ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ವೇಳೆ ನಾಗಮಂಗಲ ಗಲಭೆ: 25 ಕೋಟಿಗೂ ಹೆಚ್ಚು ಹಾನಿ!

KannadaprabhaNewsNetwork |  
Published : Sep 13, 2024, 01:44 AM ISTUpdated : Sep 13, 2024, 12:05 PM IST
ನಾಗಮಂಗಲ | Kannada Prabha

ಸಾರಾಂಶ

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ವೇಳೆ ಬುಧವಾರ ರಾತ್ರಿ ನಡೆದ ಗಲಭೆಯಲ್ಲಿ 20ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿಯಾಗಿದ್ದು, 6 ಅಂಗಡಿಗಳು ಸಂಪೂರ್ಣ ಭಸ್ಮವಾಗಿವೆ.

 ನಾಗಮಂಗಲ : ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ವೇಳೆ ಬುಧವಾರ ರಾತ್ರಿ ನಡೆದ ಗಲಭೆಯಲ್ಲಿ 20ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿಯಾಗಿದ್ದು, 6 ಅಂಗಡಿಗಳು ಸಂಪೂರ್ಣ ಭಸ್ಮವಾಗಿವೆ. 8 ಬೈಕ್‌ಗಳು ಬೆಂಕಿಗಾಹುತಿಯಾಗಿದ್ದು, 25 ಕೋಟಿ ರು.ಗೂ ಹೆಚ್ಚು ನಷ್ಟವಾಗಿದೆ.

ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದ ಅನ್ಯಕೋಮಿನ ಯುವಕರು, ನಂತರ ಪೆಟ್ರೋಲ್ ಬಾಂಬ್ ತೂರಿ ಅಂಗಡಿ, ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದರು. ಸಿಕ್ಕ ಸಿಕ್ಕ ಕಾರು, ಬೈಕ್‌ಗಳನ್ನು ಪುಡಿ, ಪುಡಿ ಮಾಡಿದ್ದರು. ಕಿಡಿಗೇಡಿಗಳ ಕೃತ್ಯಕ್ಕೆ ನಾಗಮಂಗಲ ಹೊತ್ತಿ ಉರಿಯಿತು. ಪರಿಸ್ಥಿತಿ ಶಾಂತಗೊಂಡ ಬಳಿಕವೂ ಒಂದರ ಬಳಿಕ ಮತ್ತೊಂದು ಅಂಗಡಿಗೆ ಬೆಂಕಿ ಹಚ್ಚಲಾಯಿತು.

ಗಲಭೆ ವೇಳೆ, ಪಟ್ಟಣದ ಸಾಧನ ಟೆಕ್ಸ್‌ಟೈಲ್ಸ್‌ನಲ್ಲಿದ್ದ 2 ಕೋಟಿಗೂ ಹೆಚ್ಚು ಮೌಲ್ಯದ ಬಟ್ಟೆಗಳು, ಮುಜೀಬ್‌ ಎಂಬುವರ ಮಾಲಿಕತ್ವದ ಪಾತ್ರೆ ಅಂಗಡಿಯಲ್ಲಿ 25 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೆ, ಶ್ರೀನಿವಾಸ ಹಾರ್ಡ್‌ವೇರ್ ಮತ್ತು ಜಯರಾಮೇಗೌಡ ಸಬ್‌ ಮರ್ಸಿಬಲ್ಸ್‌ನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಪಂಪ್, ಮೋಟಾರ್‌ಗಳು, ಪಾತ್ರೆ, ಹಣ್ಣು, ಚಪ್ಪಲಿ ಮತ್ತು ಅಲಂಕಾರಿಕ ವಸ್ತುಗಳಿದ್ದ ಅಂಗಡಿಗಳು, ಕಾಫಿ-ಟೀ ಅಂಗಡಿಗಳು, ಗ್ಯಾರೇಜ್, ಪಂಚರ್‌ ಶಾಪ್ ಸೇರಿ 20ಕ್ಕೂ ಹೆಚ್ಚು ಅಂಗಡಿಗಳು ಹಾಗೂ ರಸ್ತೆ ಬದಿ ನಿಲ್ಲಿಸಿದ್ದ 8 ಬೈಕ್‌ಗಳು ಸುಟ್ಟು ಭಸ್ಮವಾಗಿವೆ. 6 ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಯ ಜ್ವಾಲೆಗೆ ಪಟ್ಟಣದ ರಸ್ತೆಗಳು ಕಪ್ಪಾಗಿ ಹೋಗಿವೆ.ಮೈಸೂರು ರಸ್ತೆಯಲ್ಲಿರುವ ಬಜಾಜ್ ಶೋರೂಂನ ಮುಂಭಾಗ ಅಳವಡಿಸಿದ್ದ ದೊಡ್ಡ, ದೊಡ್ಡ ಗಾಜುಗಳನ್ನು ಧ್ವಂಸಗೊಳಿಸಿ, ಸಿಸಿ ಕ್ಯಾಮರಾ ನಾಶಪಡಿಸಲಾಗಿದೆ. ಮಾರಾಟಕ್ಕಿಟ್ಟಿದ್ದ ಲಕ್ಷಾಂತರ ರು. ಮೌಲ್ಯದ 8 ಹೊಸ ಬೈಕ್‌ಗಳನ್ನು ಕದ್ದೊಯ್ಯಲಾಗಿದೆ. ಅಲ್ಲದೆ, ಶೋಂ ರೂಂನಲ್ಲೇ ಒಂದು ಬೈಕ್‌ ಅನ್ನು ಜಖಂಗೊಳಿಸಲಾಗಿದೆ.  

ಬೇಕರಿಗಳಲ್ಲಿ ಲೂಟಿ!

ಬೇಕರಿ, ದಿನಸಿ ಸೇರಿ ಹಲವು ಅಂಗಡಿ ಮುಂಗಟ್ಟುಗಳ ಬಾಗಿಲುಗಳು ಕಿಡಿಗೇಡಿಗಳು ನಡೆಸಿದ ದಾಂಧಲೆಯಿಂದ ಜಖಂಗೊಂಡಿವೆ. ಬುಧವಾರ ತಡರಾತ್ರಿ 12 ಗಂಟೆವರೆಗೂ ಪಟ್ಟಣದಲ್ಲಿ ಬೆಂಕಿ ಹೊತ್ತಿ ಉರಿಯಿತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿ ನಂದಿಸಿದರು. ಪೊಲೀಸರು ಇಡೀ ರಾತ್ರಿ ಪಟ್ಟಣ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲಿ ಗಸ್ತು ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್