ದಶಕಗಳ ಭೂ ವಿವಾದಕ್ಕೆ ಅಂತ್ಯ ಹಾಡಲು ನನ್ನ ಭೂಮಿ ಅಭಿಯಾನ

KannadaprabhaNewsNetwork |  
Published : Feb 07, 2026, 01:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ದಶಕಗಳ ಭೂ ವಿವಾದಗಳಿಗೆ ಇತಿಶ್ರೀ ಹಾಡಲು ಕಂದಾಯ ಇಲಾಖೆ ಕ್ರಾಂತಿಕಾರಿ ನನ್ನ ಭೂಮಿ ಅಭಿಯಾನ ಆರಂಭಿಸಿದ್ದು, ರೈತರು, ಸಾರ್ವಜನಿಕರ ಕಂದಾಯ ಕಚೇರಿಗಳ ಅಲೆದಾಟ ತಪ್ಪಿಸಲು ಮನೆ ಬಾಗಿಲಿಗೇ ಸೇವೆ ತಲುಪಿಸಲು ಅನೇಕ ಜನಪರ ಕಾರ್ಯಕ್ರಮಗಳನ್ನೂ ಜಾರಿಗೊಳಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

- ಕಂದಾಯ ಇಲಾಖೆ ಕ್ರಾಂತಿಕಾರಿ ಅಭಿಯಾನ: ಸಚಿವ ಕೃಷ್ಣ ಭೈರೇಗೌಡ ।

- ಎರಡೂವರೆ ವರ್ಷದಲ್ಲಿ ಒಟ್ಟು 2,70,000 ಹಕ್ಕುಪತ್ರ: ಕಂದಾಯ ಸಚಿವ

- - -

ಕನ್ನಡಪ್ರಭ ವಾರ್ತೆ ದಾವಗೆರೆ

ದಶಕಗಳ ಭೂ ವಿವಾದಗಳಿಗೆ ಇತಿಶ್ರೀ ಹಾಡಲು ಕಂದಾಯ ಇಲಾಖೆ ಕ್ರಾಂತಿಕಾರಿ ನನ್ನ ಭೂಮಿ ಅಭಿಯಾನ ಆರಂಭಿಸಿದ್ದು, ರೈತರು, ಸಾರ್ವಜನಿಕರ ಕಂದಾಯ ಕಚೇರಿಗಳ ಅಲೆದಾಟ ತಪ್ಪಿಸಲು ಮನೆ ಬಾಗಿಲಿಗೇ ಸೇವೆ ತಲುಪಿಸಲು ಅನೇಕ ಜನಪರ ಕಾರ್ಯಕ್ರಮಗಳನ್ನೂ ಜಾರಿಗೊಳಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಭೂಮಿ’ ಮತ್ತು ಪೋಡಿಮುಕ್ತ ಅಭಿಯಾನದಡಿ ಕಳೆದೊಂದು ವರ್ಷದಲ್ಲಿ ರಾಜ್ಯಾದ್ಯಂತ 1,89,300 ರೈತರ ಜಮೀನುಗಳ ಪೋಡಿ ದುರಸ್ತ ಮಾಡಿಕೊಡಲಾಗಿದೆ. ಮುಂದಿನ 3-4 ತಿಂಗಳಲ್ಲಿ ಇದನ್ನು 2.5ರಿಂದ 3 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ಮೃತಪಟ್ಟವರ ಹೆಸರಿನ ಸುಮಾರು 90,000 ಜಮೀನು ಪೈಕಿ ಮಾರ್ಚ್ ಅಂತ್ಯದೊಳಗೆ ಕನಿಷ್ಠ ಶೇ.50ರಷ್ಟು ಪೌತಿ ಖಾತೆ ಆಂದೋಲನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ ರೈತರು ಅರ್ಜಿ ಹಾಕುವಂತಿಲ್ಲ, ಅಧಿಕಾರಿಗಳೇ ರೈತರ ಮನೆ ಬಾಗಿಲಿಗೆ ಹೋಗಿ ಕನಿಷ್ಠ ದಾಖಲಾತಿ ಪಡೆದು, ಪೋಡಿ ಖಾತೆ ದುರಸ್ತ ಮಾಡಿಕೊಡುತ್ತಾರೆ ಎಂದು ಹೇಳಿದರು.

2013ರಿಂದ 2018 ರವರೆಗೆ 5840 ಪ್ರಕರಣ, 2018ರಿಂದ 2022 ರವರೆಗೆ 8500 ಪ್ರಕರಣ ಪೋಡಿ ಖಾತೆ ದುರಸ್ತನ್ನು ಮಾಡಲಾಗಿದೆ. ನನ್ನ ಅವಧಿಯಲ್ಲಿ ಕೇವಲ ಒಂದೇ ವರ್ಷದಲ್ಲಿ 1,89,300 ರೈತರ ಜಮೀನು ಪೋಡಿ ದುರಸ್ತನ್ನು ಮಾಡಲಾಗಿದೆ. ತಾಂಡಾ, ಹಟ್ಟಿ ಮತ್ತು ಹಾಡಿಗಳ ನಿವಾಸಿಗಳು ಸೇರಿದಂತೆ ಕೆಲ ವಸತಿ ಪ್ರದೇಶಗಳಲ್ಲಿ ಜನರ ಬಳಿ ದಾಖಲೆ ಇಲ್ಲದೇ ವಾಸ ಮಾಡುತ್ತಿದ್ದರು. ಅಂತಹವನ್ನು ಗುರುತಿಸಿ ಹೊಸ ಕಂದಾಯ ಗ್ರಾಮಗಳೆಂದು ಘೋಷಿಸಿ, ಆ ಕುಟುಂಬಗಳಿಗೆಲ್ಲಾ ಹಕ್ಕುಪತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು.

49 ಲಕ್ಷ ಜಮೀನು ಮೃತರ ಹೆಸರಿನಲ್ಲಿ:

ಎರಡೂವರೆ ವರ್ಷದಲ್ಲಿ ಒಟ್ಟು 2,70,000 ಹಕ್ಕುಪತ್ರ ಸಿದ್ಧಪಡಿಸಿದೆ. ಹೊಸಪೇಟೆಯಲ್ಲಿ ಸುಮಾರು 1,11 ಲಕ್ಷ ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಿಸಲಾಗಿತ್ತು. ಫೆ.14ಕ್ಕೆ ಹಾವೇರಿಯಲ್ಲಿ ಸುಮಾರು 1,10 ಲಕ್ಷ ಹಕ್ಕುಪತ್ರ ವಿತರಿಸಲಾಗುವುದು. ರಾಜ್ಯದಲ್ಲಿ 49 ಲಕ್ಷ ಜಮೀನು ಮೃತರ ಹೆಸರಿನಲ್ಲಿವೆ. ಅವನ್ನು ಗುರುತಿಸಿ ವಾರಸುದಾರ ಖಾತೆಗೆ ವರ್ಗಾವಣೆ ಮಾಡಲು ಕ್ರಮ ವಹಿಸಲಾಗಿದೆ. ಅದರಲ್ಲಿ 11 ಲಕ್ಷ ಜಮೀನನ್ನು ಇ-ಪೌತಿ ಅಭಿಯಾನದಡಿ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ಕೈಗೊಂಡಿದೆ ಎಂದು ಅವರು ವಿವರಿಸಿದರು.

2 ತಿಂಗಳಲ್ಲಿ ಮುಗಿಸಲು ಗುರಿ:

ದಾವಣಗೆರೆ ಜಿಲ್ಲೆಯ ಪೋಡಿ ಪ್ರಕರಣಗಳಂತಹ ದೀರ್ಘಕಾಲದ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 60-70ರ ದಶಕದಿಂದ ಬಾಕಿ ಇರುವ 8,000 ಪೋಡಿ ಪ್ರಕರಣಗಳಲ್ಲಿ ಈಗಾಗಲೇ 4,300 ಪೂರ್ಣಗೊಂಡಿದ್ದು, ಉಳಿದ ಪ್ರಕರಣ ಮುಂದಿನ 2 ತಿಂಗಳಲ್ಲಿ ಮುಗಿಸಲು ಗುರಿ ಹೊಂದಲಾಗಿದೆ. ಭೂಮಿಗೆ ಸಂಬಂಧಿಸಿದ ಗೊಂದಲ ನಿವಾರಿಸಿ ಜನರಿಗೆ ಭೂ ಗ್ಯಾರಂಟಿ ನೀಡಲು ಸರ್ಕಾರ ಶ್ರಮಿಸುತ್ತಿದೆ. ಇಲಾಖೆಯಲ್ಲಿ ಇನ್ನೂ ಮಾಡಬೇಕಾದ ಕೆಲಸ ಸಾಕಷ್ಟಿದ್ದು, ಆದ್ಯತೆ ಮೇರೆಗೆ ಅವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು.

63 ಕೋಟಿ ಪುಟ ಸ್ಕ್ಯಾನಿಂಗ್:

ಇಲಾಖೆ ಎಲ್ಲ ಮೂಲ ಕಡತ, ದಾಖಲೆ ಸ್ಕ್ಯಾನ್ ಮಾಡುವ ‘ಭೂ ಸುರಕ್ಷಾ’ ಯೋಜನೆಯಡಿ ಈವರೆಗೆ 63 ಕೋಟಿ ಪುಟ ಸ್ಕ್ಯಾನಿಂಗ್ ಮಾಡಲಾಗಿದೆ. ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆಯುವುದು ತಪ್ಪುತ್ತದೆ. ಅಲ್ಲದೆ ಕಡತ ಕಾಣೆಯಾಗುವುದು, ತಿದ್ದುಪಡಿ ತಪ್ಪಿ ಹೋಗುತ್ತದೆ. ಇವುಗಳನ್ನು ಸಂರಕ್ಷಿಸಿದಂತೆಯೂ ಆಗುತ್ತದೆಯ ಇನ್ನು ಮುಂದೆ ಆನ್‍ಲೈನ್‍ನಲ್ಲಿ ಪ್ರಮಾಣೀಕೃತ ನಕಲುಗಳನ್ನು ಜನರು ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.

ಇನ್ನೂ 1,000 ರೋವರ್ಸ್‍ ಖರೀದಿ:

ಸರ್ವೇ ಇಲಾಖೆಯಲ್ಲಿ ''''''''''''''''ರೋವರ್ಸ್''''''''''''''''ನಂತಹ ಆಧುನಿಕ ಉಪಕರಣ ಬಳಸಲಾಗುತ್ತಿದೆ. ಚೈನ್ ಹಿಡಿದು ಅಳೆಯುವುದಕ್ಕಿಂತ ಈ ತಂತ್ರಜ್ಞಾನದ ಬಳಕೆಯಿಂದ ಕೇವಲ ಶೇ.10 ಶ್ರಮದಲ್ಲಿ ಕೆಲಸ ಮುಗಿಸಬಹುದು. ಈಗಾಗಲೇ 600 ರೋವರ್ಸ್‍ ಖರೀದಿಸಿದ್ದು, ಇನ್ನೂ 1,000 ರೋವರ್ಸ್‍ ಖರೀದಿಸಲಾಗುತ್ತಿದೆ. ಇದು ಸರ್ವೇಯರ್‌ಗಳ ಒತ್ತಡವನ್ನು ಕಡಿಮೆ ಮಾಡಿ, ಅಂತಹವರ ಕೆಲಸದ ವೇಗವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

- - -

(ಬಾಕ್ಸ್‌)

* ಗ್ರಾಮ ಲೆಕ್ಕಿಗನಿಂದ ಮಂತ್ರಿವರೆಗೆ ಇ-ಆಫೀಸ್‌ನಲ್ಲೇ ಕೆಲಸ!

- ರಾಜ್ಯದಲ್ಲಿ 750 ಸರ್ವೇಯರ್‌ಗಳ ನೇಮಕಾತಿ ಪ್ರಕ್ರಿಯೆ ಸಾಗಿದೆ: ಕೃಷ್ಣ ಭೈರೇಗೌಡ

ದಾವಣಗೆರೆ: ರಾಜ್ಯದಲ್ಲಿ ಗ್ರಾಮ ಲೆಕ್ಕಿಗರಿಂದ ಹಿಡಿದು ಮಂತ್ರಿಗಳವರೆಗೆ ಎಲ್ಲರೂ ಶೇ.100ರಷ್ಟು ಇ-ಆಫೀಸ್ ಮೂಲಕವೇ ಮಾರ್ಚ್ ತಿಂಗಳಿನಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವ್ಯವಸ್ಥೆ ಮೂಲಕ ಯಾವ ಕಡತ ಯಾರ ಬಳಿ ಎಷ್ಟು ದಿನಗಳಿಂದ ಬಾಕಿ ಇದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಿದೆ. ಇ-ಆಫೀಸ್ ವ್ಯವಸ್ಥೆಯಿಂದ ಇ-ಆಫೀಸ್‍ನಲ್ಲಿ ಫೈಲ್‍ ಕಳೆದು ಹಾಕಲು ಸಾಧ್ಯವೇ ಇಲ್ಲ ಎಂದರು.

ಹಿಂದೆಲ್ಲಾ ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಹೋಗಲು ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದ ಕಡತಗಳು ಈಗ ಒಂದು ಕ್ಷಣದಲ್ಲಿ ವರ್ಗಾವಣೆ ಆಗುತ್ತವೆ. ಈ ವ್ಯವಸ್ಥೆಯು ಕೆಲಸದಲ್ಲಿ ವೇಗ ತರುತ್ತದೆ. ಕಡತಗಳನ್ನು ಮುಚ್ಚಿಡಲು ಬರುವುದಿಲ್ಲ ಮತ್ತು ಪಾರದರ್ಶಕತೆಯಿಂದ ಕೆಲಸಗಳು ಆಗುತ್ತವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಭೂಮಿ ಮಾಲೀಕತ್ವವು ಆರ್ಥಿಕ ಶಕ್ತಿ ನೀಡುವ ಬದಲು, ಇಂದು ಅನೇಕರಿಗೆ ಗೊಂದಲ ಮತ್ತು ವ್ಯಾಜ್ಯದ ಮೂಲವಾಗಿದೆ. ವ್ಯವಸ್ಥೆಯಲ್ಲಿನ ಗೊಂದಲಗಳಿಗೆ ಕಾರಣ ಹುಡುಕಿ ಅವುಗಳನ್ನು ಸರಿಪಡಿಸುವ ಮೂಲಕ "ಭೂ ಗ್ಯಾರಂಟಿ " ನೀಡುವತ್ತ ಸರ್ಕಾರ ಸಂಕಲ್ಪ ಮಾಡಿದೆ. ಈ ಬಗ್ಗೆ ತಮ್ಮ ಸರ್ಕಾರ ಹೆಚ್ಚು ಗಮನಹರಿಸಿದೆ ಎಂದು ತಿಳಿಸಿದರು.

ಕಳೆದ ವರ್ಷ 1,000 ಗ್ರಾಮ ಲೆಕ್ಕಿಗರನ್ನು ನೇಮಿಸಿಕೊಳ್ಳಲಾಗಿದ್ದು, ಪ್ರಸ್ತುತ 750 ಸರ್ವೇಯರ್‌ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 5,000 ಗ್ರಾಮ ಲೆಕ್ಕಿಗರಿಗೆ ಲ್ಯಾಪ್‍ಟಾಪ್ ನೀಡಿದ್ದು, ಮಾರ್ಚ್ ವೇಳೆಗೆ ಉಳಿದ 2 ಸಾವಿರ ಜನರಿಗೂ ವಿತರಿಸಲಾಗುವುದು. ಇದು ಹೊಸ ತಂತ್ರಜ್ಞಾನ ಬಳಸಿ ಕೆಲಸ ಮಾಡಲು ಸಹಕಾರಿ ಎಂದು ಅವರು ಹೇಳಿದರು.

ಈ ಹಿಂದೆ 8,345 ಗ್ರಾಮ ಲೆಕ್ಕಿಗರಲ್ಲಿ ಕೇವಲ 2 ಸಾವಿರ ಜನರಿಗೆ ಮಾತ್ರ ಕಚೇರಿಗಳಿದ್ದವು. ತಾವು ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ, ಗ್ರಾಪಂಗಳಲ್ಲೇ 7,850 ಗ್ರಾಮ ಲೆಕ್ಕಿಗರಿಗೆ ಕಚೇರಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಜನರಿಗೆ ಗ್ರಾಮ ಲೆಕ್ಕಿಗರು ಸುಲಭವಾಗಿ ಲಭ್ಯವಾಗುತ್ತಾರೆ ಎಂದು ಅವರು ವಿವರಿಸಿದರು.

ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರ ನ್ಯಾಯಾಲಯಗಳಲ್ಲಿ ಹೆಚ್ಚು ಸುಧಾರಣೆ ತಂದು ತಹಸೀಲ್ದಾರರ ನ್ಯಾಯಾಲಯದಲ್ಲಿ ಬಾಕಿ ಇದ್ದ 10774 ಪ್ರಕರಣಗಳಲ್ಲಿ ಈಗ 480 ಪ್ರಕರಣ ಮಾತ್ರ ಬಾಕಿ ಉಳಿದಿವೆ. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 73624 ಪ್ರಕರಣಗಳಲ್ಲಿ 10800 ಮಾತ್ರ ಬಾಕಿ ಇವೆ. ಅವುಗಳನ್ನೂ ತ್ವರಿತವಾಗಿ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

- - -

-6ಕೆಡಿವಿಜಿ3, 4, 5.ಜೆಪಿಜಿ:

ದಾವಣಗೆರೆ ಡಿಸಿ ಕಚೇರಿಯಲ್ಲಿ ಶುಕ್ರವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಂತರ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ