ಹರಿಹರ: ಜಿಲ್ಲೆಯ ವಿದ್ಯಾರ್ಥಿಗಳಿಗೆ ಐಎಎಸ್ ಐಪಿಎಸ್ ಬ್ಯಾಂಕಿಂಗ್ ಹುದ್ದೆಗಳಿಗೆ ಎಸ್ಎಸ್ ಟ್ರಸ್ಟ್ ಇಂದ ಉಚಿತ ತರಬೇತಿ ನೀಡಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ರಾಜನಹಳ್ಳಿಯ ವಾಲ್ಮೀಕಿ ಜಾತ್ರೆ-2025ರ ಅಂಗವಾಗಿ ಶನಿವಾರ ಬೆಳಗ್ಗೆ ಮಹರ್ಷಿ ವಾಲ್ಮೀಕಿ ಜೀನವಾಧಾರಿತ ಫಲಪುಷ್ಪ ಪ್ರದರ್ಶನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಮಾರ್ಚ್ ತಿಂಗಳಲ್ಲಿ ದಾವಣಗೆರೆಯ ಬಿಐಟಿ ಹಾಗೂ ಎಂಬಿಎ ಕಾಲೇಜುಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಆಯ್ದ 1500 ವಿದ್ಯಾರ್ಥಿಗಳು ಉಪಯೋಗವನ್ನು ಪಡೆಯಬಹುದು ಎಂದರು.
ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಸಿ ಮಾತನಾಡಿ, ಸಮಾಜದ ಸಹಕಾರ ಹಾಗೂ ಜನರ ಆಶೀರ್ವಾದದ ಹಿನ್ನೆಲೆ ಸಂಸದೆಯಾಗಿ ಆಯ್ಕೆಯಾಗಿದ್ದೇನೆ. ತಂದೆಯಂತೆ ಸಾರ್ವಜನಿಕರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅವರ ಹೆಸರನ್ನು ಉಳಿಸುತ್ತೇನೆ. ಸಮಾಜದ ಮಹಿಳೆಯರು ಕೇವಲ ಶೈಕ್ಷಣಿಕವಾಗಿ ಅಲ್ಲದೆ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬಂದಲ್ಲಿ ಇಂಥಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಮಠದ ಯಾವುದೇ ಕಾರ್ಯಕ್ರಮಗಳಿಗೂ ಸಹಕಾರ ಸದಾ ಇರುತ್ತೆ ಎಂದರು.