ಭಾವೈಕ್ಯತೆಯೊಂದಿಗೆ ಮೊಹರಂ ಸಂಪನ್ನ

KannadaprabhaNewsNetwork |  
Published : Jun 27, 2026, 12:45 AM IST
ಫೋಟೋ26ಕೆಎಸಟಿ1:ಕುಷ್ಟಗಿ ತಾಲೂಕಿನ ದೋಟಿಹಾಳ ಹಾಗೂ ಕೇಸೂರು ಗ್ರಾಮಗಳಲ್ಲಿ ಮೊಹರಂ ಅಂಗವಾಗಿ ಅಲಾಯಿ ದೇವರ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ವಿವಿಧ ಧಾರ್ಮಿಕ ವಿಧಿವಿಧಾನ, ವಿಶೇಷ ಪೂಜೆ ಹಾಗೂ ಭಕ್ತರ ಹರಕೆಗಳೊಂದಿಗೆ ಮೊಹರಂ ಆಚರಣೆ ನಡೆಯಿತು

ಕುಷ್ಟಗಿ: ಸಾಮರಸ್ಯ,ಸಹಬಾಳ್ವೆ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸಂದೇಶ ಸಾರುವ ಮೊಹರಂ ಹಬ್ಬವು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರದ್ಧಾಭಕ್ತಿ, ಸಂಪ್ರದಾಯ ಮತ್ತು ಸಡಗರ-ಸಂಭ್ರಮದಿಂದ ಆಚರಿಸಿದರು.

ಹಿಂದೂ–ಮುಸ್ಲಿಂ ಸಮುದಾಯದವರು ಯಾವುದೇ ಜಾತಿ, ಧರ್ಮ, ಭೇದವಿಲ್ಲದೆ ಒಂದಾಗಿ ಭಾಗವಹಿಸಿ ಮೊಹರಂ ಆಚರಿಸಿದರು.

ಪಟ್ಟಣ ಸೇರಿದಂತೆ ದೋಟಿಹಾಳ, ಕೇಸೂರು, ಮುದೇನೂರು, ತಾವರಗೇರಾ, ಹನಮಸಾಗರ, ಜಾಲಿಹಾಳ, ರ್ಯಾವಣಕಿ, ಹೆಸರೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ಹಬ್ಬದ ಆರಂಭದಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನ, ವಿಶೇಷ ಪೂಜೆ ಹಾಗೂ ಭಕ್ತರ ಹರಕೆಗಳೊಂದಿಗೆ ಮೊಹರಂ ಆಚರಣೆ ನಡೆಯಿತು.

ಮೊಹರಂ ಹಬ್ಬದ ಕೊನೆಯ ದಿನವಾದ ಶುಕ್ರವಾರ ಸಂಜೆ ಮತ್ತು ರಾತ್ರಿ ಅಲಾಯಿ ದೇವರ ಮೆರವಣಿಗೆ ಗ್ರಾಮ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆದವು. ಭಾಜಾ-ಭಜಂತ್ರಿ, ಡೊಳ್ಳು, ಹಲಗಿ, ವಾದ್ಯಮೇಳ, ಹೆಜ್ಜೆ ಕುಣಿತ, ಅಲಾಯಿ ಕುಣಿತ, ಭಾಣ ಬಿರುಸುಗಳ ಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಮೆರುಗು ತಂದವು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಅಲಾಯಿ ದೇವರ ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ದೇವರಿಗೆ ಹೂವಿನ ಹಾರ, ಸಕ್ಕರೆ ನೈವೇದ್ಯ, ಹಣ್ಣು-ಹಂಪಲು ಅರ್ಪಿಸಿ ತಮ್ಮ ಇಷ್ಟಾರ್ಥ ಬೇಡಿಕೊಂಡರು. ಹಲವರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರೆ, ಇನ್ನೂ ಕೆಲವರು ಕುಟುಂಬದ ಸದಸ್ಯರೊಂದಿಗೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಪ್ರಮುಖ ಬೀದಿಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿತ್ತು.

ಕತಲ್ ರಾತ್ರಿ ಭಕ್ತಿ ಸಂಭ್ರಮ: ಮೊಹರಂ ಹಬ್ಬದ ಪ್ರಮುಖ ಆಚರಣೆಯಾದ ಕತಲ್ ರಾತ್ರಿಯನ್ನು ಭಕ್ತಿ ಹಾಗೂ ಶ್ರದ್ಧೆಯಿಂದ ಆಚರಿಸಲಾಯಿತು. ಸಾವಿರಾರು ಭಕ್ತರು ಮಸೀದಿಗಳಿಗೆ ತೆರಳಿ ಸಕ್ಕರೆ ನೈವೇದ್ಯ, ಪುಷ್ಪಹಾರ ಹಾಗೂ ಇತರೆ ಸೇವೆ ಸಲ್ಲಿಸಿದರು. ಮಸೀದಿಗಳ ಆವರಣದಲ್ಲಿ ರಿವಾಯತಿ ಪದಗಳ ಗಾಯನ, ಹೆಜ್ಜೆ ಮೇಳ, ಹಲಗಿ ವಾದನ ಮತ್ತು ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮ ಜರುಗಿದವು. ರಾತ್ರಿಯವರೆಗೆ ಭಕ್ತರು ದೇವರ ದರ್ಶನ ಪಡೆದು ತಮ್ಮ ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು.

ಹಿಂದೂಗಳೇ ಮುಂದುವರಿಸುತ್ತಿರುವ ಸಂಪ್ರದಾಯ: ತಾಲೂಕಿನ ಜಾಲಿಹಾಳ, ರ್ಯಾವಣಕಿ, ಹೆಸರೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರು ವಾಸವಿಲ್ಲದಿದ್ದರೂ ಹಲವು ದಶಕಗಳಿಂದ ಮೊಹರಂ ಆಚರಣೆಯ ಸಂಪ್ರದಾಯ ನಿರಂತರವಾಗಿ ಮುಂದುವರಿದಿದೆ. ಸಮೀಪದ ಗ್ರಾಮಗಳಿಂದ ಮುಸ್ಲಿಂ ಧರ್ಮ ಗುರುಗಳನ್ನು ಆಹ್ವಾನಿಸಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಗುತ್ತದೆ.

ಅಲಾಯಿ ದೇವರ ಕುದುರೆಗಳಾಗಿ ಹಿಂದೂ ಸಮಾಜದವರೇ ಸೇವೆ ಸಲ್ಲಿಸುವ ಮೂಲಕ ಭಕ್ತಿ ಸೌಹಾರ್ದತೆಯ ಅನನ್ಯ ಪರಂಪರೆ ಜೀವಂತವಾಗಿರಿಸಿದ್ದಾರೆ. ಈ ಆಚರಣೆ ಹಿಂದೂ–ಮುಸ್ಲಿಂ ಸೌಹಾರ್ದಕ್ಕೆ ಉತ್ತಮ ಮಾದರಿಯಾಗಿದೆ.

ಮೊಹರಂ ಹಬ್ಬದ ಅಂಗವಾಗಿ ನಡೆದ ಮೆರವಣಿಗೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕುಷ್ಟಗಿ ತಾಲೂಕಿನ ಪೊಲೀಸರು ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಪೊಲೀಸ್ ಸಿಬ್ಬಂದಿ ಮೆರವಣಿಗೆ ಮಾರ್ಗದುದ್ದಕ್ಕೂ ನಿಯೋಜನೆಗೊಂಡು ಶಾಂತಿಯುತ ಆಚರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಗಸ್ಟ್‌ 22, 23ರಂದು ಧಾರವಾಡದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ಮೊಹರಂ: ಇರಾನಿಗಳ ಮೈಯಿಂದ ಚೆಲ್ಲಿದ ರಕ್ತ