- ದಾವಣಗೆರೆ ಲೋಕಸಭಾ ಕ್ಷೇತ್ರ ಸಮಗ್ರ ಅಭಿವೃದ್ಧಿ ನನ್ನ ಸಂಕಲ್ಪ, ಮತದಾರರೇ ನನಗೆ ಗ್ಯಾರಂಟಿ: ವಿನಯಕುಮಾರ
ದಾವಣಗೆರೆ ಕ್ಷೇತ್ರದ ಸುಮಾರು 300ಕ್ಕೂ ಹೆಚ್ಚು ಹಳ್ಳಿಗಳಿಗೆ ಇಂದಿಗೂ ಬಸ್ಸುಗಳ ಸೇವೆಯೇ ಇಲ್ಲ. 3 ದಶಕಗಳ ಕಾಲ ಅಧಿಕಾರ ಅನುಭವಿಸಿದವರು, ಜಿಲ್ಲೆ ಆಡಳಿತ ಚುಕ್ಕಾಣಿ ಹಿಡಿದವರು ಏಕೆ ಬಸ್ಸು ಸೌಕರ್ಯ ಕಲ್ಪಿಸಿಲ್ಲವೆಂದು ಜನತೆ ಕೇಳಬೇಕು ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಹೇಳಿದರು.
ಚನ್ನಗಿರಿ ತಾಲೂಕಿನ ಮರಡಿ, ತಣಿಗೆರೆ ಗ್ರಾಮಗಳಲ್ಲಿ ಮಂಗಳವಾರ ರೋಡ್ ಶೋದಲ್ಲಿ ಗ್ರಾಮಸ್ಥರು, ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರ ಅಭಿವೃದ್ಧಿ ಮಾಡದ, ಜನರಿಗೆ ಸ್ಪಂದಿಸದ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದರು.ಸ್ವಾಭಿಮಾನಿಯಾಗಿ ಸ್ಪರ್ಧಿಸಿದ ತಮಗೆ ಮತ ನೀಡಿ, ಸೇವೆಗೆ ಅವಕಾಶ ಮಾಡಿಕೊಡಿ. ತಮಗೊಮ್ಮೆ ಅವಕಾಶ ನೀಡಿದರೆ, ಶಿಕ್ಷಣ, ಉದ್ಯೋಗ ಸೇರಿ ಎಲ್ಲ ಕ್ಷೇತ್ರಗಳಲ್ಲೂ ದಾವಣಗೆಯಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡಿ ತೋರಿಸುತ್ತೇನೆ. ಹಳ್ಳಿಗಳಿಗೆ ಬಸ್ಸು ಇಲ್ಲದೇ ಸಾವಿರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜು ಶಿಕ್ಷಣದಿಂಣದ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಮೊದಲು ಬಸ್ಸು ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಇಡೀ ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ದೊಡ್ಡ ಕನಸು ಕಂಡಿದ್ದೇನೆ. ಕ್ಷೇತ್ರದ ಯುವಜನರು, ಮಕ್ಕಳು, ಜನತೆಗೆ ಒಳ್ಳೆಯದಾಗಬೇಕು. ಯುವಕರಿಗೆ ಉದ್ಯೋಗಾವಕಾಶ ಸಿಗಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿ, ಇಬ್ಬರನ್ನೂ ಸೋಲಿಸಲು ಸ್ವಾಭಿಮಾನಿಯಾಗಿ ಸ್ಪರ್ಧಿಸಲು ಗೆಲುವಿಗಾಗಿ ಹೋರಾಟ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ನೀವೆಲ್ಲರೂ ಮನಸ್ಸು ಮಾಡಿದರೆ ಒಬ್ಬೊಬ್ಬರೂ ಕನಿಷ್ಠ 200-300 ಮತ ಹಾಕಿಸಬಹುದು. ಮುಂದೆ ಒಳ್ಳೆಯ ದಿನಗಳು ಬರಲಿವೆ. ಅದಕ್ಕಾಗಿ ನಾನು ನಿಮ್ಮೆಲ್ಲರ ಪರ ನಿಲ್ಲುತ್ತೇವೆ ಎಂದರು.
- - - ಬಾಕ್ಸ್
ಹಳ್ಳಿಗಳಲ್ಲಿ ಇದುವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ, ಮುಂದೆಯೂ ಆಗುವುದಿಲ್ಲ ಎಂದು ಜನರಿಗೂ ಅರ್ಥವಾಗಿದೆ. ಅಭಿವೃದ್ಧಿ ಮಾಡುವ ಮನಸ್ಸಿಲ್ಲದಿದ್ದರೂ ಎರಡೂ ಪಕ್ಷಗಳು ತನ್ನ ಮನೆತನಕ್ಕೆ ಟಿಕೆಟ್ ತಂದಿದ್ದು ತಮ್ಮ ತನ್ನ ಆಸ್ತಿ ಉಳಿಸಿಕೊಳ್ಳಲು. 8 ವಿಧಾನಸಭಾ ಕ್ಷೇತ್ರಗಳಲ್ಲೂ ದೊಡ್ಡ ಕೈಗಾರಿಕೆಗಳಿಲ್ಲ, ಅತ್ಯುನ್ನತ ವಿದ್ಯಾ ಸಂಸ್ಥೆಗಳಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ವಾಗ್ದಾಳಿ ನಡೆಸಿ, ಮತಯಾಚನೆ ಮಾಡಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಚನ್ನಗಿರಿ ಕ್ಷೇತ್ರದ ತಣಿಗೆರೆ ಮರಡಿ ಗ್ರಾಮಗಳಲ್ಲಿ ಮತಯಾಚಿಸಿದರು.