ಜೀವನದ ಉನ್ನತಿಗೆ ಧರ್ಮ ಪಾಲನೆ ಮುಖ್ಯ: ರಂಭಾಪುರಿ ಶ್ರೀ

KannadaprabhaNewsNetwork |  
Published : Mar 22, 2026, 01:30 AM IST
ಫೋಟೊ:೨೧ಕೆಪಿಸೊರಬ-೦೧ : ಸೊರಬ ತಾಲೂಕಿನ ದುಗ್ಲಿ ಗ್ರಾಮದ ಶ್ರೀ ಗುರು ರೇವಣಸಿದ್ಧೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಲಿಂ. ಮುರುಘೇಂದ್ರ ಸ್ವಾಮಿಗಳವರ ೭ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಮಾನವ ಜೀವನದ ಉನ್ನತಿಗೆ ಮತ್ತು ಪ್ರಗತಿಗೆ ಧರ್ಮ ಪರಿಪಾಲನೆ ಮುಖ್ಯ. ಮಾತು ಮನ ಕೃತಿ ಒಂದಾಗಿ ಬಾಳಿದರೆ ಬದುಕಿಗೆ ಬಹಳಷ್ಟು ಬೆಲೆ ಬರುತ್ತದೆ. ಸತ್ಯ ಶುದ್ಧವಾದ ಧರ್ಮ ಪಾಲನೆಯಿಂದ ಜೀವನ ಉಜ್ವಲಗೊಳ್ಳುವುದು ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸೊರಬ

ಮಾನವ ಜೀವನದ ಉನ್ನತಿಗೆ ಮತ್ತು ಪ್ರಗತಿಗೆ ಧರ್ಮ ಪರಿಪಾಲನೆ ಮುಖ್ಯ. ಮಾತು ಮನ ಕೃತಿ ಒಂದಾಗಿ ಬಾಳಿದರೆ ಬದುಕಿಗೆ ಬಹಳಷ್ಟು ಬೆಲೆ ಬರುತ್ತದೆ. ಸತ್ಯ ಶುದ್ಧವಾದ ಧರ್ಮ ಪಾಲನೆಯಿಂದ ಜೀವನ ಉಜ್ವಲಗೊಳ್ಳುವುದು ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತಾಲೂಕಿನ ದುಗ್ಲಿ ಗ್ರಾಮದ ಶ್ರೀ ಗುರು ರೇವಣಸಿದ್ಧೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಲಿಂ. ಮುರುಘೇಂದ್ರ ಸ್ವಾಮಿಗಳವರ ೭ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಮನುಷ್ಯ ವಿದ್ಯೆ ಸಂಪಾದಿಸುವಾಗ ಮತ್ತು ಸಂಪತ್ತು ಗಳಿಸುವಾಗ ಈ ಭೂಮಿಯ ಮೇಲೆ ಬಹಳಷ್ಟು ವರ್ಷ ಬದುಕುತ್ತೇವೆ ಎಂಬ ನಂಬಿಕೆ ಇರಬೇಕು. ಧರ್ಮಾಚರಣೆ ಮಾಡುವಾಗ ಯಾವ ಘಳಿಗೆಯಲ್ಲಿ ಮೃತ್ಯು ಬರುತ್ತದೆ ಎಂಬುದನ್ನು ಊಹಿಸಲಾಗದು. ದೇಹ ಗಟ್ಟಿಯಿರುವಾಗ ಉಸಿರು ಇರುವಾಗ ಧರ್ಮ ಪಾಲನೆ ಮಾಡಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮ ಸೂತ್ರಗಳು ಮತ್ತು ಶರಣರು ಆಚರಿಸಿಕೊಂಡು ಬಂದ ಧರ್ಮ ಸೂತ್ರಗಳು ಒಂದೇ ಆಗಿವೆ. ಮಠಾಧ್ಯಕ್ಷರಾದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ದುಗ್ಲಿ ಮಠವನ್ನು ಅದ್ಭುತವಾಗಿ ಅಭಿವೃದ್ಧಿಪಡಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿ ರೇಶ್ಮೆ ಮಡಿ ಸ್ಮರಣಿಕೆ ನೀಡಿ ಶುಭ ಹಾರೈಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಆರೋಗ್ಯ ಧರ್ಮ ಕಾರ್ಯಗಳಲ್ಲಿ ಯಾರೂ ರಾಜಕೀಯ ಮಾಡಬಾರದು. ಧರ್ಮದ ಉಳಿವು ಮತ್ತು ಆಚರಣೆ ಜೀವನದ ಶ್ರೇಯಸ್ಸಿಗೆ ಕಾರಣ. ಗುರು ಕಾರುಣ್ಯ ಎಲ್ಲರ ಮೇಲೂ ಇರಬೇಕು ಎಂದರು.

ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶ್ರೀಗಳು ಮಾತನಾಡಿ, ಮಲೆನಾಡಿನಲ್ಲಿ ಧರ್ಮ ಪ್ರಸಾರ ತುಂಬಾ ಕಷ್ಟ. ಆದರೂ ೧೨ ವರ್ಷದ ಅವಧಿಯಲ್ಲಿ ಭಕ್ತರ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ತಮಗೆ ತೃಪ್ತಿ ತಂದಿವೆ ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ ಲಿಂ. ಮುರುಘೇದ್ರ ಶ್ರೀಗಳ ಭಾವ ಚಿತ್ರ ಬಿಡುಗಡೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಕಾನುಗೋಡಿನ ಕೃಷ್ಣಮೂರ್ತಿ, ಓಂಕಾರಪ್ಪ ಸ್ವಾಮಪ್ಪ, ಭಾಶಿಯ ಶಿವಪ್ಪ ಕೃಷ್ಣ ಬಡಿಗೇರ, ಯು. ಸಂಗಪ್ಪ, ವನಮಾಲ ಶ್ರೀಪತಿ ಪತ್ರೆ, ಮಲ್ಲೇಶಪ್ಪ ಕೆ. ಸುರಹೊನ್ನೆ, ಡಾ| ಶ್ರೀಧರ, ಡಾ| ಪ್ರಭು ಸಾಹುಕಾರ ಬಾರಂಗಿ, ಲಿಂಗರಾಜ ಬಂಗಾರಪ್ಪ ಗೌಡ್ರು, ವಿನಯ ಪಾಟೀಲ್, ಶ್ರೀನಿವಾಸ ಹೆಬ್ಬಾರ್, ಕೆ.ಆರ್. ರೇಣುಕಮ್ಮ ಇವರಿಗೆ ಶ್ರೀ ಗುರು ರೇವಣಸಿದ್ಧೇಶ್ವರ ಸದ್ಭಾವನಾ ಸಿರಿ ಪ್ರಶಸ್ತಿ ನೀಡಿ ಜಗದ್ಗುರುಗಳು ಶುಭ ಹಾರೈಸಿದರು.

ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಜಿ.ಪಂ. ಮಾಜಿ ಸದಸ್ಯ ಗುರುಕುಮಾರ ಪಾಟೀಲ್, ಮುಖಂಡ ಗುರುಪ್ರಸನ್ನಗೌಡ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ ಸಂಭ್ರಮದಿAದ ಜರುಗಿತು. ಸಮಾರಂಭದ ನಂತರ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನರವೇರಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಕಲ್ಯಾಣಕ್ಕಾಗಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ
ಛಾಯಾಗ್ರಾಹಕರ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ