನ್ನಲಿಲ್ಲ. ಯಾವುದೇ ಖರ್ಚಿಲ್ಲದೆ ಈ ಕೆಲಸ ಮಾಡಬಹುದಿತ್ತು. ಆಗುತ್ತಿಲ್ಲ. ಯಾಕೆದಂರೆ ರಾಜಕೀಯ ಸೇಡಷ್ಟೆ, ಕಲ್ಯಾಣ ನಾಡು ಪ್ರಗತಿ ಹೊಂದಬಾರದು ಎಂಬುದೇ ಅವರ ಹಿಡನ್ ಅಜೆಂಡಾ. ನೀರು, ನೆಲ ಕೊಡುತ್ತೇವೆ, ರಾಯಚೂರಿಗಾದರೂ ಏಮ್ಸ್ ಕೊಡುವಂತೆ ರಾಜ್ಯದ ನಿಯೋಗ ಕೇಂದ್ರಕ್ಕೆ ಕೋರಿಕೊಂಡರೂ ಇಂದಿಗೂ ಈ ಬಗ್ಗೆ ಏನನ್ನೂ ಹೇಳಿಲ್ಲ.ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ 2013-14ರಲ್ಲಿ ಅಂದಿನ ಯುಪಿಎ 2 ಸರಕಾರದಲ್ಲಿ ಮಂಜೂರಾದರೂ ಇಂದಿಗೂ ಕೈಗೂಡಿಲ್ಲ. ಯಾದಗಿರಿ ರೈಲ್ವೆ ಕೋಚ್ ಫ್ಯಾಕ್ಟರಿಯಿಂದ 2 ಸಾವಿರ ಉದ್ಯೋಗ ಕೊಡಬಹುದಿತ್ತು. ಇದು ಕೂಡಾ ನಿಲ್ಲಿಸಲಾಗಿದೆ. ರೈಲ್ವೆ ವಿಭಾಗೀಯ ಕಚೇರಿಯಿಂದಲೂ ಸಾವಿರಾರು ಜನರಿಗೆ ಪ್ರತ್ಯೇಕ- ಪರೋಕ್ಷ ನೌಕರಿ ದೊರಕುತ್ತಿದ್ದವು. ಇವೆಲ್ಲವೂ ನೆನೆಗುದಿಗೆ ಬಿಳಲು ಕೇಂದ್ರದ ರಾಜಕೀಯ ಕಾರಣವೆಂದರು.
ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಶಾಸಕರಾದ ಅಲ್ಲಂಪ್ರಭು ಪಾಟೀಲ್ ನೆಲೋಗಿ, ನೀಲಕಂಠರಾವ ಮೂಲಗೆ, ಈರಣ್ಣ ಝಳಕಿ, ಪಿಡ್ಡಪ್ಪ ನಾಯಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.