ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಕರಾವಳಿ ಜಂಕ್ಷನ್ನಿಂದ ಮಲ್ಪೆಯವರೆಗಿನ ರಾಷ್ಟ್ರೀಯ ಹೆದ್ದಾರಿ 169-ಎ ಇದರ ಅಗಲೀಕರಣ ಕಾಮಗಾರಿಯ ಪ್ರಗತಿಯ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.ಈ ಯೋಜನೆಯಲ್ಲಿ ಭೂಮಿ ಕಳಕೊಂಡವರಿಗೆ ತಕ್ಷಣ ಪರಿಹಾರ ಹಣ ಪಾವತಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.ಈ ಕಾಮಗಾರಿಗೆ ಒಟ್ಟು 229 ಭೂ ಸ್ವಾಧೀನ ಪ್ರಕರಣಗಳಿದ್ದು, ಅವುಗಳಲ್ಲಿ 19 ನೇರ ಸರ್ಕಾರದ ಹೆಸರಿನಲ್ಲಿದ್ದು, ಅವುಗಳ ಸ್ವಾಧೀನಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಉಳಿದ 208 ಪ್ರಕರಣದಲ್ಲಿ 132 ಪ್ರಕರಣಗಳಲ್ಲಿ ಭೂಸ್ವಾಧೀನಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ, ಅವುಗಳಲ್ಲಿ 98 ಪ್ರಕರಣಗಳ ಭೂಮಾಲಕರಿಗೆ 15.55 ಕೋಟಿ ರು. ಪರಿಹಾರ ಪಾವತಿಸಲಾಗಿದೆ. ಇನ್ನುಳಿದ 39ಪ್ರಕರಣದಲ್ಲಿ 3 ಪ್ರಕರಣಗಳಲ್ಲಿ ಭೂಮಿಯು ಜಂಟಿ ಖಾತೆಯಾಗಿವೆ, ಬಾಕಿ 27 ಪ್ರಕರಣಗಳಲ್ಲಿ ಬ್ಯಾಂಕ್ ಖಾತೆಯ ಪರಿಶೀಲನೆ ನಡೆಯುತ್ತಿದೆ ಎಂದ ಭೂಸ್ವಾಧೀನ ಅಧಿಕಾರಿ ಅವರು ಸಭೆಗೆ ಮಾಹಿತಿ ನೀಡಿದರು.9 ಪ್ರಕರಣಗಳಲ್ಲಿ ಕೌಟುಂಬಿಕ ತಕರಾರು ಇದೆ ಎಂದು ಅಧಿಕಾರಿಗಳು ತಿಳಿಸಿದಾಗ ಅವುಗಳ ಪರಿಹಾರ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಸಂಸದರು ಸೂಚಿಸಿದರು. ಮೂಡನಿಡಂಬೂರು ಗ್ರಾಮದ 40 ಮತ್ತು ಕೊಡವೂರು ಗ್ರಾಮ 50 ಭೂಸ್ವಾಧೀನ ಪ್ರಕರಣಗಳನ್ನು ಕೂಡಲೇ ಸರ್ವೆ ನಡೆಸಿ 3ಡಿ ಪ್ರಸ್ತಾವನೆಯನ್ನು ಸಲ್ಲಿಸಲು ಆದೇಶಿಸಿದರು.ಮಲ್ಪೆಯಿಂದ ಕರಾವಳಿ ಜಂಕ್ಷನ್ವರೆಗೆ ಕಾಮಗಾರಿಯನ್ನು ನಡೆಸಲು ಯಾವುದೇ ಅಭ್ಯಂತರ ಇಲ್ಲವೆಂದು ಸಹಾಯಕ ಕಮೀಷನರ್ ಮತ್ತು ಭೂ ಸ್ವಾಧೀನ ಅಧಿಕಾರಿ ರಶ್ಮಿ ಅವರು ಸಭೆಗೆ ತಿಳಿಸಿದರು.ಪರ್ಕಳದ ಸಮೀಪ ರಸ್ತೆ ಹಾಳಾಗಿದ್ದು ಅದನ್ನು ತಕ್ಷಣ ಸರಿಪಡಿಸಲು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಡಿಡಿಎಲ್ಆರ್ ರವೀಂದ್ರ, ಎಡಿಎಲ್ಆರ್ ತಿಪ್ಪರಾಯ ಕೆ. ತೊರವಿ, ಉಡುಪಿ ತಹಸೀಲ್ದಾರ್ ಗುರುಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್ ನಾಯಕ್, ಉಡುಪಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಜೆ. ಕಲ್ಮಾಡಿ, ಮಂಜು ಕೊಳ ಅವರು ಉಪಸ್ಥಿತರಿದ್ದರು.