ಗುಲ್ವಾಡಿ ಪ್ರಶಸ್ತಿಗೆ ಮೊಹಮ್ಮದ್ ಪಾಷಾ, ಡಾ. ಮಾಲಗಿತ್ತಿ ಆಯ್ಕೆ

KannadaprabhaNewsNetwork |  
Published : Sep 09, 2025, 01:01 AM IST
08ಅವಾರ್ಡ್‌ | Kannada Prabha

ಸಾರಾಂಶ

2024 ನೇ ಸಾಲಿನ ಪ್ರತಿಷ್ಠಿತ ಸಂತೋಷ ಕುಮಾರ ಗುಲ್ವಾಡಿ ಪ್ರಶಸ್ತಿಗೆ ಸಾಹಿತಿ ಮೊಹಮ್ಮದ್ ರಫೀ ಪಾಷ ಮತ್ತು ಗುಲ್ವಾಡಿ ವೆಂಕಟರಾವ್ ಪ್ರಶಸ್ತಿಗೆ ವಿಮರ್ಶಕಿ ಡಾ. ಧರಣಿದೇವಿ ಮಾಲಗತ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

ಉಡುಪಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಂದಾಪುರದ ಗುಲ್ವಾಡಿ ಟಾಕೀಸ್ ಮತ್ತು ಕೋಟದ ಉಸಿರು ಅಧ್ಯಯನ ಕೇಂದ್ರಗಳು ನೀಡುವ 2024 ನೇ ಸಾಲಿನ ಪ್ರತಿಷ್ಠಿತ ಸಂತೋಷ ಕುಮಾರ ಗುಲ್ವಾಡಿ ಪ್ರಶಸ್ತಿಗೆ ಸಾಹಿತಿ ಮೊಹಮ್ಮದ್ ರಫೀ ಪಾಷ ಮತ್ತು ಗುಲ್ವಾಡಿ ವೆಂಕಟರಾವ್ ಪ್ರಶಸ್ತಿಗೆ ವಿಮರ್ಶಕಿ ಡಾ. ಧರಣಿದೇವಿ ಮಾಲಗತ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು. 13 ರಂದು ಉಡುಪಿಯಲ್ಲಿ ಈ ಪ್ರಶಸ್ತಿಗಳ‍ನ್ನು ಪ್ರದಾನ ಮಾಡಲಾಗುತ್ತದೆ, ಈ ಪ್ರಶಸ್ತಿಗಳು 10 ಸಾವಿರ ರು. ನಗದು ಮತ್ತು ಸ್ಮರಣ ಫಲಕಗಳನ್ನು ಒಳಗೊಂಡಿರುತ್ತದೆ ಎಂದರು.

ಮೊಹಮ್ಮದ್‌ ರಫೀ ಪಾಷ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ವಿಚಾರಗಳ ಬಗ್ಗೆ ಅಪಾರ ಕಳಕಳಿ ಹೊಂದಿರುವ ಹಿರಿಯ ಸಾಹಿತಿ. ಮೊಹಮ್ಮದ ರಫೀ ಪಾಷ ಪ್ರಸ್ತುತ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಉಪ ಆಯುಕ್ತರಾಗಿದ್ದಾರೆ. ಭಾರತೀಯ ನಾಗರೀಕ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆಗಳಿಗೆ ಸೇರಬಯಸುವ ಗ್ರಾಮೀಣ ಅದರಲ್ಲೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ 12ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಸಲಹೆ ಮಾರ್ಗದರ್ಶನ ನೀಡುತ್ತಿದ್ದಾರೆ. 2010 ರಲ್ಲಿ ಕರ್ನಾಟಕ ಆಡಳಿತ ಸೇವೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೊದಲು ದೆಹಲಿ, ಜಮ್ಮು ಮತ್ತು ಕಾಶ್ಮೀರ, ಹೈದ್ರಾಬಾದ್ ಇನ್ನಿತರ ರಾಜ್ಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೂರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಭರವಸೆ ಮೂಡಿಸಿದ್ದಾರೆ. ಅಮೇರಿಕಾದ ಅಕ್ಕ, ಇಂಗ್ಲೆಂಡಿನ ವಿಶ್ವ ಒಕ್ಕಲಿಗರ ವೇದಿಕೆ, ಆಸ್ಟ್ರೇಲಿಯಾದ ಕನ್ನಡ ಕೂಟ, ದುಬೈಯ ಅಂತರರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನ, ದೆಹಲಿ ಕರ್ನಾಟಕ ಸಂಘದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.

ಡಾ. ಧರಣಿದೇವಿ ಮಾಲಗತ್ತಿ: ಕವಿ, ಸಂಶೋಧಕಿ, ವಿಮರ್ಶಕಿಯಾಗಿ ಮಹಿಳಾಪರ ಚಿಂತನೆಗಳ ಮೂಲಕ ಸಹಸ್ರಾರು ಓದುಗರನ್ನ ಹೊಂದಿರುವ ಡಾ. ಧರಣಿದೇವಿ ಮಾಲಗತ್ತಿ ಮೂಲತಃ ಬಂಟ್ವಾಳದವರು. ಅಲ್ಲಿಯೇ ಬಿಕಾಂ ಪದವಿಯ ನಂತರ ಮೈಸೂರು ವಿ.ವಿ.ಯಿಂದ ನಿರ್ವಹಣಾಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದು, ಮಂಗಳೂರು, ಮೈಸೂರು ವಿ.ವಿ.ಗಳಲ್ಲಿ ಉಪನ್ಯಾಸಕರಾಗಿ ಒಂದು ದಶಕ ಕರ್ತವ್ಯ ನಿರ್ವಹಿಸಿದ್ದಾರೆ.

ಮುಂದೆ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ದೇಜಗೌ ಸಾಹಿತ್ಯ ಪ್ರಶಸ್ತಿ, ಧಾರವಾಡದ ದತ್ತಿ ಬಹುಮಾನ, ಗೋರೂರು ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಎಚ್.ನರಸಿಂಹಯ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಸಂದಿವೆ.

ಸುದ್ದಿಗೋಷ್ಠಿಯಲ್ಲಿ ಕಸಾಪದ ಸುಬ್ರಹ್ಮಣ್ಯ ಶೆಟ್ಟಿ, ನರಸಿಂಹಮೂರ್ತಿ ಮತ್ತು ಗುಲ್ವಾಡಿ ಟಾಕೀಸ್‌ನ ಯಾಕೂಬ್ ಖಾದರ್ ಗುಲ್ವಾಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ