ಕನಕಪುರ: ನ್ಯಾಕ್ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಅಳೆದು ನಿರ್ದಿಷ್ಟ ಮೌಲ್ಯ ಕೊಡುವ ಸಂಸ್ಥೆಯಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಐಕ್ಯೂಎಸಿ ಸಂಚಾಲಕ ಡಾ.ಜೆ.ಲೋಹಿತ್ ತಿಳಿಸಿದರು. ನಗರದ ರೂರಲ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಕ್ಗೆ ಪೂರಕ ದಾಖಲೆಗಳನ್ನು ಕೊಡುವ ವಿಧಾನಗಳನ್ನು ಸ್ಪಷ್ಟವಾಗಿ ಅರಿತರೆ ಮಾತ್ರ ಸುಲಭವಾಗಿ ಜಯಿಸಬಹುದು. ಕಾರ್ಯಕ್ರಮಗಳ ವರದಿ, ಫೋಟೋ, ಆಹ್ವಾನ ಪತ್ರಿಕೆ, ಹಾಜರಿದ್ದವರ ಮಾಹಿತಿ ಮತ್ತು ಸಂಸ್ಥೆಯ ಭೌತಿಕ ರೂಪಗಳು ಮತ್ತು ಬೆಳವಣಿಗೆಗಳು ನ್ಯಾಕ್ಗೆ ಬೇಕಾದ ಪ್ರಮುಖ ಮಾಹಿತಿಗಳು. ಹಾಗಾಗಿ 5 ವರ್ಷಗಳ ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು. ಮೈಸೂರು ವಿವಿ ಪ್ರಾಧ್ಯಾಪಕ ಡಾ.ಎಲ್.ನಂಜುಂಡ ಸ್ವಾಮಿ ಮಾತನಾಡಿ, ಯುಜಿಸಿ ವೇತನ ಮತ್ತು ಬಡ್ತಿಗೆ ಇರುವ ಮಾನದಂಡಗಳು ಮತ್ತು ಅರ್ಹತೆಗಳ ಕುರಿತು ವಿವಿರಿಸಿ, ಉನ್ನತ ಶಿಕ್ಷಣದಲ್ಲಿ ಯುಜಿಸಿ ನಿಯಮಾವಳಿಗಳನ್ನು ಅರ್ಥ ಮಾಡಿಕೊಂಡು ಪೂರಕ ದಾಖಲೆಯನ್ನು ಸಲ್ಲಿಸಿದಾಗ ಸಿಗುವ ಅನುಕೂಲಗಳು ಹಾಗೂ ಪ್ರಾಧ್ಯಾಪಕರಿಗೆ ಸಿಗುವ ವಿವಿಧ ರಜೆಗಳ ಕುರಿತು ವಿವರಿಸಿದರು. ಮೈಸೂರು ವಿವಿ ನಿವೃತ್ತ ಗ್ರಂಥಪಾಲಕ ಡಾ.ಸಿ.ಪಿ.ರಮೇಶ್ ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳಿಗೆ ಮಾಹಿತಿ ಮತ್ತು ಸಂಪನ್ಮೂಲಗಳ ಅಗತ್ಯ ಮತ್ತು ಅದರ ಉಪಯೋಗದ ಕುರಿತು ವಿವರಿಸಿದರು. ಆರ್ಇಎಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಪ್ರಾಂಶುಪಾಲ ಡಾ.ಕೆಂಪೇಗೌಡ, ಉಪಪ್ರಾಂಶುಪಾಲ ಡಾ.ಅಪ್ಪಾಜಿ, ಎ.ಪಿ.ಪ್ರಕಾಶ್ ಮಹೇಶ್, ಕನ್ನಿಕಾ ಪರಮೇಶ್ವರಿ, ಭೋಜರಾಜ್, ಮೋಹನ್ ಕುಮಾರ್, ಭಾರತಿ ಕಾಲೇಜು ಕೋಡಿಹಳ್ಳಿ, ಚನ್ನಪಟ್ಟಣ, ಕನಕಪುರ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರು ಭಾಗವಹಿಸಿದ್ದರು.
ಕನಕಪುರದ ರೂರಲ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ್ದ ನ್ಯಾಕ್ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಈ ವೇಳೆ ಆರ್ಇಎಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಪ್ರಾಂಶುಪಾಲ ಡಾ.ಕೆಂಪೇಗೌಡ, ಉಪಪ್ರಾಂಶುಪಾಲ ಡಾ.ಅಪ್ಪಾಜಿ, ಎ.ಪಿ.ಪ್ರಕಾಶ್ ಮಹೇಶ್, ಕನ್ನಿಕಾ ಪರಮೇಶ್ವರಿ, ಭೋಜರಾಜ್, ಮೋಹನ್ ಕುಮಾರ್ ಇತರರಿದ್ದರು.