ಬೇಲೂರು: ದೇಶದಲ್ಲೆಡೆ ಶುಕ್ರವಾರ ಚಂದ್ರನ ದರ್ಶನವಾದ ಹಿನ್ನೆಲೆಯಲ್ಲಿ ಪಟ್ಟಣದ ಕೇಂದ್ರ ಜಾಮಿಯಾ ಮಸೀದಿಯ ಧರ್ಮಗುರು ಸೈಯದ್ ಅಹಮದ್ ಅಶ್ರಫಿ ಅವರು ಶನಿವಾರ ಈದುಲ್ ಫಿತರ್ ಆಚರಿಸಲಾಗುತ್ತಿದೆ ಎಂದು ಘೋಷಿಸಿದರು.
ಸಾಮಾಜಿಕ ಹೋರಾಟಗಾರ ನೂರ್ ಅಹಮದ್ ಮಾತನಾಡಿ, “ಅಲ್ಲಾಹ್ ನಮ್ಮ ಉಪವಾಸ, ಪ್ರಾರ್ಥನೆ ಮತ್ತು ಸತ್ಕರ್ಮಗಳನ್ನು ಸ್ವೀಕರಿಸಲಿ. ರಂಜಾನ್ ಹಬ್ಬವು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಬಡವರು ಹಾಗೂ ಅನಾಥರೊಂದಿಗೆ ಹಂಚಿಕೊಳ್ಳುವ ಹಬ್ಬವಾಗಿರಬೇಕು” ಎಂದು ಹೇಳಿದರು. ಮುಸ್ಲಿಂ ಒಕ್ಕೂಟದ ಅಧ್ಯಕ್ಷ ನಹೀಮ್ ಅವರು, “ರಂಜಾನ್ ಸಹೋದರತ್ವ, ತ್ಯಾಗ ಮತ್ತು ಧಾರ್ಮಿಕ ಶಿಸ್ತಿನ ಮಹತ್ವವನ್ನು ಸಾರುವ ಪವಿತ್ರ ಕಾಲ. ಉಪವಾಸದ ಮೂಲಕ ನಾವು ನಮ್ಮ ಆಸೆ, ಆಕಾಂಕ್ಷೆಗಳನ್ನು ನಿಯಂತ್ರಿಸಿ ಆಧ್ಯಾತ್ಮಿಕ ಶಕ್ತಿಯನ್ನು ಪಡೆಯುತ್ತೇವೆ. ಈ ಸಂದರ್ಭದಲ್ಲಿ ಎಲ್ಲರೂ ಪ್ರೀತಿ, ಶಾಂತಿ ಮತ್ತು ಏಕತೆಯನ್ನು ಬೆಳೆಸೋಣ” ಎಂದು ಹೇಳಿದರು. ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಒದಗಿಸಿತ್ತು.
ಈ ಸಂದರ್ಭದಲ್ಲಿ ಪೇಟೆ ಜಾಮಿಯಾ ಮಸೀದಿ ಅಧ್ಯಕ್ಷ ಇಫ್ರಾಜ್, ಕೋಟೆ ಜಾಮಿಯಾ ಮಸೀದಿ ಅಧ್ಯಕ್ಷ ರಫೀಕ್, ಹಳೇಬೀಡು-ಬೇಲೂರು ಪ್ರಾಧಿಕಾರ ಅಧ್ಯಕ್ಷ ಸೈಯದ್ ತೌಫಿಕ್, ಪುರಸಭೆ ಸದಸ್ಯ ಜಮಾಲ್, ಮಾನವ ಹಕ್ಕು ಆಯೋಗದ ರಾಜ್ಯಾಧ್ಯಕ್ಷ ಅಹಮದ್ ಅಲಿ ಖಾನ್, ಮುಸ್ಲಿಂ ಮುಖಂಡರಾದ ಜಾಕಿರ್ ಪಾಶಾ, ಸೈಯದ್ ಜಮೀಲ್, ಮುಜಮಿಲ್, ಮುಶೀರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಡಿವೈಎಸ್ಪಿ ಪರಶುರಾಮ್, ಸರ್ಕಲ್ ಇನ್ಸ್ಪೆಕ್ಟರ್ ರೇವಣ್ಣ, ಸಬ್ ಇನ್ಸ್ಪೆಕ್ಟರ್ ಎಸ್. ಜೆ. ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.