ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾರು ಚಲಾಯಿಸುವಾಗ ದಿಢೀರನೇ ಉಸಿರಾಟ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಾಫ್ಟ್‌ವೇರ್ ಕಂಪನಿ ಮಹಿಳಾ ಉದ್ಯೋಗಿಯನ್ನು ಮಡಿವಾಳ ಸಂಚಾರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ವೊಬ್ಬರು ರಕ್ಷಿಸಿದ್ದಾರೆ.

ಮಾರತ್ತಹಳ್ಳಿ ನಿವಾಸಿ ಕಲಿಂದಿ ಶ್ರೀವಾಸ್ತವ್‌ ಅವರ ಪ್ರಾಣಪಾಯದಿಂದ ಪರಾಗಿದ್ದು, ಕೆಲಸ ಮುಗಿಸಿಕೊಂಡು ಅವರು ಮನೆಗೆ ಮರಳುವಾಗ ಮಾರ್ಗ ಮಧ್ಯೆ ಸಿಲ್ಕ್ ಬೋರ್ಡ್ ಜಂಕ್ಷನ್‌ ಬಳಿ ಘಟನೆ ನಡೆದಿದೆ. ತೊಂದರೆಗೆ ಸಿಲುಕಿದ್ದ ಅವರಿಗೆ ನೆರವಿನ ಹಸ್ತಚಾಚಿ ಹೆಡ್‌ ಕಾನ್‌ಸ್ಟೇಬಲ್ ವೈ.ಟಿ.ದತ್ತಾತ್ರೇಯ ಪ್ರಾಣ ಉಳಿಸಿದ್ದಾರೆ.

ಏನಾಯಿತು ಘಟನೆ?:

ತಮ್ಮ ಕುಟುಂಬದ ಜತೆ ಮಾರತ್ತಹಳ್ಳಿಯಲ್ಲಿ ಕಲಿಂದಿ ನೆಲೆಸಿದ್ದು, ಸಾಫ್ಟ್‌ವೇರ್ ಕಂಪನಿಯಲ್ಲಿ ಅವರು ಉದ್ಯೋಗದಲ್ಲಿದ್ದಾರೆ. ಪ್ರತಿದಿನ ಕಾರಿನಲ್ಲಿ ಅವರು ಕೆಲಸಕ್ಕೆ ಹೋಗಿ ಬರುತ್ತಿದ್ದರು. ಅಂತೆಯೇ ಶುಕ್ರವಾರ ರಾತ್ರಿ 8.30ರಲ್ಲಿ ಕೆಲಸ ಮುಗಿಸಿ ಕಾರು ಚಲಾಯಿಸಿಕೊಂಡು ಟೆಕ್ಕಿ ಮನೆಗೆ ಹೊರಟ್ಟಿದ್ದರು. ಆಗ ಮಾರ್ಗ ಮಧ್ಯೆ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪ ಹಠಾತ್ತಾಗಿ ಅವರಿಗೆ ಉಸಿರಾಟ ಸಮಸ್ಯೆ ಎದುರಾಗಿದೆ. ಅದೇ ವೇಳೆ ಆ ಜಂಕ್ಷನ್‌ನಲ್ಲಿ ಮಡಿವಾಳ ಸಂಚಾರ ಠಾಣೆ ಹೆಚ್‌ಸಿ ದತ್ತಾತ್ರೇಯ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯಪಾಲರ ಪಯಣದ ಹಿನ್ನಲೆಯಲ್ಲಿ ಸಂಚಾರ ನಿರ್ವಹಣೆ ಕರ್ತವ್ಯದಲ್ಲಿ ಹೆಡ್‌ ಕಾನ್‌ಸ್ಟೇಬಲ್ ವ್ಯಸ್ತರಾಗಿದ್ದರು. ಆಗ ಕಾರಿನಲ್ಲಿ ಕಲಿಂದಿ ಅವರು ಕೈ ಸನ್ನೆ ಮಾಡಿ ರಕ್ಷಣೆಗೆ ಕರೆಯುತ್ತಿದ್ದನ್ನು ದತ್ತಾತ್ರೇಯ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣೇ ಕಾರಿನ ಬಳಿಗೆ ತೆರಳಿ ಅವರಿಗೆ ದತ್ತಾತ್ರೇಯ ನೆರವಾಗಿದ್ದಾರೆ. ಆ ಕಾರಿಗೆ ಹ್ಯಾಂಡ್ ಬ್ರೇಕ್ ಹಾಕಿ ನಿಲ್ಲಿಸಿದ


ಹೆಡ್‌ ಕಾನ್‌ಸ್ಟೇಬಲ್‌, ತಾವೇ ಆ ಕಾರನ್ನು ಚಲಾಯಿಸಿಕೊಂಡು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕಲಿಂದಿ ಅವರನ್ನು ಕರೆದೊಯ್ದಿದ್ದಾರೆ. ಬಳಿಕ ವಿಷಯವನ್ನು ಇನ್ಸ್‌ಪೆಕ್ಟರ್‌ ಈಶ್ವರಿ ಅವರಿಗೆ ದತ್ತಾತ್ರೇಯ ಮುಟ್ಟಿಸಿದ್ದಾರೆ. ಆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಬೇರೊಂದು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಆನಂತರ ಸಂತ್ರಸ್ತೆಯ ಪತಿ ಅವರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸಕಾಲದಲ್ಲಿ ವೈದ್ಯೋಪಾಚಾರ ದೊರಕಿದ ಪರಿಣಾಮ ಕಲಿಂದಿ ಅವರು ಜೀವ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.