ಕನ್ನಡಪ್ರಭ ವಾರ್ತೆ ಮೈಸೂರು
ವಾಹನಗಳ ಸಂಚಾರ ಹೆಚ್ಚಾಗಿ ಇಲ್ಲದ ಕಡೆಯೂ ಸಹ ಸಾಲಾಗಿ ಸಿಗ್ನಲ್ ಲೈಟುಗಳನ್ನು ಅಳವಡಿಸಿರುವುದರಿಂದ ಎ ಟಿ ಜೆ ( ಆರ್ಟಿಫಿಷಿಯಲ್ ಟ್ರಾಫಿಕ್ ಜಾಮ್) ನಿರ್ಮಾಣವಾಗಿದೆ. ಇಂತಹ ಅವೈಜ್ಞಾನಿಕ, ಅನಧಿಕೃತ, ಕೃತಕ ಬುದ್ದಿಮತ್ತೆಯ ಸಿಗ್ನಲ್ ಲೈಟುಗಳ ಕೃಪೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ದಾರಿದೀಪವಾಗಬೇಕಾದ ಸಿಗ್ನಲ್ ಲೈಟುಗಳು ದಾರಿಮುಳ್ಳಾಗಿವೆ.
ಮೈಸೂರು ನಗರದ ಹಲವೆಡೆ ಸಿಗ್ನಲ್ ಲೈಟುಗಳು ಕುಲಗೆಟ್ಟು ನೇತಾಡುತ್ತಿವೆ. ಆ ಲೈಟುಗಳನ್ನು ಹೊತ್ತ ಕಂಬಗಳು ನಿರ್ನಾಮವಾಗುತ್ತಿವೆ,ವೃತ್ತಗಳಲ್ಲಿ ಇರುವ ಕಂಬಗಳು ಕುಲಗೆಟ್ಟಿವೆ.ಈ ವಿಚಾರವನ್ನು ಪಾಲಿಕೆ,ಪ್ರಾಧಿಕಾರ,ಪೊಲೀಸ್ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದರೂ ಸಹ ಅವರಿಗೆ ಜ್ಞಾನೋದಯವಾಗಿಲ್ಲ.ಪೊಲೀಸ್ ಆಯುಕ್ತರು, ಪಾಲಿಕೆ ಆಯುಕ್ತರು, ಎಂಡಿಎ ಆಯುಕ್ತರು, ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಕೆ.ಜಿ. ಕೊಪ್ಪಲ್ ಅಂಡರ್ ಬ್ರಿಡ್ಜ್ ಬಳಿ ಇರುವ ಸಿಗ್ನಲ್ ಲೈಟುಗಳನ್ನು ದಾಟಿ ಸೇತುವೆಯ ಕೆಳಗೆ ಪ್ರವೇಶಿಸಿದರೆ ಅವರಿಗೆ ಸತ್ಯದರ್ಶನವಾದೀತು!
ಇದಕ್ಕೆ ಕಾರಣವೇನು?
ಲಾಭವಿಲ್ಲದ ತೇಪೆ ಕಾಮಗಾರಿ ಕೈಗೆತ್ತಿಕೊಳ್ಳಲು ಹಿಂದೇಟು ಹಾಕುವ ಈ ಮಹಾನುಭಾವರು ಹೊಸ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ. ಇದಕ್ಕೆ ಈ ಸಿಗ್ನಲ್ ಲೈಟುಗಳೇ ಸಾಕ್ಷಿ.
ರೇಲ್ವೆ ನಿಲ್ದಾಣದಿಂದ ನಂಜನಗೂಡು ರಸ್ತೆಯತ್ತ ಸಾಗುವ ಝಾನ್ಸಿ ಲಕ್ಷ್ಮೀ ಬಾಯಿ ರಸ್ತೆಯುದ್ದಕ್ಕೂ ಹತ್ತು ಭಾಗದಲ್ಲಿ ಸಿಗ್ನಲ್ ಲೈಟುಗಳಿವೆ. ಈ ಸಿಗ್ನಲ್ ಲೈಟುಗಳಿಂದಾಗಿಯೇ ಸಂಚಾರ ವ್ಯವಸ್ಥೆ ಕುಲಗೆಟ್ಟು ಹೋಗಿದೆ.
ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆಡಳಿತ ನಡೆಸುವ ಅಧಿಕಾರಿಗಳು ಹಾಗೂ ಝೀರೋ ಟ್ರಾಫಿಕ್ ಸೌಲಭ್ಯದೊಂದಿಗೆ ಬೆಂಗಾವಲು ವಾಹನದೊಂದಿಗೆ ಸರಾಗವಾಗಿ ಸಂಚರಿಸುವ ಮುಖ್ಯಮಂತ್ರಿಗಳು ಹಾಗೂ ಉಸ್ತುವಾರಿ ಮಂತ್ರಿಗಳಿಗೆ ಈ ಸಂಕಷ್ಟದ ಅರಿವಾಗಲು ಹೇಗೆ ಸಾಧ್ಯ?
ಮೈಸೂರಿನಲ್ಲಿ ಸಂಚರಿಸುವ ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರು ಕನಿಷ್ಠ ಒಂದು ಬಾರಿಯಾದರೂ ತಮ್ಮ ಹಿಂಬಾಲಕರು, ಮುಂಬಾಲಕರು, ಬೆಂಗಾವಲು ಪಡೆ ಹಾಗೂ ಝೀರೋ ಟ್ರಾಫಿಕ್ ಸೌಲಭ್ಯಗಳನ್ನು ಬದಿಗಿಟ್ಟು ಈ ಸಿಗ್ನಲ್ ಲೈಟುಗಳ ಚಕ್ರವ್ಯೂಹವನ್ನು ಬೇಧಿಸಿ ತಮ್ಮ ಗುರಿ ಮುಟ್ಟಲು ಪ್ರಯತ್ನಿಸಿದರೆ ಅವರಿಗೂ ಈ ಸಂಕಷ್ಟದ ಅರಿವಾಗಬಹುದು. ಇದರಿಂದ ಇಂತಹ ಕಮಿಷನಾಸಕ್ತ ಕಾಮಗಾರಿಗಳಿಗೂ ಬ್ರೇಕ್ ಬೀಳಬಹುದು.