ನಾಗಮಂಗಲ ಗಲಭೆ: ಭದ್ರಿಕೊಪ್ಪಲು ಗ್ರಾಮಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಭೇಟಿ

KannadaprabhaNewsNetwork |  
Published : Sep 26, 2024, 10:12 AM IST
25ಕೆಎಂಎನ್ ಡಿ29,30 | Kannada Prabha

ಸಾರಾಂಶ

ಘಟನೆ ಹಿಂದೆ ಭದ್ರಿಕೊಪ್ಪಲು ಗ್ರಾಮದ ಯುವಕರು ಇಲ್ಲ ಎನ್ನುವ ಮಾಹಿತಿ ಇದೆ. ಗಲಾಟೆಗೆ ಬೇರೆಯವರ ಕುಮ್ಮಕ್ಕು ಕಾರಣ. ಇಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯ ಜೈಲಿನಲ್ಲಿರುವ ಮತ್ತು ಭಯದಿಂದ ಊರು ಬಿಟ್ಟಿರುವವರು ಭಯ ಪಡೆದೆ ವಾಪಸ್ ಬನ್ನಿ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗಲಭೆ ನಂತರ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಯುವಕ ಕಿರಣ್‌ ಬ್ರೈನ್‌ಸ್ಟ್ರೋಕ್‌ನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಭದ್ರಿಕೊಪ್ಪಲಿನ ಕಿರಣ್ ನಿವಾಸಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬುಧವಾರ ಸಂಜೆ ಮೃತ ಕಿರಣ್‌ ಅವರ ಮನೆಗೆ ಭೇಟಿ ನೀಡಿ ಪತ್ನಿ ಸೌಮ್ಯ, ತಾಯಿ ಶಶಿ ಅವರಿಗೆ ಸಾಂತ್ವನ ಹೇಳಿದ ಸಚಿವರು, ಕೆಲವೊಮ್ಮೆ ನಿರಪರಾಧಿಗಳಿಗೆ ಶಿಕ್ಷೆ ಆಗುತ್ತದೆ. ಘಟನೆಯಿಂದ ನೊಂದಿರುವ ಸೌಮ್ಯ ಅವರ ಜೀವನ ನಿರ್ವಹಣೆಗೆ ಎಲ್ಲಾದರೂ ಒಂದು ಕೆಲಸ ಕೊಡಿಸುತ್ತೇನೆ ಎಂದು ಧೈರ್ಯ ತುಂಬಿದರು. ಇದೇ ವೇಳೆ ವೈಯಕ್ತಿಕವಾಗಿ 50 ಸಾವಿರ ರು. ಸಹಾಯಧನ ನೀಡಿದರು.

ನಂತರ ಸ್ಥಳೀಯರೊಂದಿಗೆ ಮಾತನಾಡಿದ ಸಚಿವರು, ಘಟನೆ ಹಿಂದೆ ಭದ್ರಿಕೊಪ್ಪಲು ಗ್ರಾಮದ ಯುವಕರು ಇಲ್ಲ ಎನ್ನುವ ಮಾಹಿತಿ ಇದೆ. ಗಲಾಟೆಗೆ ಬೇರೆಯವರ ಕುಮ್ಮಕ್ಕು ಕಾರಣ. ಇಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯ ಜೈಲಿನಲ್ಲಿರುವ ಮತ್ತು ಭಯದಿಂದ ಊರು ಬಿಟ್ಟಿರುವವರು ಭಯ ಪಡೆದೆ ವಾಪಸ್ ಬರುವಂತೆ ಮನವಿ ಮಾಡಿದರು.

ಜೈಲಿನಲ್ಲಿರುವವರಿಗೆ ಜಾಮೀನು ಕೊಡಿಸಲು ನಮ್ಮ ಕಾರ್ಯಕರ್ತರು, ಲಾಯರ್‌ಗಳು ಓಡಾಡುತ್ತಿದ್ದಾರೆ. ಭಯದಿಂದ ಊರು ಬಿಟ್ಟಿರುವವರು ಧೈರ್ಯವಾಗಿ ಊರಿಗೆ ಬಂದು ಎಂದಿನಂತೆ ಇರಬಹುದು. ಯಾರನ್ನೂ ಅರೆಸ್ಟ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಊರು ತೊರೆದಿರುವವರ ಪ್ರತಿ ಕುಟುಂಬಕ್ಕೆ 5 ಸಾವಿರ ರು. ಸಹಾಯ ಮಾಡಿದರು. ಇದೇ ವೇಳೆ ಮಹಿಳೆಯರು ಮತ್ತು ಗ್ರಾಮಸ್ಥರು ಗ್ರಾಮದಲ್ಲಿ ಮೊದಲಿನಂತೆ ವಾತಾವರಣ ನಿರ್ಮಿಸುವಂತೆ ಸಚಿವರಲ್ಲಿ ಅಳಲು ತೋಡಿಕೊಂಡರು.

ಸಚಿವರ ಭೇಟಿ ಹಿನ್ನೆಲೆಯಲ್ಲಿ ಭದ್ರಿಕೊಪ್ಪಲು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಯಾರದೋ ಕುಮ್ಮಕ್ಕಿನಿಂದ ಕೋಮುಗಲಭೆ:

ನಾಗಮಂಗಲ ಕೋಮುಗಲಭೆಯಲ್ಲಿ ಭದ್ರಿಕೊಪ್ಪಲಿನ ಯುವಕರು ಇಲ್ಲ ಎಂಬ ಮಾಹಿತಿ ಇದೆ. ಯಾರದೋ ಕುಮ್ಮಕ್ಕಿನಿಂದ ಈ ಘಟನೆ ನಡೆದಿದೆ ಎಂದು ಸಚಿವ ಚಲುವರಾಯಸ್ವಾಮಿ ಅನುಮಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಹತ್ತಿಸಲೇ ಕೆಲವರು ಕಾಯುತ್ತಿದ್ದಾರೆ. ಎರಡೂ ಕೋಮಿನ ನಡುವೆ ಕಂದಕ ಸೃಷ್ಟಿ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸುತ್ತಿರುತ್ತಾರೆ. ಇಂತವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ನಾನು ರಾಜಕಾರಣ ಮಾಡಲು ಇಲ್ಲಿಗೆ ಬಂದಿಲ್ಲ. ನನ್ನ ಜೀವನದಲ್ಲಿ ಯಾರಿಗೂ ತೊಂದರೆ ಕೊಟ್ಟಿಲ್ಲ. ಘಟನೆ ನಡೆದ ಮರು ದಿನದಿಂದಲೇ ಹಿಂದು ಮುಸ್ಲಿಂ ಒಂದಾಗಿ ವ್ಯವಹಾರ ನಡೆಸುತ್ತಿದ್ದಾರೆ. ಆದರೆ, ರಾಜಕಾರಣಿಗಳು ಘಟನೆಯಿಂದ ನಮಗೇನಾದರೂ ಲಾಭ ಸಿಗಬಹುದೇನೋಎಂದು ಬಂದೂ ಬಂದು ಹೋಗುತ್ತಿದ್ದಾರೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ನಾಗಮಂಗಲ ಈಗ ಶಾಂತಿಯುತವಾಗಿದೆ. ಯಾರನ್ನೂ ಬಂಧಿಸದಂತೆ ಜಿಲ್ಲಾ ಎಸ್ಪಿಗೆ ಸೂಚಿಸುತ್ತೇನೆ. ಎಲ್ಲರೂ ಊರಿಗೆ ಮರಳಿ ಬರಲಿ ಎಂದಿನಂತೆ ಬದುಕು ನಡೆಸಲಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ