ಒಂದೇ ತಿಂಗಳಲ್ಲಿ 1500ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣ

KannadaprabhaNewsNetwork |  
Published : Feb 06, 2026, 02:00 AM IST
5ಡಿಡಬ್ಲೂಡಿ1,2 | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ 2026ರ ಜನವರಿ 1ರಿಂದ ಫೆ. 2ರ ವರೆಗೆ ಅಂದರೆ ಬರೀ 33 ದಿನಗಳಲ್ಲಿ ಬರೋಬ್ಬರಿ 1552 ನಾಯಿ ಕಡಿತ ಪ್ರಕರಣಗಳಾಗಿವೆ. ಹಾಗೆಯೇ, ಕಳೆದ 2025ರಲ್ಲಿ ಜಿಲ್ಲೆಯಲ್ಲಿ ಒಟ್ಟು 13,433 ನಾಯಿ ಕಡಿತಗಳಾಗಿವೆ.

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ 2026ರ ಜನವರಿ 1ರಿಂದ ಫೆ. 2ರ ವರೆಗೆ ಅಂದರೆ ಬರೀ 33 ದಿನಗಳಲ್ಲಿ ಬರೋಬ್ಬರಿ 1552 ನಾಯಿ ಕಡಿತ ಪ್ರಕರಣಗಳಾಗಿವೆ. ಹಾಗೆಯೇ, ಕಳೆದ 2025ರಲ್ಲಿ ಜಿಲ್ಲೆಯಲ್ಲಿ ಒಟ್ಟು 13,433 ನಾಯಿ ಕಡಿತಗಳಾಗಿವೆ..!

ಅದೃಷ್ಟವಶಾತ್‌ 2022ರಿಂದ 2025ರ ವರೆಗೆ ಯಾವುದೇ ರೇಬಿಸ್ ಸಾವಿನ ಪ್ರಕರಣಗಳು ಸಂಭವಿಸಿಲ್ಲ. 2025ರ ಡಿಸೆಂಬರ್‌ನಲ್ಲಿ ಒಂದು ಸಂಶಯಾಸ್ಪದ ರೇಬೀಸ್ ಪ್ರಕರಣ ವರದಿಯಾಗಿದ್ದು, ಈ ಕುರಿತು ಜಿಲ್ಲಾಡಳಿತ ವೈದ್ಯಕೀಯ ವರದಿ ನಿರೀಕ್ಷಿಸುತ್ತಿದೆ.

ಇತ್ತೀಚೆಗೆ ಧಾರವಾಡಲ್ಲಿ ಹುಚ್ಚು ನಾಯಿ ಕಡಿತದಿಂದ ಒಂಭತ್ತು ಮಂದಿ ಗಾಯಗೊಂಡರು. ಎರಡ್ಮೂರು ದಿನಗಳ ಹಿಂದಷ್ಟೇ ಮೂರು ವರ್ಷದ ಮಗುವಿನ ಕಿವಿ, ತಲೆಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿತ್ತು. ಈ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ (ಎಬಿಸಿ ಮತ್ತು ಎಆರ್‌ವಿ)ದ ಸಭೆ ಮಾಡಿದಾಗ ಈ ಅಂಕಿ ಅಂಶಗಳು ಹೊರ ಬಂದಿವೆ.

ಕ್ರಮ ಕೈಗೊಳ್ಳಲು ಸೂಚನೆ

ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಕಡಿತ ಪ್ರಕರಣಗಳು ಹೆಚ್ಚಾಗಿದ್ದು, ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಿಸಿದ ಇಲಾಖೆಗಳು ಮುಂಜಾಗ್ರತಾ ಕ್ರಮ ಕೈಗೊಂಡು ಬೀದಿ ನಾಯಿಗಳನ್ನು ನಿಯಂತ್ರಿಸಬೇಕು. ಎಚ್ಚರಿಕೆ ಕ್ರಮವಾಗಿ ನಾಯಿ ಕಡಿತ ಪ್ರಕರಣಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕು. ಪ್ರತಿ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರಗಳಲ್ಲಿ ಹತ್ತು ಎ.ಆರ್.ವಿ. ಲಸಿಕೆ ಮತ್ತು ಐದು ಆರ್.ಐ.ಜಿ. ಲಸಿಕೆ ಮತ್ತು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 100 ಎ.ಆರ್.ವಿ. ಹಾಗೂ ಆರ್.ಐ.ಜಿ 15 ಲಸಿಕೆ, ಜಿಲ್ಲಾ ಆಸ್ಪತ್ರೆಯಲ್ಲಿ 1,005 ಎ.ಆರ್.ವಿ ಹಾಗೂ 3000 ಆರ್.ಐ.ಜಿ ಲಸಿಕೆಗಳನ್ನು ಇಡಲಾಗಿದೆ ಎಂದು ಸಭೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಪ್ರಸ್ತಾಪಿಸಿದರು.

ಜಿಲ್ಲೆಯ ಪ್ರತಿ ಪಟ್ಟಣ ಹಾಗೂ ಗ್ರಾಮಗಳಲ್ಲಿ ಜನಜಾಗೃತಿ ಆಗಬೇಕೆಂದ ಅವರು, ಶೇ. 50ರಷ್ಟು ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಶ್ವಾನ ಪ್ರದರ್ಶನ ಆಯೋಜಿಸುವ ಮೂಲಕ ಬೀದಿ ನಾಯಿಗಳ ಮರಿಗಳನ್ನು ಆಸಕ್ತ ನಾಗರಿಕರಿಗೆ ದತ್ತು ನೀಡಿ, ಹಸ್ತಾಂತರಿಸುವಂತೆ ಸಲಹೆ ನೀಡಿದರು.

ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಎಸ್.ವಿ. ಸಂತಿ, ಜಿಲ್ಲೆಯ ಸುಮಾರು 40 ಸಾವಿರ ಬೀದಿ ನಾಯಿಗಳನ್ನು ನಿಯಂತ್ರಿಸುವ ಅಗತ್ಯತೆ ತಿಳಿಸಿ, ಸಂತಾನ ಹರಣ ಶಸ್ತ್ರ ಚಿಕಿತ್ಸೆ ಹಾಗೂ ರೇಬಿಸ್ ರೋಗದ ವಿರುದ್ಧ ಲಸಿಕೆ ಹಾಕುವುದು ಏಕೈಕ ಪ್ರಮಾಣಿಕೃತ ಮಾರ್ಗ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಮಾತನಾಡಿ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಎಬಿಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 4,162 ಹಾಗೂ ಅಳ್ನಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 129 ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆಯಾಗಿದೆ. 5,02 ಬೀದಿನಾಯಿಗಳಿಗೆ ಪಶುಪಾಲನ ಇಲಾಖೆಯ ಸಹಯೋಗದೊಂದಿಗೆ ರೇಬಿಸ್ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಶಿವಳ್ಳಿಯಲ್ಲಿ ಹೊಸ ಎಬಿಸಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಎರಡು ಕೋಟಿ ಅನುದಾನದಲ್ಲಿ ಸುಮಾರು 12,000 ಬೀದಿನಾಯಿಗಳನ್ನು ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎಂ.ಹೊನಕೇರಿ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ಪಶು ಪಾಲನಾ ಇಲಾಖೆ, ತಾಪಂ ಅಧಿಕಾರಿಗಳಿದ್ದರು. ತಿಂಗಳಲ್ಲಿ ಕ್ರಮ ಆಗಲಿ

ಮುಂದಿನ ಒಂದು ವಾರದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ಹಾಗೂ ಸಾಕು ನಾಯಿಗಳ ಸಮೀಕ್ಷೆ ಮಾಡಿ, ಪಶು ಪಾಲನಾ ಇಲಾಖೆಗೆ ವರದಿ ಸಲ್ಲಿಸಬೇಕು. ನಾಯಿ ಕಡಿತ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡಬೇಕು ಎಂದು ಅಪರಜಿಲ್ಲಾಧಿಕಾರಿ ಭುವನೇಶ ಪಾಟೀಲ ಹೇಳಿದ್ದಾರೆ.2025ರಲ್ಲಿ ನಾಯಿ ಕಡಿತದ ಪ್ರಕರಣಗಳು

ತಾಲೂಕು ಸಂಖ್ಯೆ

ಧಾರವಾಡ 1399

ಹುಬ್ಬಳ್ಳಿ 719

ಹು-ಧಾ ಶಹರ 7256

ಕಲಘಟಗಿ 1310

ಕುಂದಗೋಳ 1194

ನವಲಗುಂದ 1555

-----------------------

ಒಟ್ಟು 13433

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಬಾಂಗ್ಲಾದೇಶಿಯರ ಪತ್ತೆಗೆ ರಾಜ್ಯಾದ್ಯಂತ ಬೇಟೆ
17ನೇ ಬಜೆಟ್‌ಗೆ ಸಿದ್ದರಾಮಯ್ಯ ಸಿದ್ಧತೆ : 10 ಇಲಾಖೆ ಸಭೆ