ವಿಶ್ವ ಮಲೇರಿಯಾ ದಿನ । ಜಾಗೃತಿ ಜಾಥಾ ಗೆ ಡಿಎಚ್ಒ ಡಾ.ರೇಣುಪ್ರಸಾದ್ ಚಾಲನೆ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಲೇರಿಯಾ ನಿಯಂತ್ರಣದಲ್ಲಿದ್ದು, ಯಾವುದೇ ಪ್ರಕರಣ ಕಂಡುಬಂದಿಲ್ಲ. ಆದ್ದರಿಂದ ಮಲೇರಿಯಾ ಕುರಿತು ಹೆಚ್ಚಿನ ಅರಿವು ಅತ್ಯಗತ್ಯ. ಈ ರೋಗವು ಮಕ್ಕಳು ಹಾಗೂ ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಡಿಹೆಚ್ಒ ಡಾ.ಜಿ.ಪಿ ರೇಣುಪ್ರಸಾದ್ ಹೇಳಿದರು.
ನಗರದ ರಂಗಯ್ಯನ ಬಾಗಿಲು ಸಮೀಪದ ಎಸ್.ಜಿ.ಪ್ಯಾರಾಮೆಡಿಕಲ್ ಕಾಲೇಜ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ "ವಿಶ್ವ ಮಲೇರಿಯಾ ದಿನ "ದ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದಲ್ಲಿ 2025ಕ್ಕೆ ಮಲೇರಿಯಾ ನಿವಾರಣಾ ಗುರಿ ಹೊಂದಲಾಗಿದೆ. ಶೀಘ್ರ ಪತ್ತೆ ಸಂಪೂರ್ಣ ಚಿಕಿತ್ಸೆಯಾದಲ್ಲಿ ಸಾವು-ನೋವು ತಡೆಗಟ್ಟಬಹುದು. ಎಲ್ಲರ ಸಹಭಾಗಿತ್ವದಿಂದ ಮಲೇರಿಯಾ ನಿವಾರಣೆ ಸಾಧ್ಯ ಎಂದರು.
ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಲೇರಿಯಾ ಜಾಥಾ ಹಮ್ಮಿಕೊಂಡಿದ್ದು, ಜಾಥಾವು ನಗರದ ಎಸ್.ಜಿ ಪ್ಯಾರಾ ಮೆಡಿಕಲ್ ಕಾಲೇಜ್ ಆವರಣದಿಂದ ಆರಂಭಗೊಂಡು ಉಚ್ಚಂಗಿಯಲ್ಲಮ್ಮ, ಈಶ್ವರ ದೇವಸ್ಥಾನ ಮಾರ್ಗವಾಗಿ ಕರುವಿನ ಕಟ್ಟೆ ವೃತ್ತದಿಂದ ಪುನಃ ಕಾಲೇಜು ಆವರಣದಲ್ಲಿ ಮುಕ್ತಾಯಗೊಂಡಿತು.
ಈ ವೇಳೆ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶೀ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಚಂದ್ರಶೇಖರ್ ಕಂಬಾಳಿ ಮಠ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಕೀಟ ಶಾಸ್ತ್ರಜ್ಞೆ ಡಾ.ನಂದಿನಿ ಕಡಿ, ಎಸ್.ಜಿ.ಪ್ಯಾರಮೆಡಿಕಲ್ ಕಾಲೇಜ್ ನ ಅಧ್ಯಕ್ಷ ಡಾ.ಶಿವಲಿಂಗಯ್ಯ, ಪ್ರಾಂಶುಪಾಲ ಚಂದ್ರಶೇಖರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.