ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಸುಧೀರ್ ಶೆಟ್ಟಿ ಕಣ್ಣೂರು ಅವರು ಮೀನುಗಾರಿಕಾ ಪ್ರಕೋಷ್ಠದ ನೂತನ ಪದಾಧಿಕಾರಿಗಳನ್ನು ಘೋಷಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯ ಆರ್ಥಿಕತೆಗೆ ಮೀನುಗಾರರು ಭಾರಿ ಶಕ್ತಿ ನೀಡಿದ್ದಾರೆ. ಇಲ್ಲಿಂದ ವಿದೇಶಕ್ಕೂ ಮೀನು ಹೇರಳ ಪ್ರಮಾಣದಲ್ಲಿ ರಫ್ತಾಗುತ್ತಿದೆ. ಮೊಗವೀರ ಬಂಧುಗಳು ಬಿಜೆಪಿಯ ಶಕ್ತಿಯಾಗಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಬಿಜೆಪಿ ಮೀನುಗಾರಿಕಾ ಪ್ರಕೋಷ್ಠದ ಸಭೆಯಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ನಾಗರಾಜ ಶೆಟ್ಟಿಮಾತನಾಡಿ, ನಾನು ಮೀನುಗಾರಿಕಾ ಸಚಿವನಾಗಿದ್ದ ವೇಳೆ ಮೀನುಗಾರರಿಗೆ ಪರಿಹಾರ ಯೋಜನೆ, ಮೀನು ಮಾರುಕಟ್ಟೆಗಳ ಅಭಿವೃದ್ಧಿ ಸಹಿತ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಮುಂದಿನ ಚುನಾವಣೆ ದೇಶಕ್ಕೆ ದಿಕ್ಸೂಚಿ ನೀಡುವ ಚುನಾವಣೆಯಾಗಿದೆ ಎಂದರು.
ಮೀನುಗಾರಿಕಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ ಮಾತನಾಡಿ, ಬಿಜೆಪಿ ಹಿಂದುತ್ವದ ಪಕ್ಷವಾಗಿದ್ದು, ಹಿಂದುತ್ವದ ಪರ ಹೋರಾಟ ಮಾಡುವ ಮೀನುಗಾರರು ಜನಸಂಘ ಕಾಲದಿಂದಲೂ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬೃಜೇಶ್ ಚೌಟ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ ಸಮುದ್ರ ದೊಡ್ಡ ಆಸ್ತಿಯಾಗಿದೆ. ಹಿಂದುತ್ವ ಹಾಗೂ ರಾಷ್ಟ್ರೀಯತೆ ಬಗ್ಗೆ ಮೊಗವೀರ ಸಮುದಾಯ ವಿಶೇಷ ಒಲವು ಹೊಂದಿದೆ. ಸವಾಲು ಎದುರಿಸುವ ಚಾಕಚಕ್ಯತೆ ಹಾಗೂ ರಾಷ್ಟ್ರ ಮೊದಲು ಎಂಬ ಸೈನಿಕರ ಮಾನಸಿಕತೆ ಮೊಗವೀರ ಸಮುದಾಯದ ಜನರಲ್ಲೂ ಇದೆ ಎಂದರು.
ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಸುಧೀರ್ ಶೆಟ್ಟಿ ಕಣ್ಣೂರು ಅವರು ಮೀನುಗಾರಿಕಾ ಪ್ರಕೋಷ್ಠದ ನೂತನ ಪದಾಧಿಕಾರಿಗಳನ್ನು ಘೋಷಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.