ಕನ್ನಡಪ್ರಭ ವಾರ್ತೆ ಚಾಮರಾಜನಗರಈ ಲೋಕಸಭಾ ಕ್ಷೇತ್ರಕ್ಕೆ ಅಂಟಿರುವ ಹಿಂದುಳಿದ ಕ್ಷೇತ್ರ ಹಣೆಪಟ್ಟಿ ಹೋಗಲಾಡಿಸಿ, ಅಭಿವೃದ್ದಿಯ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಕನಸು ಎಂದು ಚಾಮರಾಜನಗರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಹೇಳಿದರು.ಪತ್ರಕರ್ತರೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, ಈ ಕ್ಷೇತ್ರ ಧಾರ್ಮಿಕ ಪುರುಷರಾದ ಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿ ರಂಗನಾಥ, ಹಿಮವದ್ ಗೋಪಾಲಸ್ವಾಮಿ ನೆಲೆಗೊಂಡ ಪುಣ್ಯಕ್ಷೇತ್ರ. ಶೇ. ೫೦ರಷ್ಟು ಅರಣ್ಯವನ್ನೊಳಗೊಂಡು, ಬುಡಕಟ್ಟು ಜನರನ್ನು ಹೊಂದಿರುವ ಈ ಕ್ಷೇತ್ರವನ್ನು ಸಮಾನವಾಗಿ ಅಭಿವೃದ್ದಿ ಮಾಡುವುದೇ ನನ್ನ ಗುರಿ ಎಂದರು.ಕ್ಷೇತ್ರದಲ್ಲ್ಲಿಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಬುಡಕಟ್ಟು ಜನರಿಗೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು. ಬೆಂಗಳೂರು- ಕನಕಪುರ-ಚಾಮರಾಜನಗರ ರೈಲ್ವೆ ಮಾರ್ಗ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೈಸೂರು ಭಾಗ, ಚಾಮರಾಜನಗರ ಭಾಗ ಎನ್ನದೇ ೮ ವಿಧಾನಸಭಾ ಕ್ಷೇತ್ರ ಒಳಗೊಂಡ ಕ್ಷೇತ್ರಕ್ಕೆ ಕೇಂದ್ರದಿಂದ ಸಿಗುವ ಎಲ್ಲ ಅನುದಾನವನ್ನು ಸಮಾನಾಗಿ ಹಂಚಿ ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲೇ ನಾನು ಟಿ.ನರಸೀಪುರ ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ಆದರೆ ಧ್ರುವನಾರಾಯಣರ ಅಕಾಲಿಕ ಸಾವಿನಿಂದಾಗಿ ದರ್ಶನ್ ಅವರಿಗೆ ನಂಜನಗೂಡಿನಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ನನ್ನ ತಂದೆ ಟಿ.ನರಸೀಪುರ ಕ್ಷೇತ್ರದಲ್ಲೇ ನಿಲ್ಲಬೇಕಾಯಿತು. ಈ ಬಾರಿ ಈ ಲೋಕಸಭಾ ಕ್ಷೇತ್ರಕ್ಕೆ ನನ್ನನ್ನು ಸೇರಿದಂತೆ ೮ ಮಂದಿ ಆಕಾಂಕ್ಷಿಗಳಾಗಿದ್ದರು. ಕೇಂದ್ರ ಚುನಾವಣಾ ಸಮಿತಿ, ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಪಕ್ಷದ ನಾಯಕರು, ನನಗೆ ಟಿಕೆಟ್ ನೀಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಧೃವನಾರಾಯಣ್ ಹೆಸರು ಹೇಳಿ ಮತ ಕೇಳುವ ನೈತಿಕತೆ ಬಿಜೆಪಿ ಅಭ್ಯರ್ಥಿಗಿಲ್ಲ, ಧ್ರುವನಾರಾಯಣ ಮರಣದ ನಂತರ ಅವರ ಮಗನ ಗೆಲುವಿಗೆ ಶ್ರಮಿಸದೇ ಬಿಜೆಪಿ ಸೇರಿರುವ ಇವರಿಗೆ ಯಾವ ನೈತಿಕತೆಯು ಇಲ್ಲ ಎಂದರು.ಕಳೆದ ೧೦ ವರ್ಷದಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬರೀ ಸುಳ್ಳುಗಳನ್ನೇ ಹೇಳುತ್ತಾ, ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಬದುಕನ್ನು ಕಷ್ಟಕರಗೊಳಿಸಿದೆ. ಶ್ರೀನಿವಾಸಪ್ರಸಾದ್ ಬೆಂಬಲಿಗರು ನನಗೆ ಬೆಂಬಲ ಸೂಚಿಸಿದ್ದಾರೆ. ಕೆಲವರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಸಂವಾದದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್ ಇದರು.ನನ್ನ ಜೀವನ ತೆರೆದ ಪುಸ್ತಕ: ಬೋಸ್
ಚಾಮರಾಜನಗರ: ವೈವಾಹಿಕ ವಿವರ ಮರೆಮಾಚಿ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮಾತನಾಡಿ, ಮೊದಲು ನನಗೆ ನೋಟಿಸ್ ಬರಲಿ ಸರಿಯಾದ ಉತ್ತರ ಕೊಡ್ತೀನಿ. ನನ್ನ ಜೀವನ ತೆರೆದ ಪುಸ್ತಕ ವಿಪಕ್ಷದವರು ನನ್ನನ್ನು ವೈಯಕ್ತಿಕವಾಗಿ ಕುಂದಿಸೋ ಕೆಲಸ ಮಾಡ್ತಿದ್ದಾರೆ. ನಾನು ಯಾವುದಕ್ಕೂ ಕುಗ್ಗೋದಿಲ್ಲ ಇದೆಲ್ಲವನ್ನು ಎದುರಿಸೋ ತಾಕತ್ತು ಸಾಮರ್ಥ್ಯ ನನ್ನಲಿದೆ. ಲೀಗಲ್ ಆಗಿ ನೋಟಿಸ್ ಬರಲಿ ಉತ್ತರಿಸ್ತೀನಿ ಎಂದು ಹೇಳಿಕೆ ನೀಡಿದರು.ಸಿಎಂ- ಪ್ರಸಾದ್ ಭೇಟಿ ನನಗೆ ಅನುಕೂಲ: ಬೋಸ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಶಕ್ತಿ ಇದೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. ಅವರು, ಹಿರಿಯರು, ಅನುಭವಿ ಅವರಿಗೆ ಅವರದ್ದೇ ಆದ ಅಭಿಮಾನಿ ಪಡೆಯಿದೆ. ಜೂನ್ 4 ರ ಫಲಿತಾಂಶದಲ್ಲಿ ಈ ಭೇಟಿಯ ಫಲಿತಾಂಶ ಗೊತ್ತಾಗುತ್ತದೆ. ಈ ಭೇಟಿಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರಿಯಾಗಲಿದೆ. ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲಿಗರಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ಇದರಿಂದ ನನಗೆ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂದರು.