ಮಾದಕ ವ್ಯಸನ ಬಳಕೆ ತಡೆಗೆ ನಿಗಾ ವಹಿಸಿ: ಶಾಸಕ ದಿನಕರ ಶೆಟ್ಟಿ

KannadaprabhaNewsNetwork |  
Published : Jul 01, 2025, 12:47 AM IST
ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಅಭಿಯಾನದ ಮುಕ್ತ ಆನ್‌ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ನಾಡುಮಾಸ್ಕೇರಿ ಸರ್ಕಾರಿ ಪ್ರೌಢಶಾಲೆಗೆ ಮೊದಲ ಸ್ಥಾನ ಬಂದಿದ್ದರಿಂದ ಟ್ರೋಫಿ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಶಾಲಾ- ಕಾಲೇಜು ಹಂತದಲ್ಲಿನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆ ತಡೆಗೆ ಜಾಗೃತಿ ಮೂಡಿಸಲು ಶಿಕ್ಷಕರ ಜವಾಬ್ದಾರಿ ಜೊತೆ ಪೊಲೀಸ್ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕು.

ಗೋಕರ್ಣ: ಶಾಲಾ- ಕಾಲೇಜು ಹಂತದಲ್ಲಿನ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆ ತಡೆಗೆ ಜಾಗೃತಿ ಮೂಡಿಸಲು ಶಿಕ್ಷಕರ ಜವಾಬ್ದಾರಿ ಜೊತೆ ಪೊಲೀಸ್ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕು. ಈ ಕಾರ್ಯಕ್ಕೆ ನಾನು ಜೊತೆಯಾಗುತ್ತೇನೆ. ಇದು ಪ್ರವಾಸಿ ತಾಣ ಗೋಕರ್ಣದಿಂದಲೇ ಪ್ರಾರಂಭವಾಗಲಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಅವರು ಭದ್ರಕಾಳಿ ಕಾಲೇಜಿನ ಸಭಾ ಭವನದಲ್ಲಿ ನಡೆದ ಜಿಲ್ಲಾ ಪೊಲೀಸ್, ಗೋಕರ್ಣ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಅಭಿಯಾನದ ಮುಕ್ತ ಆನ್‌ಲೈನ್ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಮಾದಕ ವಸ್ತುಗಳ ವಿರೋಧಿ ದಿನಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿಗೆ ಮಾದಕ ವಸ್ತುಗಳ ಬಳಕೆ ಯುವಜನರಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇದನ್ನು ತಡೆಯಲು ಎಲ್ಲರೂ ಒಂದಾಗಬೇಕು. ಮೊಬೈಲ್‌ ಬಳಕೆಯೂ ವಿದ್ಯಾರ್ಥಿಗಳ ಹಾದಿ ತಪ್ಪಿಸುತ್ತಿದೆ. ಮಾದಕ ವಸ್ತು, ಮೊಬೈಲ್ ಬಳಕೆ ಎರಡು ನಿಷೇಧವಾಗಬೇಕು ಎಂದರು.

ವಿದ್ಯಾ ಸಂಸ್ಥೆಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.

ನಿವೃತ ಎಸ್ಪಿ ಪ್ರಮೋದ ರಾವ್ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ಆಗುವ ಪರಿಣಾಮಗಳನ್ನು ವಿವರಿಸಿ, ಪ್ರವಾಸಿತಾಣದಲ್ಲಿ ತಮ್ಮ ಅಧಿಕಾರ ಅವಧಿಯಲ್ಲಿ ತೆಗೆದುಕೊಂಡ ಕ್ರಮಗಳನ್ನ ವಿವರಿಸಿದರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ಆಡಳಿತ ವೈದ್ಯಾಧಿಕಾರಿ ಮಾತನಾಡಿ, ಮಾದಕ ಪದಾರ್ಧದ ವ್ಯಸನಿಯನ್ನು ಪತ್ತೆ ಹಚ್ಚುವ ಕ್ರಮ ತಿಳಿವಳಿಕೆ ಮೂಲಕ ಮನಪರಿವರ್ತನೆ ಮಾಡುವುದು ಹಾಗೂ ಮಾದಕ ವಸ್ತುಗಳ ವಹಿವಾಟಿನ ಪ್ರಕರಣದಲ್ಲಿ ದಂಧೆಕೋರರು ತಪ್ಪಿಸಿಕೊಳ್ಳುತ್ತಿರುವುದನ್ನು ವಿವರಿಸಿದರು.

ಡಿವೈಎಸ್ಪಿ ಮಹೇಶ ಎಂ. ಕೆ. ಮಾತನಾಡಿ, ಪ್ರವಾಸಿ ತಾಣದಲ್ಲಿ ಈಗಾಗಲೇ ೨೦ಕ್ಕೂ ಹೆಚ್ಚು ಮಾದಕ ವಸ್ತುಗಳ ಬಳಕೆಯ ಕುರಿತು ಪ್ರಕರಣಗಳನ್ನು ದಾಖಲಿಸಿ ಕ್ರಮ ತೆಗೆದುಕೊಂಡಿರುವುದನ್ನು ವಿವರಿಸಿದರು. ಇಂತಹ ಚಟುವಟಿಕೆ ನಿಯಂತ್ರಿಸಲಾಗುತ್ತಿದೆ. ಮಾದಕ ದ್ರವ್ಯಗಳ ದುಷ್ಪರಿಣಾಮದ ಬಗ್ಗೆ ತಿಳಿಸಿ ವಿದ್ಯಾರ್ಥಿ ಜೀವನದಿಂಲೇ ಈ ಬಗ್ಗೆ ಜಾಗೃತಿ ವಹಿಸಬೇಕು ಎಂದರು.

ಕೆನರಾ ಶಿಕ್ಷಣ ಪ್ರಸಾರಕ ಮಂಡಳಿಯ ಕಾರ್ಯದರ್ಶಿ ಜಿ.ಎನ್. ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪಿ.ಐ. ಶ್ರೀಧರ ಎಸ್.ಆರ್, ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಕಾಲೇಜಿನ ಪ್ರಾಚಾರ್ಯ ಎಸ್‌.ಸಿ. ನಾಯ್ಕ, ಪೌಢಶಾಲಾ ಮುಖ್ಯಾಧ್ಯಾಪಕ ಸಿ.ಜಿ. ನಾಯಕ ದೊರೆ, ಪಿಎಸ್ಐ ಖಾದರ್ ಬಾಷಾ, ಶಶಿಧರ ಮಹಾಬಲೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಭಾವಿ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ನಾಡುಮಾಸ್ಕೇರಿ ಗ್ರಾಪಂ ಮಾಜಿ ಅಧ್ಯಕ್ಷ ಹನೀಫ್ ಸಾಬ್ ಉಪಸ್ಥಿತರಿದ್ದರು.

ಉಪನ್ಯಾಸಕಿ ಪಲ್ಲವಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು.

ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ನಾಡುಮಾಸ್ಕೇರಿ ಸರ್ಕಾರಿ ಪ್ರೌಢಶಾಲೆಗೆ ಮೊದಲ ಸ್ಥಾನ ನೀಡಿ ಟ್ರೋಫಿ ನೀಡಲಾಯಿತು. ನಂತರ ಆನಂದಾಶ್ರಮ ಪ್ರೌಢಶಾಲೆ, ಮೂರನೇ ಸ್ಥಾನ ಹೊಸ್ಕೇರಿ ಸರ್ಕಾರಿ ಶಾಲೆ ಪಡೆದುಕೊಂಡಿತು. ನಂತರ ವಿವಿಧ ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಉಳಿದವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಗೋಕರ್ಣ ಪೊಲೀಸ ಠಾಣೆ ಸಿಬ್ಬಂದಿ, ಭದ್ರಕಾಳಿ ಕಾಲೇಜಿನ ಶಿಕ್ಷಕ, ಉಪನ್ಯಾಸ ವೃಂದವರು ಮತ್ತಿತರರು ಸಹಕರಿಸಿದರು. ವಿದ್ಯಾರ್ಥಿಗಳು ಪಾಲಕರು ಊರನಾಗರಿಕರು ಪಾಲ್ಗೊಂಡಿದ್ದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು