ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅವಿಸ್ಮರಣೀಯವಾದದ್ದು, ಅವರು ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಅಭಿವೃದ್ದಿ ಹೊಂದಲು ಕಾರಣೀಭೂತರು ಎಂದು ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೊಂಗರಳ್ಳಿ ಎಸ್.ನಾಗರಾಜು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ತಾಲೂಕು ಘಟಕದ ವತಿಯಿಂದ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುಷ್ಷಾರ್ಚನೆ ಮಾಡಿ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು. ೧೯೧೧ರಲ್ಲಿ ಕೃಷ್ಣರಾಜ ಸಾಗರ ಭಾರತದ ಮೊಟ್ಟಮೊದಲ ಬೃಹತ್ ಜಲಾಶಯ ನಿರ್ಮಾಣ, ೧೯೦೦ರಲ್ಲಿಯೇ ಶಿವನಸಮುದ್ರ ಬಳಿ ಜಲವಿದ್ಯುತ್ ಕೇಂದ್ರ ಸ್ಥಾಪನೆ ಮಾಡಿದರು. ಇದು ಏಷ್ಯಾಖಂಡದಲ್ಲೇ ಮೊದಲ ಜಲ ವಿದ್ಯುತ್ ಆರಂಭ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಿಕ್ಷಣ, ಆರೋಗ್ಯ, ಕೃಷಿಗೆ ಒತ್ತು, ನೀರಾವರಿ ಆದ್ಯತೆ, ಭದ್ರಾವತಿ ಕಬ್ಬಿಣ ಕಾರ್ಖಾನೆ, ರೈಲು, ಕೈಗಾರಿಕೆ ಸ್ಥಾಪನೆ ಮಾಡಿದರು. ಹೀಗೆ ಹತ್ತು ಹಲವು ಸಾಧನೆ ಮಾಡಿ ನಾಡುಕಟ್ಟಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ ಮತ್ತು ಅವಿಸ್ಮರಣೀಯವಾದದ್ದು ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಜ್ಞಾನದೃಷ್ಠಿ, ದೂರದೃಷ್ಠಿ, ಕರ್ತೃವ್ಯದೃಷ್ಠಿ ಎಲ್ಲಾ ದೃಷ್ಠಿಕೋನಗಳನ್ನು ಇಟ್ಟುಕೊಂಡಿದ್ದರು. ಅವರ ಆದರ್ಶಗಳನ್ನು ಇಂದಿನ ಆಡಳಿತಗಾರ ಅಧ್ಯಯನ ಮಾಡಿದರೆ ಎಲ್ಲ ಹಳ್ಳಿಗಳು ಮೈಸೂರು ಮಾದರಿಯಲ್ಲಿ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.ಚಾ.ನಗರ ಮಹಾರಾಜರ ತವರು ಭೂಮಿ. ಇಲ್ಲಿಯೇ ಮಹಾರಾಜರ ಜನನವಾಗಿದೆ. ಮಹಾರಾಣಿ ಕೂಡ ಮಂಗಲದ ಕೆಂಪನಂಜಮ್ಮಣಿ ಅವರು ಮೈಸೂರು ಸಂಸ್ಥಾನಕ್ಕೆ ಮಹಾರಾಣಿಯಾಗಿದ್ದರು. ಸಿದ್ದಯ್ಯನಪುರದ ಬಹತೇಕ ಜನರಿಗೆ ಭೂಮಿಕೊಟ್ಟದ್ದನ್ನು ಇಲ್ಲಿ ಸ್ಮರಿಸಬಹುದು. ಬಡವರು, ಹಿಂದುಳಿದವರು, ನೊಂದವರಿಗೆ ರಾಜರಾಗಿ ಮಹಾರಾಜ ಸ್ಥಾನವನ್ನು ಜನಸಾಮಾನ್ಯರಲ್ಲಿ ಸೃಷ್ಠಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರು. ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿ, ಚಾಮರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ. ಚಾಮರಾಜನಗರಕ್ಕೆ ರೈಲು ಸಂಪರ್ಕ ಕಲ್ಪಿಸಿಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ನಗರದ ರೈಲ್ವೆ ನಿಲ್ದಾಣಕ್ಕೆ ಅಥವಾ ತಿರುಪತಿ ಎಕ್ಸ್ ಪ್ರೆಸ್ಗೆ ನಾಮಕರಣ ಮಾಡಬೇಕು. ಅವರ ಆದರ್ಶ ಇಂದಿನ ರಾಜಕಾರಣಿಗಳಿಗೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಕೆ.ಎಂ.ನಾಗರಾಜು, ಮಹೇಶ್ಗೌಡ, ಸರಸ್ವತಿ, ರವಿಚಂದ್ರ ಪ್ರಸಾದ್ ಕಹಳೆ, ಉಪನ್ಯಾಸಕ ರವಿಚಂದ್ರ, ಬಿ.ಕೆ.ಆರಾಧ್ಯ, ಸುಮುಖ್, ಶಿವಲಿಂಗಮೂರ್ತಿ ಇತರರು ಹಾಜರಿದ್ದರು.