ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ವಸತಿ ನಿರಾಶ್ರಿತರಿಗೆ ಆಶ್ರಯ ನಿವೇಶನ,ಮನೆ ನೀಡಲು ಒತ್ತಾಯಿಸಿ ವಸತಿ ನಿರಾಶ್ರಿತರ ಹೋರಾಟ ಸಮಿತಿ ನಗರಸಭೆ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದ್ದು, ಸಂಸದ ಸಂಗಣ್ಣ ಕರಡಿ ಭೇಟಿ ನೀಡಿ, ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.ಬಳಿಕ ಮಾತನಾಡಿದ ಅವರು, ನಗರದ ವಸತಿ ನಿರಾಶ್ರಿತರಿಗೆ ಆಶ್ರಯ ನಿವೇಶನ, ಮನೆ ಸೇರಿದಂತೆ ಅವರ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸಬೇಕು ಎಂದರು.ವಸತಿ ನಿರಾಶ್ರಿತರ ಹೋರಾಟ ಸಮಿತಿಯ ಸಂಚಾಲಕ ಸಂಜಯದಾಸ ಕೌಜಗೇರಿ ಮಾತನಾಡಿ, ಕಳೆದ 10 ದಿನಗಳಿಂದ ಹೋರಾಟ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.ವಿವಿಧ ಬೇಡಿಕೆಗಳಾದ ನಗರದ ಬಡ, ಅಲೆಮಾರಿ, ಸ್ಲಂ ಬಾಡಿಗೆದಾರ, ಕೂಡು ಕುಟುಂಬದ ನಿರಾಶ್ರಿತರಿಗೆ ಆಶ್ರಯ ಆಧಾರದ ನಿವೇಶನ ಮತ್ತು ಮನೆ ಮಂಜೂರು ಮಾಡಬೇಕು. ನಗರದ ಸರ್ಕಾರಿ, ಆಶ್ರಯ ಬಡಾವಣೆಗಳಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕುಪತ್ರ ಕೊಡಬೇಕು. ನಗರದ ಗುಡ್ಡದ ಕೆಳಗಿನ ಜಾಗದಲ್ಲಿ ವಾಸಿಸುವ, 94 ಸಿಸಿ ಸಲ್ಲಿಸಿದ ಕುಟುಂಬಗಳಿಗೆ ಮಂಜೂರಾತಿ ಆದೇಶ ನೀಡಬೇಕು ಎಂದು ಆಗ್ರಹಿಸಿದರು.ಸ್ಲಂ ಏರಿಯಾದ ಕಡುಬಡವರು ಬಾಡಿಗೆ ಕಟ್ಟಲು ಒದ್ದಾಡುತ್ತಿದ್ದು, ಅಂತಹ ಕುಟುಂಬಗಳಿಗೆ ನಗರದಲ್ಲಿ ಖಾಲಿ ಇರುವ ಸರ್ಕಾರಿ ಜಾಗ, ಆಶ್ರಯ ಬಡಾವಣೆಗಳಲ್ಲಿ ನಿವೇಶನಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.ಸಿದ್ದೇಶ್ವರನಗರ, ಕಾಳಿದಾಸನಗರ, ವಿಜಯನಗರ, ಗಾಂಧಿನಗರದ ಅಲೆಮಾರಿ ಕೌದಿ ಶೆಡ್ದಾರರರಿರಿಗೆ ತುರ್ತು ನಿವೇಶನ ಹಂಚಿಕೆ ಮಾಡಬೇಕು. ಕುವೆಂಪು ನಗರದ ಖಾಲಿ ನಿವೇಶನಗಳಲ್ಲಿ ವಾಸಿಸುತ್ತಿರುವ ಕಟುಂಬಗಳಿಗೆ ಹಕ್ಕುಪತ್ರ ಕೊಡಬೇಕು. ಉಳಿದ ಖಾಲಿ ನಿವೇಶನಗಳನ್ನು ಬಡವರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಯುವ ಮುಖಂಡ ಗಣೇಶ ಹೊರತಟ್ನಾ, ವಸತಿ ನಿರಾಶ್ರಿತರ ಹೋರಾಟ ಸಮಿತಿಯ ಸಂಚಾಲಕರಾದ ಕಾಶಪ್ಪ ತಳವಾರ, ಕೆ.ಬಿ.ಗೋನಾಳ, ಮುಖಂಡರಾದ ಡಿ.ಎಚ್.ಪೂಜಾರ್, ಬಸವರಾಜ್ ಶೀಲವಂತರ್, ಬಸವರಾಜ್ ನರೇಗಲ್, ಗಾಳೆಪ್ಪ ಮುಂಗೋಲಿ, ಮಂಜುನಾಥ ಮುಸಲಾಪುರ ಪಾಲ್ಗೊಂಡಿದ್ದರು.