ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ
ಮುಸ್ಲಿಮರಿಲ್ಲದ ಗ್ರಾಮಗಳಲ್ಲಿ ಅಲಾಯಿ ದೇವರ ಪ್ರತಿಷ್ಠಾಪನೆ, ದೇವರ ಸವಾರಿ ಹಾಗೂ ಇತರ ಧಾರ್ಮಿಕ ವಿಧಿ-ವಿಧಾನ ಪಕ್ಕದ ಊರಿನ ಮುಸ್ಲಿಂ ಧರ್ಮಗುರು, ಮುಲ್ಲಾ (ಮುಲ್ಲಾಸಾಬ್)ರನ್ನು ಕರೆಸಿ,ಅಲಾಯಿ ದೇವರ ಚಾಕ್ರಿ ಮತ್ತು ಓದಿಕೆ ಮಾಡಲು ಹಿರಿಯರ ಕಾಲದಿಂದಲೂ ನೇಮಿಸಲಾಗಿದೆ. ಅವರ ಸಹಕಾರದಿಂದ ಹಿಂದೂಗಳು ಹಬ್ಬ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಿದ್ದು, ಭಾವೈಕ್ಯತೆಗೆ ಸಾಕ್ಷಿಯಾಗಿದೆ.
ಮನ-ಮನೆಗಳಲ್ಲೂ ಸಂಭ್ರಮ: ಮೊಹರಂ ಹಬ್ಬದ ಅಂಗವಾಗಿ ಯುವಕರು, ಚಿಣ್ಣರು, ಅಂದ-ಚಂದದ ರಿಬ್ಬನ್ನಿಂದ ಸಿಂಗರಿಸಿದ ಕೊಡೆ ಹಿಡಿದು ಹೆಜ್ಜೆ ಕುಣಿತ, ನೃತ್ಯ, ಕೋಲಾಟ ಆಡುವುದು ನೋಡುಗರ ಕಣ್ಮನ ಸೆಳೆಯುತ್ತದೆ. ಮಳೆ ಬೆಳೆಯ ಕುರಿತ ಪವಾಡ ಮೈ ರೋಮಾಂಚನಗೊಳಿಸುತ್ತವೆ. ಹೊಟ್ಟೆ ಪಾಡಿಗೆ ಬೇರೆಡೆ ಗುಳೆ ಹೋದ ನಿವಾಸಿಗಳು, ಬುಡಕಟ್ಟು ಜನಾಂಗದವರು ಈ ಹಬ್ಬಕ್ಕೆ ಆಗಮಿಸುವುದು ವಿಶೇಷ. ಮೊಹರಂ ಗಂಧ, ಕತಲ್ ರಾತ್ರಿ, ಅಲಾಯಿ ದೇವರ ದಫನ್ ದಿನದವರೆಗೆ ಹಬ್ಬದ ಸಂಭ್ರಮ ಎಲ್ಲರ ಮನ-ಮನೆಗಳಲ್ಲಿ ಕಳೆಗಟ್ಟಿರುತ್ತದೆ.ಮಳೆ ಬೆಳೆ ಕುರಿತು ಕಾರ್ಣಿಕ: ಹಬ್ಬದ ದಿನಗಳಲ್ಲಿ ಉಪವಾಸ ವ್ರತ ಮಾಡುವುದು. ಹೊಸಬಟ್ಟೆ ಖರೀದಿಸುವುದು. ದೀಡ್ ನಮಸ್ಕಾರ, ಬೇಡಿಕೊಂಡ ಹರಕೆ ತೀರಿಸುವುದು, ಅಲಾಯಿ ದೇವರಿಗೆ ಬೆಳ್ಳಿ ಛತ್ರಿ, ಬೆಳ್ಳಿ ಕುದುರೆ ಅರ್ಪಣೆ ಸೇರಿ ಸಕ್ಕರೆ, ಉಪ್ಪು, ಕೊಬ್ಬರಿ, ಕೆಂಪು ಸಕ್ಕರೆ ಮತ್ತು ಬೆಲ್ಲ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಅಲಾಯಿ ಕುಂಡದಲ್ಲಿ ಅಗ್ನಿ ಪ್ರವೇಶ, ತುಂಬಿದ ಕೊಡ ಮೇಲಕ್ಕೆತ್ತಿ ಮೈಮೇಲೆ ಸುರಿದುಕೊಳ್ಳುವ ಮೂಲಕ ಮಳೆ ಬೆಳೆ ಕುರಿತು ಕಾರ್ಣಿಕ ನುಡಿಯುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಆಚರಣೆ ಎಲ್ಲೆಲ್ಲಿ?: ಮುಸ್ಲಿಂ ಕುಟುಂಬಗಳು ಇಲ್ಲದ ಊರುಗಳಾದ ತಾಲೂಕಿನ ತರಲಕಟ್ಟಿ, ಉಚ್ಚಲಕುಂಟಾ, ಹೊಸೂರು, ಬೋದೂರು, ಚಿಕ್ಕಮನ್ನಾಪುರ, ವನಜಭಾವಿ, ಗುಳೆ, ಗುಂಟಮಡು, ಶಿಡ್ಲಭಾವಿ, ಕೃಷ್ಣಾಪುರ, ಸಾಲಭಾವಿ, ಹುಲೆಗುಡ್ಡ, ನಿಲೋಗಲ್ ಗ್ರಾಮಗಳಲ್ಲಿ ಮುಸ್ಲಿಮರಿಲ್ಲದಿದ್ದರೂ ಮೋಹರಂ ಸಡಗರ ಸಂಭ್ರಮದಿಂದ ನಡೆಯುತ್ತದೆ.
ಯಲಬುರ್ಗಾ ತಾಲೂಕಿನ ತರಲಕಟ್ಟಿಯಲ್ಲಿ ಎರಡು ಮಸೀದಿಗಳಿವೆ. ಮೊಹರಂ ಅಂಗವಾಗಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸಲು ಬೇರೆ ಊರಿನ ಮುಲ್ಲಾಗಳನ್ನು ಕರೆಸಿ ವಿಶಿಷ್ಟ ರೀತಿ ಹಬ್ಬ ಆಚರಿಸಲಾಗುತ್ತದೆ. ದವಸ-ಧಾನ್ಯಗಳ ಮೂಲಕ ಮಳೆ-ಬೆಳೆ ಬಗ್ಗೆ ಕಾರ್ಣಿಕ ತಿಳಿಯುತ್ತದೆ. ಭಕ್ತರು ಶ್ರದ್ಧೆಯಿಂದ ಬೇಡಿಕೊಂಡ ಹರಕೆ ತೀರಿಸುತ್ತಾರೆ ಎಂದು ತರಲಕಟ್ಟಿ ಗ್ರಾಮಸ್ಥ ಶ್ರೀಕಾಂತಗೌಡ ಮಾಲಿಪಾಟೀಲ್ ತಿಳಿಸಿದ್ದಾರೆ.