ನಾಡು-ನುಡಿಗೆ ನಾಲ್ವಡಿ ಒಡೆಯರ್ ಕೊಡುಗೆ ಅಪಾರ

KannadaprabhaNewsNetwork | Published : May 6, 2025 12:23 AM

ಸಾರಾಂಶ

ಯಳಂದೂರು ಸೊಸೈಟಿ ಬೀದಿಯಲ್ಲಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಸೋಮವಾರ ಕಸಾಪ ಸಂಸ್ಥಾಪಕರ ದಿನಾಚರಣೆ ಹಾಗೂ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ನೆರೆದಿದ್ದ ಮುಖಂಡರು ಪುಷ್ಪಾರ್ಚನೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಕನ್ನಡ ನಾಡು-ನುಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಪಾರ ಕಾಣಿಕೆ ನೀಡಿದ್ದಾರೆ. ದೇಶದಲ್ಲೇ ಬೃಹತ್ ಸಾಹಿತ್ಯ ವೇದಿಕೆಗೆ ಮುನ್ನುಡಿ ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಮ್ಮನಪುರ ಮಹೇಶ್ ತಿಳಿಸಿದರು.

ಪಟ್ಟಣದ ಸೊಸೈಟಿ ಬೀದಿಯಲ್ಲಿರುವ ತಾಲೂಕು ಕಸಾಪ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ಸಾಹಿತ್ಯ ಪರಿಷತ್ತನ್ನು ೧೯೧೫ ರಲ್ಲಿ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ನವ ಕರ್ನಾಟಕ ನಿರ್ಮಾಣದ ಶಿಲ್ಪಿಯಾಗಿದ್ದು ಅನೇಕ ದೇಶದಲ್ಲಿ ಮೊದಲು ಎಂಬಂತೆ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇವರ ಅವಧಿಯಲ್ಲಿ ನೀರಾವರಿ, ವಿದ್ಯುತ್, ಶಿಕ್ಷಣ, ರಸ್ತೆ, ಮಹಿಳಾ ಸಮಾನತೆ ಸೇರಿದಂತೆ ಅನೇಕ ಮೊದಲುಗಳಿಗೆ ನಾಂದಿ ಹಾಕಿದ ಕೀರ್ತಿ ಸಲ್ಲುತ್ತದೆ. ಇದರೊಂದಿಗೆ ಸಾಹಿತ್ಯ ಪರಿಷತ್ತಿಗೂ ಇವರು ಮೊದಲು ಅಡಿಪಾಯ ಹಾಕಿದರು. ಇದಕ್ಕೆ ಸರ್ ಎಂ.ವೀಶ್ವೇಶ್ವರಯ್ಯ, ಸರ್.ಮಿರ್ಜಾ ಇಸ್ಮಾಯಿಲ್ ನೀರೆರೆದು ಬೃಹತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಇದನ್ನು ಬೆಳೆಸಿದರು. ೧೯೩೦ ರಲ್ಲಿ ಇದು ಕನ್ನಡ ಸಾಹಿತ್ಯ ಪರಿಷತ್ತಾಗಿ ಮಾರ್ಪಾಡುಗೊಂಡಿತು ಎಂದರು.ಬಿಳಿಗಿರಿರಂಗನಬೆಟ್ಟದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್ ಮಾತನಾಡಿ, ಯಳಂದೂರು ತಾಲೂಕಿನಲ್ಲಿ ಅನೇಕ ಸಾಹಿತಿಗಳಿದ್ದಾರೆ. ಸಾಹಿತ್ಯ ಪರಿಷತ್ತಿನವರು ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ನಮಗೂ ಕೂಡ ಇದರ ಪರಿಚಯ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರೊಂದಿಗೆ ಭಗೀರಥ ಜಯಂತಿ ಆಚರಣೆಯೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಬೇಕಿರುವ ಎಲ್ಲಾ ನೆರವು ನೀಡುವ ಭರವಸೆ ನೀಡಿದರು.ತಾಪಂ ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪಕರ ದಿನಾಚರಣೆ ಜೊತೆಗೆ ಭಗೀರಥ ಜಯಂತಿ ಆಚರಣೆ ಮಾಡಲಾಗುತ್ತಿದೆ. ಭಗೀರಥರು ಗಂಗೆಯನ್ನು ಭೂಮಿಗೆ ತರಲು ಪ್ರಯತ್ನಪಟ್ಟ ರೀತಿ ಅನುಕರಣೀಯವಾಗಿದ್ದು. ಇದು ನಾವು ಸಂಕಲ್ಪ ಮಾಡಿದರೆ ಎನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ ಎಂದರು.ಕಸಾಪ ತಾಲೂಕು ಅಧ್ಯಕ್ಷ ಯರಿಯೂರು ಎನ್.ನಾಗೇಂದ್ರ ಅಧ್ಯಕ್ಷೀಯ ನುಡಿಗಳನ್ನಾಡಿದರು. ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ, ಪಪಂ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ ಮಾತನಾಡಿದರು. ಕಸಾಪ ಕಾರ್ಯದರ್ಶಿ ಡಿ.ಪಿ. ಮಹೇಶ್ ಕೋಶಾಧ್ಯಕ್ಷ ಫೈರೋಜ್ ಖಾನ್, ಗೋಪಾಲ್, ಮೀರೆ ಸಿದ್ದರಾಜು, ಶಿಕ್ಷಕ ಮದ್ದೂರು ನಂಜುಂಡಸ್ವಾಮಿ, ಗುಂಬಳ್ಳಿ ಮನು, ಪರಶಿವ, ಕೆ. ಶ್ರೀನಿವಾಸ್, ವೆಂಕಟೇಶ್, ಸೋಮಣ್ಣ ಅನೇಕರು ಹಾಜರಿದ್ದರು.

Share this article