ಬ್ಯಾಡಗಿ: ಹೋರಾಟ ಸಮಿತಿಯ ಸದಸ್ಯರನ್ನು ಬಂಧಿಸಿದ ಪೊಲೀಸರ ನಡೆಯನ್ನು ಖಂಡಿಸಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು 4 ತಾಸಿಗೂ ಹೆಚ್ಚು ಕಾಲ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿರೂಪಾಕ್ಷಪ ಬಳ್ಳಾರಿ, ರಾಜ್ಯದಲ್ಲಿ ಕಾಂಗ್ರೆಸ್ ತುಘಲಕ್ ಸರ್ಕಾರ ನಡೆಸುತ್ತಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಪ್ರತಿಭಟನಕಾರರನ್ನು ಬಂಧಿಸಿ ಜನ ವಿರೋಧಿ ಸರಕಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಉಪಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಪ್ರಕ್ರಿಯೆ ಬಿಟ್ಟರೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಸಹ ಯಾವುದೇ ಸಣ್ಣ ಪ್ರಕ್ರಿಯೆ ಇಲ್ಲಿವರೆಗೂ ಆರಂಭಿಸಿಲ್ಲ. ಶಾಸಕರೇ ಇದೇನಾ ನಿಮ್ಮ ಜನಸೇವೆ..? ಇದೇನಾ ಪಟ್ಟಣದ ಜನತೆಯ ಪರವಾದ ಕಾಳಜಿ..? ಹಾಳಾಗಿ ಹೋಗಿರುವ ಮುಖ್ಯರಸ್ತೆ ಅಗಲೀಕರಣ ಮಾಡಿ ತೋರಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ಚಂದ್ರಣ್ಣ ಶೆಟ್ಟರ, ರಾಮಣ್ಣ ಕೋಡಿಹಳ್ಳಿ, ಸರೋಜಾ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ವಿನಯ ಹಿರೇಮಠ, ಮೆಹಬೂಬ ಅಗಸನಹಳ್ಳಿ, ಶಿವರಾಜ ಅಂಗಡಿ, ಹನುಮಂತ ಮ್ಯಾಗೇರಿ, ಮುಖಂಡರಾದ ಹಾಲೇಶ ಜಾಧವ, ಪರುಶರಾಮ ಉಜನಿಕೊಪ್ಪ, ಸುರೇಶ ಯತ್ನಳ್ಳಿ, ಗಣೇಶ ಅಚಲಕರ, ಸುರೇಶ ಉದ್ಯೋ ಗಣ್ಣನವರ, ಶಿವಯೋಗಿ ಉಕ್ಕುಂದ, ಈರಣ್ಣ ಅಕ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.