ಕನ್ನಡಪ್ರಭ ವಾರ್ತೆ ಚಡಚಣ
ತಾಲೂಕಿನ ದಸೂರ ಗ್ರಾಮದಲ್ಲಿ ಗ್ರಾಮಸ್ಥರು ಮೂಲಸೌಕರ್ಯಕ್ಕೆ ಆಗ್ರಹಿಸಿ ಕೆಲ ಗಂಟೆಗಳ ಕಾಲ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು ಬಸ್ ಸೌಲಭ್ಯ, ರಸ್ತೆ ಅಭಿವೃದ್ಧಿಯಾಗುವವರೆಗೆ ಮತದಾನ ಬಹಿಷ್ಕಾರ ಮಾಡುವುದಾಗಿ ಪಟ್ಟು ಹಿಡಿದಿದ್ದರು. ಸುದ್ದಿ ತಿಳಿದು ತಹಸೀಲ್ದಾರ್ ರಾಜೇಶ ಬುರ್ಲಿ ಹಾಗೂ ಅವರ ತಂಡದೊಂದಿಗೆ ಗ್ರಾಮಕ್ಕೆ ತೆರಳಿ ಗ್ರಾಮದ ಮುಖಂಡರ ಜೊತೆಯಲ್ಲಿ ಮಾತುಕತೆ ಮಾಡಿ ಅವರ ಬೇಡಿಕೆ ನ್ಯಾಯಯುತವಾದದ್ದು, ಈ ಸಂದರ್ಭದಲ್ಲಿ ನೀತಿಸಂಹಿತೆ ಇರುವುದರಿಂದ ಯಾವುದೇ ಕೆಲಸ ಕಾರ್ಯ ಮಾಡುವಂತಿಲ್ಲ. ಆದ್ದರಿಂದ ಮತದಾನ ಬಹಿಷ್ಕಾರ ಸೂಕ್ತವಲ್ಲ ಎಂದು ತಿಳಿಹೇಳಿ ಮತದಾನ ಮಾಡುವಂತೆ ಮನವಿ ಮಾಡಿದ ಪ್ರಯುಕ್ತ ಗ್ರಾಮಸ್ಥರು 8.30 ವೇಳೆಗೆ ಮರು ಮತದಾನ ಮಾಡಲು ಪ್ರಾರಂಭಿಸಿದರು.
ಶಾಂತಿಯುತ ಮತದಾನ:ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮತದಾನ ಶಾಂತಿಯುತವಾಯಿತು. ಯಾವುದೇ ಕೇಂದ್ರದಲ್ಲಿ ಮತಯಂತ್ರ ತೊಂದರೆಯಾಗದೇ ಸುಸೂತ್ರವಾಗಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭದಲ್ಲಿ ಏರಿಕೆ ಕಂಡಿತ್ತು. ಬಳಿಕ ಮಧ್ನಾಹ್ನದ ಹೊತ್ತಿಗೆ ಮಂಧಗತಿಯಲ್ಲಿತ್ತು. ಇನ್ನೂ ಬಹುತೇಕ ಎಲ್ಲ ಮತಗಟ್ಟೆಗಳಲ್ಲೂ ಇದೇ ವಾತಾವರಣ ಇತ್ತು. ಸುಡು ಬಿಸಿಲನ್ನು ಲೆಕ್ಕಿಸದೇ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಸಂಜೆ ಹೊತ್ತಿಗೆ ಮತದಾನ ಏರಿಕೆ ಕಂಡಿತ್ತು.
ತಾಲೂಕಿನ ಶಿರಾಡೋಣ ಗ್ರಾಮದಲ್ಲಿ 105 ವಯಸ್ಸಿನ ಅಜ್ಜಿ ನಡೆಯುತ್ತಾ ಬಂದು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ವಿಶೇಷವಾಗಿತ್ತು. ಅಜ್ಜಿಯ ಉತ್ಸಾಹ ಯುವಕರಿಗೆ ಮಾದರಿಯಾಗುವಂತಿತ್ತು.
ಮತಗಟ್ಟೆಯಲ್ಲಿ ಮತದಾನಕ್ಕಾಗಿ ಬಂದ ಮತದಾರರಿಗೆ, ತಣ್ಣನೆ ಕುಡಿವ ನೀರು, ಶೌಚಾಲಯ, ಆರೋಗ್ಯ ಚಿಕಿತ್ಸೆ ಸೇರಿದಂತೆ ಹಲವು ರೀತಿಯ ವ್ಯವಸ್ಥೆಗಳು ಉಚಿತವಾಗಿ ಕಲ್ಪಿಸಿದ್ದು ಮತದಾರರನ್ನು ಆಕರ್ಷಿಸಿವಂತಿತ್ತು.