ಮೂಡಲಗಿ ತಾಲೂಕಿನ ನಾಗನೂರ ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಚಂದ್ರವ್ವ ಮಲ್ಲಗೌಡ ಯರಗಣವಿ ಚುನಾಯಿತರಾದರೆ, ಉಪಾಧ್ಯಕ್ಷರಾಗಿ ಸುಭಾಸ ಕಾತ್ತೇನವರ ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ತಾಲೂಕಿನ ನಾಗನೂರ ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಚಂದ್ರವ್ವ ಮಲ್ಲಗೌಡ ಯರಗಣವಿ ಚುನಾಯಿತರಾದರೆ, ಉಪಾಧ್ಯಕ್ಷರಾಗಿ ಸುಭಾಸ ಕಾತ್ತೇನವರ ಅವಿರೋಧವಾಗಿ ಆಯ್ಕೆಯಾದರು.ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಎಸ್.ಸಿ. ಪುರುಷ ವರ್ಗಕ್ಕೆ ಮೀಸಲಿತ್ತು. ಒಟ್ಟು 17 ಸ್ಥಾನಗಳಿರುವ ಪಟ್ಟಣ ಪಂಚಾಯತಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಎಲ್ಲ 17 ಸದಸ್ಯರು ಪಕ್ಷೇತರರಾಗಿ ಆಯ್ಕೆಯಾಗಿದ್ದರು. 2ನೇ ವಾರ್ಡ ಸದಸ್ಯ ಮರಣ ಹೊಂದಿದ್ದರಿಂದ 16 ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಒಮ್ಮತ ಮೂಡದ ಕಾರಣ ಎರಡು ಗುಂಪುಗಳಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಚಂದ್ರವ್ವ ಯರಗಣವಿ, ಬಸಪ್ಪ ತಡಸನ್ನವರ, ಪವಾಡಿ ಸಿದ್ದಪ್ಪ ಗೋಟೂರ ನಾಮಪತ್ರ ಸಲ್ಲಿಸಿದ್ದರು. ಪವಾಡಿ ಗೋಟೂರ ನಾಮಪತ್ರ ವಾಪಸ್ ಪಡೆದಿದ್ದರಿಂದ ಯರಗಣವಿ ಮತ್ತು ತಡಸನ್ನವರ ಕಣದಲ್ಲಿ ಉಳಿದರು. ಮತದಾನ ನಡೆದು ಇಬ್ಬರು ತಲಾ 8 ಮತ ಪಡೆದು ಸಮಬಲ ಸಾಧಿಸಿದ್ದರಿಂದ ಚೀಟಿ ಎತ್ತಿ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ಇದರಲ್ಲಿ ಪಟ್ಟಣದ ಹಿರಿಯರಾದ ಬಸನಗೌಡ ಆರ್. ಪಾಟೀಲ ಬೆಂಬಲಿತ ಚಂದ್ರವ್ವ ಮಲ್ಲಗೌಡ ಯರಗಣವಿಗೆ ಅದೃಷ್ಟ ಖುಲಾಯಿಸಿತು. ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಸ ಕಲ್ಲೋಳೆಪ್ಪ ಕಾತ್ತೇನವರ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಮೂಡಲಗಿ ಗ್ರೇಡ್-2 ತಹಸೀಲ್ದಾರ ಶಿವಾನಂದ ಬಬಲಿ, ಸಹಾಯಕ ಚುನಾವಣಾಧಿಕಾರಿಯಾಗಿ ಬಾಲನಾಯ್ಕ ಕುಮರೇಶ ಕಾರ್ಯನಿರ್ವಹಿಸಿದರು.
ವಿಜಯೋತ್ಸವ: ನಾಗನೂರ ಪಟ್ಟಣ ಪಂಚಾಯತಿಗೆ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಚಂದ್ರವ್ವ ಯರಗಣವಿ ಆಯ್ಕೆ ಆಗುತ್ತಿದ್ದಂತೆಯೇ ಬೆಂಬಲಿಗರು ಗುಲಾಲು ಎರಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಬಳಿಕ ಸದಸ್ಯರು, ಮುಖಂಡರು ಸನ್ಮಾನಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.