ಜಾಗರಣೆಗಿಂತ ಪರರ ಸೇವೆಯಿಂದ ಹೆಚ್ಚು ಪುಣ್ಯ ಪ್ರಾಪ್ತಿ: ನವ್ಯಶ್ರೀ ನಾಗೇಶ್

KannadaprabhaNewsNetwork |  
Published : Feb 16, 2026, 03:45 AM IST
ಪೋಟೊ: 15ಎಸ್‌ಎಂಜಿಕೆಪಿ06 | Kannada Prabha

ಸಾರಾಂಶ

ನೊಂದವರು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಪರಶಿವನ ಅನುಗ್ರಹ ಪಡೆಯಬಹುದು. ಮತ್ತೊಬ್ಬರ ಜೀವ ಉಳಿಸುವಂತಹ ರಕ್ತದಾನ ಮಹಾದಾನಗಳಲ್ಲೊಂದು. ಇಂತಹ ದಾನದ ಮೂಲಕ ಶಿವನ ಅನುಗ್ರಹ ಲಭಿಸುತ್ತದೆ. ಶಿವರಾತ್ರಿಯ ಉಪವಾಸ, ಜಾಗರಣೆಗಿಂತ ಹೆಚ್ಚು ಪುಣ್ಯ ಪ್ರಾಪ್ತವಾಗುತ್ತದೆ ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷೆ ನವ್ಯಶ್ರೀ ನಾಗೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೊಂದವರು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಪರಶಿವನ ಅನುಗ್ರಹ ಪಡೆಯಬಹುದು. ಮತ್ತೊಬ್ಬರ ಜೀವ ಉಳಿಸುವಂತಹ ರಕ್ತದಾನ ಮಹಾದಾನಗಳಲ್ಲೊಂದು. ಇಂತಹ ದಾನದ ಮೂಲಕ ಶಿವನ ಅನುಗ್ರಹ ಲಭಿಸುತ್ತದೆ. ಶಿವರಾತ್ರಿಯ ಉಪವಾಸ, ಜಾಗರಣೆಗಿಂತ ಹೆಚ್ಚು ಪುಣ್ಯ ಪ್ರಾಪ್ತವಾಗುತ್ತದೆ ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷೆ ನವ್ಯಶ್ರೀ ನಾಗೇಶ್ ಹೇಳಿದರು.

ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್‌ ವತಿಯಿಂದ ತಾಲೂಕಿನ ಅಬ್ಬಲಗೆರೆಯ ಈಶ್ವರವನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಶಿವರಾತ್ರಿಯಂದು ಓಂ ನಮಃ ಶಿವಾಯ ಎಂದು ಜಪ-ತಪ, ಪೂಜೆ, ಭಜನೆ, ಆರಾಧನೆ, ಉಪವಾಸ, ಜಾಗರಣೆ ಮಾಡುವ ಮೂಲಕ ಶಿವನ ಅನುಗ್ರಹಕ್ಕೆ ಪ್ರಾಪ್ತರಾಗಲು, ಪುಣ್ಯ ಸಂಪಾದಿಸಲು ಪೂಜಾ ಕೈಂಕರ್ಯವನ್ನು ಕೈಗೊಳ್ಳಲಾಗುತ್ತದೆ. ಪರಿಸರವೇ ಪರಮೇಶ್ವರ ಎಂಬ ಜಾಗೃತಿಯ ಪರ್ವದೊಂದಿಗೆ ಶಿವರಾತ್ರಿ ಪ್ರಯುಕ್ತ ರಕ್ತದಾನ ಮಾಡಬೇಕೆಂದು ಕರೆ ನೀಡಿದರು.

ಸಕಾಲದಲ್ಲಿ ರಕ್ತ ಸಿಗದೆ ಸಾಕಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂದು ರಕ್ತದ ಕೊರತೆ ಸಾಕಷ್ಟು ಎದ್ದು ಕಾಣುತ್ತಿದೆ. ಯುವಕರು ರಕ್ತದಾನ ಮಾಡಲು ಜಾಗೃತಿಯ ಕೊರತೆ ಇದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಚೈತನ್ಯ ಮೂಡುತ್ತದೆ ಹಾಗೂ ಸದಾಕಾಲ ಆರೋಗ್ಯವಂತರಾಗಿ ಇರುತ್ತಾರೆ ಎಂದು ತಿಳಿಸಿದರು.

ಅಪಘಾತ, ಆಪರೇಷನ್, ಹೆರಿಗೆ, ರಕ್ತಸ್ರಾವ ಮತ್ತಿತರೆ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ರಕ್ತದಾನಿಗಳು ದೊರೆಯದಿದ್ದಲ್ಲಿ ಪ್ರಾಣಕ್ಕೆ ಕುತ್ತು ಬರುವ ಅಥವಾ ಪ್ರಾಣವೇ ಹೊರಟು ಹೋಗುವಂತಹ ಸಂದರ್ಭಗಳೂ ಇರುತ್ತವೆ. ಇದನ್ನು ತಪ್ಪಿಸಲು ಅಗತ್ಯವಾದ ರಕ್ತ ಸಂಗ್ರಹ ಅತಿಮುಖ್ಯ ಎಂದರು.

ಕೇವಲ ವಿಭೂತಿ ಧರಿಸಿ ಓಂ ನಮಃ ಶಿವಾಯ ಎನ್ನುವುದಕ್ಕಿಂತ ಪ್ರಕೃತಿಯ ಮಡಿಲಲ್ಲಿ ಪ್ರತಿಯೊಂದು ಕಣದಲ್ಲೂ ಇರುವ ಶಿವತತ್ವವನ್ನು ಅನುಭವಿಸುವುದೇ ನಿಜವಾದ ಪೂಜೆ. ಈಶ್ವರ ಎಂದರೆ ಎಲ್ಲೋ ದೂರದ ಲೋಕದಲ್ಲಿರುವ ಅಸ್ತಿತ್ವವಲ್ಲ, ಜಗತ್ತಿನ ಪ್ರತಿಯೊಂದು ಕಣದಲ್ಲೂ ವ್ಯಾಪಿಸಿರುವ ಚೈತನ್ಯ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್ ಅವರು ಮಾತನಾಡಿ ಶಿವಮೊಗ್ಗದಲ್ಲಿ ಸಾಕಷ್ಟು ರಕ್ತದಾನಿಗಳಿದ್ದರೂ ಸಹ ರಕ್ತದ ಕೊರತೆ ಉಂಟಾಗುತ್ತದೆ. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ರಕ್ತದಾನ ಮಾಡುವುದರಿಂದ ದೀರ್ಘಾಯುಷ್ಯ ಉಳ್ಳವರಾಗುತ್ತಾರೆ ಹಾಗೂ ನಮ್ಮ ದೇಹದಲ್ಲಿ ಗೊತ್ತಿಲ್ಲದೆ ಇರುವಂತಹ ಯಾವುದಾದರೂ ಕಾಯಿಲೆಗಳಿದ್ದರೆ ಈ ರಕ್ತದಾನದಿಂದ ತಿಳಿಯುತ್ತದೆ ಎಂದು ಹೇಳಿದರು.

120 ಬಾರಿ ರಕ್ತದಾನ ಮಾಡಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಧರಣೇಂದ್ರ ದಿನಕರ್, ಈ ಶಿವರಾತ್ರಿಯ ಪವಿತ್ರ ದಿನದಂದು ರಕ್ತದಾನ ಮಾಡಿದರೆ ತೃಪ್ತಿ ಸಿಗುವುದರ ಜತೆಗೆ ನಾಲ್ಕು ಜನರ ಪ್ರಾಣ ಉಳಿಸಿದ ಫಲ ನಮಗೆ ದೊರೆಯುತ್ತದೆ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಆರ್.ಮನೋಹರ್, ಆರತಿ ತಿವಾರಿ, ಸಂತೋಷ್ ಎಲಿಗಾರ್, ನಾಗರಾಜ್ ಶೆಟ್ಟರ್, ಪಿ. ಪ್ರದೀಪ್, ಎಸ್.ಸುಬ್ರಹ್ಮಣ್ಯ, ವಿಜಯಕುಮಾರ್, ಲಕ್ಷ್ಮಿ, ಡಾ.ದಿನಕರ್, ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್‌ನ ಶಶಿಕಲಾ ನಾಗೇಶ್, ಶರತ್, ಶರಣ್ಯ ರಕ್ತದಾನಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವ ಸ್ಮರಣೆಯಿಂದ ಮನದ ಅಂಧಕಾರ ದೂರ: ಡಾ.ಕೇದಾರಲಿಂಗ ಶ್ರೀ
ಸಮಾಜದ ಏಳಿಗೆಗೆ ಶ್ರಮಿಸಿದ ಸಂತ ಸೇವಾಲಾಲ್‌: ಅಭಿಷೇಕ್‌