ಕನ್ನಡ ಪ್ರಭ ವಾರ್ತೆ ಮುಧೋಳ
ಬಾಲ್ಯದಿಂದಲೇ ಜನಪದವನ್ನು ತಮ್ಮ ಉಸಿರಾಗಿಸಿಕೊಂಡು ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಪರಂಪರೆಯ ಉಳಿವಿಗೆ ಸುಮಾರು 40ವರ್ಷಕ್ಕೂ ಅಧಿಕ ಕಾಲ ಜನಪದ ಸಂಗೀತ ಸೇವೆ ಮಾಡಿದ ಮುಧೋಳ ತಾಲೂಕಿನ ಮುಗಳಖೋಡದ ಜನಪದ ಗಾಯಕಿ ಶ್ಯಾಮಲಾ ಲಕ್ಷ್ಮೇಶ್ವರ ಅವರಿಗೆ ಬಾಗಲಕೋಟೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2025ರ ಗರಿ ಮುಡಿಗೇರಿದೆ.ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆಯಾಗಿ ಸಾರ್ವಜನಿಕ ವಲಯದಲ್ಲಿ ಇವರ ಸೇವೆ ಶ್ಲಾಘನೀಯವಾಗಿದೆ.
ನಿತ್ಯ ತತ್ವ ಚಿಂತನ ಭಕ್ತಿ ಬೆಳಗು ಕಾರ್ಯಕ್ರಮ, ಪ್ರತಿ ಭಾನುವಾರ ಸತ್ಸಂಗ ಕಾರ್ಯಕ್ರಮ, ತತ್ವದರ್ಶನ ಮನೆಯಂಗಳದಲ್ಲಿ ಶರಣರ ಮನದ ಮಾತು ಮಾಸಿಕ ಕಾರ್ಯಕ್ರಮ, ಕನಕ ಪುರಂದರ ಬಸವಾದಿ ಶರಣರ ಚಿಂತನ ತ್ರೈಮಾಸಿಕ ಕಾರ್ಯಕ್ರಮ, ಶಿವಶರಣರ ಜಯಂತಿ-ತತ್ವಪ್ರಚಾರ ಇವರ ನಿತ್ಯ ಕಾಯಕ. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿ ಅನೇಕ ಭಾಗಗಳಲ್ಲಿ ಜನಪದ ತತ್ವಪದಗಳನ್ನು ಹಾಡಿ ಜನಮನ ಗೆದ್ದಿದ್ದಾರೆ. ಇವರ ಸಾರ್ಥಕ ಸೇವೆಗೆ ನವೆಂಬರ್ 1ರಂದು ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸನ್ಮಾನಿಸಲಾಗುತ್ತಿದೆ.2015ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯಮಟ್ಟದ ಜನಪದ ಭೂಷಣ ಪ್ರಶಸ್ತಿ, 2016ದಲ್ಲಿ ಇಂಚಲದ ಸಾಧು ಸಂಸ್ಥಾನ ಮಠದ ಗುರು ಸೇವಾ ರತ್ನ ಪ್ರಶಸ್ತಿ, 2017ರಲ್ಲಿ ಮುಧೋಳ ತಾಲೂಕಾಡಳಿತ ಗೌರವಿಸಿದೆ.
ಹರ್ಷ: ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಕಲಾವಿದೆ ಶಾಮಲಾ ಲಕ್ಷ್ಮೇಶ್ವರ ಅವರನ್ನು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟ, ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನ, ಶ್ರೀಮನ್ ನಿಜಗುಣ ಶಿವಯೋಗಿ ಪ್ರತಿಷ್ಠಾನ, ಬಸವ ಜಾನಪದ ಕಲಾಬಳಗ ಸೇರಿದಂತೆ ಅನೇಕ ಕಲಾವಿದರ ಬಳಗದವರು ಅಭಿನಂದಿಸಿದ್ದಾರೆ.