ನಿರ್ಜೀವ ಸ್ಥಿತಿಯಲ್ಲಿ ಮುಡಾ: ಅಧ್ಯಕ್ಷ ಸ್ಥಾನಕ್ಕೆ ಇನ್ನಿಲ್ಲದ ಪೈಪೋಟಿ..!

KannadaprabhaNewsNetwork |  
Published : Nov 10, 2025, 12:30 AM IST
೯ಕೆಎಂಎನ್‌ಡಿ-೨ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ | Kannada Prabha

ಸಾರಾಂಶ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಶಕದಿಂದಲೂ ನಿರ್ಜೀವ ಸ್ಥಿತಿಯಲ್ಲಿದೆ. ಪ್ರಾಧಿಕಾರದಲ್ಲಿ ವಿವಿಧ ಹಂತಗಳಲ್ಲಿ ನಡೆದಿರುವ ನಿವೇಶನ ಹಗರಣದ ಸಿಬಿಐ ತನಿಖೆ ಈವರೆಗೂ ಮುಗಿದಿಲ್ಲ. ಹೆಸರಿಗಷ್ಟೇ ಪ್ರಾಧಿಕಾರ ಉಳಿದುಕೊಂಡಿದೆ. ಆದರೂ ಅಧ್ಯಕ್ಷ ಸ್ಥಾನಕ್ಕೆ ಕೈ ಪಾಳಯದಲ್ಲಿ ಬಿರುಸಿನ ಪೈಪೋಟಿ ಏರ್ಪಟ್ಟಿರುವುದು ವಿಚಿತ್ರವೆನಿಸಿದರೂ ಸತ್ಯ..!

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಶಕದಿಂದಲೂ ನಿರ್ಜೀವ ಸ್ಥಿತಿಯಲ್ಲಿದೆ. ಪ್ರಾಧಿಕಾರದಲ್ಲಿ ವಿವಿಧ ಹಂತಗಳಲ್ಲಿ ನಡೆದಿರುವ ನಿವೇಶನ ಹಗರಣದ ಸಿಬಿಐ ತನಿಖೆ ಈವರೆಗೂ ಮುಗಿದಿಲ್ಲ. ಹೆಸರಿಗಷ್ಟೇ ಪ್ರಾಧಿಕಾರ ಉಳಿದುಕೊಂಡಿದೆ. ಆದರೂ ಅಧ್ಯಕ್ಷ ಸ್ಥಾನಕ್ಕೆ ಕೈ ಪಾಳಯದಲ್ಲಿ ಬಿರುಸಿನ ಪೈಪೋಟಿ ಏರ್ಪಟ್ಟಿರುವುದು ವಿಚಿತ್ರವೆನಿಸಿದರೂ ಸತ್ಯ.

ಮುಡಾ ರಚನೆಯಾದ ನಂತರದಲ್ಲಿ ಬೃಹತ್ ಕೆರೆಯನ್ನು ಮುಚ್ಚಿ ವಿವೇಕಾನಂದ ನಗರ ಹೆಸರಿನಲ್ಲಿ ಬಡಾವಣೆಯನ್ನು ರಚಿಸಲಾಯಿತು. ಅದಾದ ಬೆನ್ನಹಿಂದೆಯೇ ಸಾಲು ಸಾಲು ಹಗರಣಗಳು ಮುಡಾವನ್ನು ಬೆಂಬಿಡದಂತೆ ಕಾಡಿದವು. ಮುಡಾದಿಂದ ೫ ಕೋಟಿ ರು. ನಾಪತ್ತೆ ಪ್ರಕರಣದಿಂದ ೧೦೭ ನಿವೇಶನ ಹಗರಣ, ಲಾಟರಿ ಸ್ಕೀಂ, ನಿಮ್ಮ ಸ್ಕೀಂ ಸೇರಿದಂತೆ ನಿವೇಶನಗಳ ಹಂಚಿಕೆಯಲ್ಲಾಗಿರುವ ಹಗರಣಗಳೆಲ್ಲಾ ಬಯಲಿಗೆ ಬಂದವು. ಬಡಾವಣೆಯಲ್ಲಿ ನಿವೇಶನ ಕೊಂಡವರು ಈಗಲೂ ಮೂಲಸೌಲಭ್ಯಗಳಿಲ್ಲದೆ ಪರಿತಪಿಸುತ್ತಿದ್ದಾರೆ. ನಿವೇಶನ ಕೊಂಡವರಲ್ಲಿ ಹಲವು ಮಂದಿ ಮಾರುವುದಕ್ಕೂ ಆಗದೆ, ನೆಲೆಸುವುದಕ್ಕೂ ಆಗದೆ, ಹೊಸದಾಗಿ ಕೊಂಡವರು ಖಾತೆ ಮಾಡಿಸಲಾಗದೆ ತ್ರಿಶಂಕು ಸ್ಥಿತಿ ಎದುರಿಸುತ್ತಿದ್ದಾರೆ.

ಜೀವಕಳೆಯನ್ನೇ ಕಳೆದುಕೊಂಡಿರುವ ಮುಡಾ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದಕ್ಕೆ ಕಾಂಗ್ರೆಸ್ ಪಕ್ಷದೊಳಗೆ ಕಾರ್ಯಕರ್ತರು ತುದಿಗಾಲಲ್ಲಿ ನಿಂತಿದ್ದಾರೆ. ಅತೃಪ್ತರಿಗೆ ತೃಪ್ತಿಪಡಿಸುವ ಹುದ್ದೆಯಾಗಿ ಮುಡಾ ಅಧ್ಯಕ್ಷಗಾದಿ ಉಳಿದುಕೊಂಡಿದೆಯೇ ವಿನಃ ಅಧ್ಯಕ್ಷರಾಗಿ ಮಹತ್ವದ ಬದಲಾವಣೆಗಳನ್ನು ತರುತ್ತಾರೆಂಬುದು ಕೇವಲ ಭ್ರಮೆಯಾಗಿದೆ.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಪಕ್ಷದ ನಾಯಕರು ಹೇಳಿದ ಕೆಲಸಗಳನ್ನು ಚಾಚೂತಪ್ಪದೆ ನಿರ್ವಹಿಸಿಕೊಂಡು ಬಂದಿರುವ ನಮಗೆ ಮುಡಾ ಅಧ್ಯಕ್ಷ ಸ್ಥಾನ ನೀಡಬೇಕು. ಅವಕಾಶ ವಂಚಿತರಿಗೆ ಸ್ಥಾನ-ಮಾನ ಕಲ್ಪಿಸಬೇಕೆಂದು ಹುದ್ದೆ ಆಕಾಂಕ್ಷಿಗಳು ಪೈಪೋಟಿಗಿಳಿದಿದ್ದಾರೆ.

ಕಳೆದ ಎರಡು ತಿಂಗಳಿಂದಲೂ ಹುದ್ದೆ ಆಕಾಂಕ್ಷಿಗಳು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಸೇರಿದಂತೆ ರಾಜ್ಯಮಟ್ಟದ ನಾಯಕರು, ನಗರಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಬೇಡಿಕೆ ಇಡುತ್ತಿದ್ದಾರೆ. ಈಗಾಗಲೇ ನಿಗಮ, ಮಂಡಳಿ ಮತ್ತು ಪ್ರಾಧಿಕಾರದ ನೇಮಕಾತಿಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಈಗ ಮುಡಾ ಅಧ್ಯಕ್ಷ ಸ್ಥಾನದ ಬದಲಾವಣೆಯ ಮಾತುಗಳು ಕೇಳಿ ಬರುತ್ತಿವೆ.

ನಿಗಮ-ಮಂಡಳಿಗಳಲ್ಲಿ ಜಿಲ್ಲೆಯ ಬರೋಬ್ಬರಿ ೧೧ ಮಂದಿ ಕಾಂಗ್ರೆಸ್ ನಾಯಕರು ಅಧಿಕಾರ ಪಡೆದಿರುವುದೇ ದೊಡ್ಡ ಸಂಗತಿ. ಇದೀಗ ಬೇರೆ ಮುಖಂಡರು, ಕಾರ್ಯಕರ್ತರಿಗೂ ಅವಕಾಶ ಕಲ್ಪಿಸುವ ಆಲೋಚನೆಯೊಂದಿಗೆ ಪ್ರಾರಂಭಿಕವಾಗಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಅಧ್ಯಕ್ಷರ ಬದಲಾವಣೆಗೆ ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದಾರೆ.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷರಾಗಿ ಮುಸ್ಲಿಂ ಸಮುದಾಯ ಮುಖಂಡ, ನಗರಸಭೆ ಸದಸ್ಯ ನಯೀಂ ಅವರನ್ನು ನೇಮಕ ಮಾಡಲಾಗಿತ್ತು. ೨೦೨೪ ಜೂ.೧೯ರಂದು ನಯೀಂ ಅವರು ಮುಡಾ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಪಕ್ಷದ ನಾಯಕರು ಮತ್ತು ಮುಖಂಡರ ನಡುವಿನ ಆಂತರಿಕ ಮಾತುಕತೆಯಂತೆ ಒಂದು ವರ್ಷಗಳ ಕಾಲ ನಯೀಂ ಅವರನ್ನು ನೇಮಕ ಮಾಡಿ, ಉಳಿದ ಅವಧಿಗೆ ಮತ್ತಿಬ್ಬರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂಬುದು ಪಕ್ಷದ ಅಂಗಳದಲ್ಲಿ ಕೇಳಿಬರುತ್ತಿರುವ ಮಾತು.

ಅದರಂತೆ ಇದೀಗ ನಯೀಂ ಅವರಿಗೆ ನೀಡಿದ್ದ ಕಾಲಾವಧಿ ಪೂರ್ಣಗೊಂಡಿದ್ದು, ಅವರ ಬದಲಾವಣೆ ಬಗ್ಗೆ ಪಕ್ಷದೊಳಗೆ ಗಂಭೀರ ಚರ್ಚೆ, ಸಮಾಲೋಚನೆ ಆರಂಭವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಡಾ ಅಧ್ಯಕ್ಷರ ಹುದ್ದೆಗೆ ಮೊದಲು ಅಲ್ಪಸಂಖ್ಯಾತ ಮುಖಂಡರು, ಬಳಿಕ ದಲಿತ ಸಮುದಾಯದವರು ಹಾಗೂ ಕೊನೆಯಲ್ಲಿ ಸಾಮಾನ್ಯ ವರ್ಗದ ಮುಖಂಡರಿಗೆ ಅಧಿಕಾರ ನೀಡುವ ಆಲೋಚನೆಯನ್ನು ಜಿಲ್ಲಾ ಕಾಂಗ್ರೆಸ್ ನಾಯಕರು ಮಾಡಿದ್ದರು ಎಂದು ತಿಳಿದುಬಂದಿದೆ.

ಹೀಗಾಗಿ ಅಲ್ಪಸಂಖ್ಯಾತ ವರ್ಗದವರ ಕೋಟಾ ಮುಗಿದಿದೆ. ಕಳೆದ ಜೂನ್ ತಿಂಗಳಲ್ಲೇ ರಾಜೀನಾಮೆ ನೀಡಬೇಕಿದ್ದ ನಹೀಂ ಹೆಚ್ಚುವರಿಯಾಗಿ ನಾಲ್ಕು ತಿಂಗಳು ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ಇದೀಗ ಮುಡಾ ಅಧ್ಯಕ್ಷ ಸ್ಥಾನಕ್ಕಾಗಿ ಪರಿಶಿಷ್ಟ ಜಾತಿಯ ಮುಖಂಡರ ನಡುವೆ ಪೈಪೋಟಿ ಆರಂಭವಾಗಿದೆ. ಹೀಗಾಗಿ ನಗರಸಭೆ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್, ನಗರಸಭೆ ಸದಸ್ಯ ಹಾಗೂ ಜಿಲ್ಲಾ ಪರಿಶಿಷ್ಟ ಜಾತಿ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಶ್ರೀಧರ್, ಕೆಪಿಸಿಸಿ ಪರಿಶಿಷ್ಟ ವಿಭಾಗದ ರಾಜ್ಯ ಸಂಚಾಲಕ ಕೆ.ಎನ್.ದೀಪಕ್, ಕಾಂಗ್ರೆಸ್ ಮುಖಂಡರಾದ ಚಿಕ್ಕಮಂಡ್ಯ ಆನಂದ್‌ಕುಮಾರ್ ಅವರು ಮುಡಾ ಅಧ್ಯಕ್ಷಗಾದಿಗಾಗಿ ಪೈಪೋಟಿ ನಡೆಸಿದ್ದಾರೆ.

ಈಗಾಗಲೇ ಹಾಲಿ ಅಧ್ಯಕ್ಷ ನಯೀಂ ಅವರು ವಸತಿ ಸಚಿವ ಜಮೀರ್ ಅಹಮದ್ ಅವರನ್ನು ಭೇಟಿಯಾಗಿ ಮುಂದಿನ ಆರು ತಿಂಗಳು ಮುಂದುವರೆಸುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.

ಇದರ ನಡುವೆ ನಗರಸಭೆ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್ ಹೆಸರು ಈಗಾಗಲೇ ಅಂತಿಮಗೊಂಡು ನೇಮಕಾತಿ ಆದೇಶವೂ ಸಿದ್ಧವಾಗಿದೆ. ಆದರೆ, ನೇಮಕಾತಿ ಆದೇಶ ತಲುಪಿಸುವುದಕ್ಕೆ ತಡ ಮಾಡಲಾಗುತ್ತಿದೆ. ಇದಕ್ಕೆ ರಾಜಕೀಯ ಪ್ರಭಾವ ಕಾರಣವೋ, ನಯೀಂ ಅವರನ್ನು ಮುಂದುವರೆಸುವ ತಂತ್ರಗಾರಿಕೆಯೋ ಎನ್ನುವುದು ಸ್ಪಷ್ಟವಾಗುತ್ತಿಲ್ಲ.

ಇನ್ನೊಂದು ವಾರದೊಳಗೆ ನೇಮಕಾತಿ ಆದೇಶ ಬಿ.ಪಿ.ಪ್ರಕಾಶ್ ಕೈಸೇರಲಿದೆ ಎಂದು ಹೇಳಿಕೊಂಡು ಬರಲಾಗುತ್ತಿದ್ದರೂ ಹದಿನೈದು ದಿನಗಳಾದರೂ ಯಾವುದೇ ಬೆಳವಣಿಗೆ ಕಂಡುಬರುತ್ತಿಲ್ಲ. ಇದಕ್ಕೆ ನಿಖರ ಕಾರಣವೇನೆಂಬುದನ್ನೂ ಯಾರೂ ಬಾಯ್ಬಿಡುತ್ತಿಲ್ಲ. ಶ್ರೀಧರ್ ಹೆಸರೂ ಚಾಲ್ತಿಗೆ ಬಂದಿದೆ. ಹೀಗಾಗಿ ಯಾರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.ವಿದ್ಯಾರ್ಥಿ ದಿಸೆಯಿಂದಲೇ ಕಾಂಗ್ರೆಸ್ ಮೂಲಕ ನಾನು ಹೋರಾಟ ಆರಂಭಿಸಿದ್ದೇನೆ. ವಿದ್ಯಾರ್ಥಿ ಸಂಘದ ನಾಯಕನಾಗಿಯೂ ಗುರುತಿಸಿಕೊಂಡಿದ್ದೆ. ಒಮ್ಮೆ ನಗರಸಭೆ ಚುನಾವಣೆಯಲ್ಲಿ ಸೋತಿದ್ದೆ. ಆದರೆ, ನನ್ನ ಸಂಘಟನಾ ಚಾತುರ್ಯವನ್ನು ಮೆಚ್ಚಿ ನಗರಸಭೆ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿತ್ತು. ಕಳೆದ ಅವಧಿಯಲ್ಲಿ ೧೭ನೇ ವಾರ್ಡ್‌ನಿಂದ ನನ್ನ ಪತ್ನಿ ನಗರಸಭೆ ಸದಸ್ಯೆಯಾಗಿದ್ದರು. ಇದೇ ವಾರ್ಡ್‌ನಲ್ಲಿ ಪಕ್ಷದ ಹಲವು ನಾಯಕರ ಗೆಲುವಿಗೆ ದುಡಿದಿದ್ದೇನೆ. ಹೀಗಾಗಿ ಮುಡಾ ಅಧ್ಯಕ್ಷ ಹುದ್ದೆಗೆ ನಾನೂ ಪ್ರಬಲ ಆಕಾಂಕ್ಷಿ.

-ಬಿ.ಪಿ.ಪ್ರಕಾಶ್, ಮಾಜಿ ಸದಸ್ಯ, ನಗರಸಭೆ, ಮಂಡ್ಯಮುಡಾ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಕ ಮಾಡುವಂತೆ ನಾನೂ ಕೂಡ ವರಿಷ್ಠರಿಗೆ ಮನವಿ ಮಾಡಿದ್ದೇನೆ. ನಾಯಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನನ್ನನ್ನು ಪರಿಗಣಿಸುವ ಭರವಸೆ ಇದೆ. ೩೫ ವರ್ಷದಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಜವಾಬ್ದಾರಿ ಕೊಟ್ಟರೆ ನಿರ್ವಹಿಸಲು ಸಿದ್ಧ. ಈ ಮಧ್ಯೆ ವೈಯುಕ್ತಿಕ ಕಾರಣಗಳಿಂದಾಗಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.

-ಎಂ.ಎನ್.ಶ್ರೀಧರ್, ಮುಡಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ

PREV

Recommended Stories

ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ
2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್