ಸಂತೋಷ ದೈವಜ್ಞ ಮುಂಡಗೋಡ
ಕಳೆದ 30 ವರ್ಷಗಳ ಹಿಂದಿನಿಂದಲೂ ಮುಂಡಗೋಡಗೆ ಬಸ್ ಡಿಪೋ ಆಗಬೇಕೆಂಬ ಬೇಡಿಕೆ ಇಲ್ಲಿಯ ಜನತೆಯದ್ದಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸುತ್ತಮುತ್ತ ತಾಲೂಕುಗಳಲ್ಲಿ ಬಸ್ ಡಿಪೋ ನಿರ್ಮಾಣವಾದರೂ ಮುಂಡಗೋಡದಲ್ಲಿ ಬಸ್ ಡಿಪೋ ನಿರ್ಮಾಣವಾಗಿರಲಿಲ್ಲ. ೨೦೧೦ ಬಿಜೆಪಿ ಸರ್ಕಾರದಲ್ಲಿ ಅಂದಿನ ಶಾಸಕ ವಿ.ಎಸ್. ಪಾಟೀಲ ಈ ಬಗ್ಗೆ ತೀವ್ರ ಆಸಕ್ತಿ ವಹಿಸಿ ಬಸ್ ಡಿಪೋ ನಿರ್ಮಾಣಕ್ಕೆ ಜಾಗ ಗುರುತಿಸಿ ತಡೆಗೋಡೆ ನಿರ್ಮಾಣ ಮಾಡಿಸಿದರು. ಆದರೆ ಈ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಅಲ್ಲಿಗೆ ನಿಂತುಹೋಯಿತು.
ಸುಮಾರು ೧೨ ವರ್ಷಗಳ ನಂತರ ೨೦೨೨ರಲ್ಲಿ ಕಾರ್ಮಿಕ ಸಚಿವ, ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ಜಾಗದ ಸಮಸ್ಯೆ ಇತ್ಯರ್ಥಗೊಂಡು ಬಸ್ ಡಿಪೋ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದು ಸಾರಿಗೆ ಸಚಿವ ಶ್ರೀರಾಮುಲು ಅವರ ಅಮೃತಹಸ್ತದಿಂದ ಶಿಲಾನ್ಯಾಸಗೊಂಡು ಕಾಮಗಾರಿಗೆ ಚಾಲನೆ ನೀಡಲಾಯಿತು. ಪ್ರಾರಂಭದಲ್ಲಿ ಆಮೆಗತಿಯಲ್ಲಿ ಕಾಮಗಾರಿ ನಡೆದಿದ್ದರಿಂದ ಮುಂಡಗೋಡ ತಾಲೂಕಿನ ಜನತೆಗೆ ತೀವ್ರ ಬೇಸರವನ್ನುಂಟು ಮಾಡಿತ್ತು. ಆ ನಂತರದಲ್ಲಿ ತೀವ್ರಗತಿಯಲ್ಲಿ ನಡೆದ ಬಸ್ ಡಿಪೋ ನಿರ್ಮಾಣ ಕಾರ್ಯ ಈಗ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುತ್ತಿದ್ದು, ಸಮರ್ಪಕ ಬಸ್ ವ್ಯವಸ್ಥೆ ಸಾರ್ವಜನಿಕರಲ್ಲಿ ಭರವಸೆ ಮೂಡಿಸಿದೆ.ಪ್ರತಿಭಟನೆಗೆ ಈಗಲಾದರೂ ಬ್ರೇಕ್ ಬೀಳಲಿದೆಯೇ?
ಈಗ ಸುಸಜ್ಜಿತವಾದ ಬಸ್ ಡಿಪೋ ಕಟ್ಟಡ ನಿರ್ಮಾಣಗೊಂಡಿದ್ದು, ಈಗಲಾದರೂ ಸಮರ್ಪಕ ಬಸ್ ಸಂಚಾರ ಆರಂಭಗೊಂಡು ಸಾರ್ವಜನಿಕರ ಸಮಸ್ಯೆ ದೂರವಾಗಲಿದೆಯೇ ಕಾದು ನೋಡಬೇಕಿದೆ.
ಮುಂಡಗೋಡ ಘಟಕದಿಂದ ಹೊರಡುವ ಸುಮಾರು ೫೦ ಬಸ್ಗಳ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಬಸ್ ಘಟಕದ ಡೀಸೆಲ್ ಪಂಪ್ಗೆ ಅನುಮೋದನೆ ಸಿಗಬೇಕಿದೆ. ಅನುಮೋದನೆ ದೊರೆತ ಬಳಿಕ ಕಾರ್ಯಾಚರಣೆ ಆರಂಭ ಮಾಡಲಾಗುವುದು ಎಂದು ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿ ಶ್ರೀನಿವಾಸ ಕೆ.ಎಚ್. ಹೇಳಿದ್ದಾರೆ.