ವಿಜಯಪುರ: ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು, ಮಹಾರಾಷ್ಟ್ರ ಭಾಗದಲ್ಲಿ ಒಣ ಮೆಣಸಿನಕಾಯಿ ಬೆಳೆದು ಸೂಕ್ತ ಮಾರುಕಟ್ಟೆ ಇಲ್ಲದೆ ಗೋಳಾಡುತ್ತಿದ್ದ ಈ ಭಾಗದ ರೈತರಿಗೆ ಸಿಹಿಸುದ್ದಿ ಸಿಕ್ಕಿದೆ. ಇನ್ನು ಮುಂದೆ ವಾರದಲ್ಲಿ ಎರಡು ದಿನ ಅಂದರೆ ಪ್ರತಿ ಮಂಗಳವಾರ ಹಾಗೂ ಪ್ರತಿ ಶುಕ್ರವಾರ ಇ-ಟೆಂಡರ್ ಮೂಲಕ ವಿಜಯಪುರ ಎಪಿಎಂಸಿ ಮಾರುಕಟ್ಟೆಯಲ್ಲಿಯೇ ಒಣ ಮೆಣಸಿನಕಾಯಿ ವಹಿವಾಟು ನಡೆಸಲಾಗುತ್ತಿದೆ ಎಂದು ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ತಿಳಿಸಿದ್ದಾರೆ.
ಇದರಿಂದಾಗಿ ಮೆಣಸಿನಕಾಯಿ ವಿಲೇವಾರಿಗಾಗಿ ಅವರೆಲ್ಲ 300 ರಿಂದ 350 ಕಿ.ಮೀ.ದೂರದ ಹಾವೇರಿ ಜಿಲ್ಲೆಯ ಬ್ಯಾಡಗಿ ಮಾರುಕಟ್ಟೆಗೆ ಸಾಗಿಸುತ್ತಿದ್ದರು. ಇದರಿಂದ ರೈತರಿಗೆ ಸಾಗಾಣಿಕೆ ವೆಚ್ಚ, ಹಮಾಲಿ ದರ ಸೇರಿದಂತೆ ಇನ್ನಿತರ ವೆಚ್ಚಗಳು ಹೆಚ್ಚಾಗುತ್ತಿದ್ದವು. ಆದರೆ ಇದೀಗ ವಿಜಯಪುರದಲ್ಲೇ ಆನಲೈನ್ ಮಾರುಕಟ್ಟೆ ಆರಂಭವಾಗಿರುವುದರಿಂದ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಆಗಲಿದೆ ಎಂದು ರವೀಂದ್ರ ಬಿಜ್ಜರಗಿ ತಿಳಿಸಿದ್ದಾರೆ.