ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಸರ್ಕಾರದ ನಿಯಮದಂತೆ ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಬೇಕು. ಇದನ್ನು ಫೆ.28ರೊಳಗೆ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪರಭಾಷಿಕರ ಹಾವಳಿ
ವೇದಿಕೆಯ ಜಿಲ್ಲಾಧ್ಯಕ್ಷ ಮೇಡಿಹಾಳ ರಾವೇಂದ್ರ ಮಾತನಾಡಿ, ಮೂರು ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ನುಡಿ ಕರ್ನಾಟಕದಲ್ಲಿ ಸೊರಗಿ ಹೋಗುವಂತಾಗಿದೆ. ಇದಕ್ಕೆ ಮುಖ್ಯ ಕಾರಣ ಹೊಟ್ಟೆ ಪಾಡಿಗಾಗಿ ಗುಳೆ ಬಂದಿರುವ ಪರಭಾಷಿಕರು, ಬೆಂಗಳೂರು ಸೇರಿದಂತೆ ನಗರಗಳು, ಪಟ್ಟಣಗಳು, ಹೋಬಳಿ ಕೇಂದ್ರಗಳಲ್ಲಿ ಈಗ ಪರಭಾಷಿಕ ವ್ಯಾಪಾರಿಗಳದ್ದೇ ಆರ್ಭಟ ಜೋರಾಗಿದೆ. ಕನ್ನಡ ಉಳಿಸಿ ರಸಬೇಕಾದ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದು ಹೇಳಿದರು.ರಾಜ್ಯದ ಸರ್ಕಾರದ ನಿಯಮಾನುಸಾರದಂತೆ ಕರ್ನಾಟಕದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮ ಫಲಕಗಳಲ್ಲಿ ಶೇ.60% ರಷ್ಟು ಕನ್ನಡ ಭಾಷೆಯಲ್ಲಿ ಹಾಕಬೇಕು ಎಂದು ಸರ್ಕಾರದ ಆದೇಶ, ಸುತ್ತೋಲೆಗಳು, ಕನ್ನಡಿಗರು ಹೋರಾಟಗಳನ್ನು ನಡೆಸಿದ್ದರು ಪರಭಾಷಿಕ ಉದ್ಯಮಿಗಳು, ವ್ಯಾಪಾರಿಗಳು, ಉದ್ದಟತನದಿಂದ ವರ್ತಿಸುಸಿ, ಕನ್ನಡವನ್ನು ಕಡೆಗಣಿಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿರುವ ಅಂಗಡಿ-ಮುಂಗಟ್ಟು, ವಾಣಿಜ್ಯ ಮಳಿಗೆ, ಕೈಗಾರಿಕೆ, ವ್ಯಾಪಾರ ಸಂಸ್ಥೆ, ಸಮಾಲೋಚನ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನೋರಂಜನಾ ಕೇಂದ್ರ, ಹೋಟೆಲ್ಗಳು, ಖಾಸಗಿ ಶಾಲೆಗಳು, ದೇವಾಲಯಗಳು, ಚರ್ಚುಗಳು, ಮಸೀದಿಗಳು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಜಾಹಿರಾತು ನೀಡುವ ಫಲಕಗಳು, ಬ್ಯಾನರ್ಗಳನ್ನು ಕನ್ನಡವನ್ನು ಕಡೆಗಣಿಸುತ್ತಿದ್ದಾರೆ. ಇದು ಫೆ.28ರೊಳಗೆ ಸರಿಹೋಗಬೇಕು, ಇಲ್ಲದಿದ್ದರೆ ಹೋರಾಟದ ಸ್ವರೂಪವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಮುನಿರಾಜು, ಜಿಲ್ಲಾ ಉಪಾಧ್ಯಕ್ಷ ಡಿಕೆಹಳ್ಳಿ ಪ್ರಭಾಕರ್ ಗೌಡ, ಮೆಹಬೂಬ್, ಕೊಡಗುರು ಶಂಕರ್ ರೆಡ್ಡಿ, ವಡಗೂರು ಮಂಜುನಾಥ್, ಡಿಕೆ ಹಳ್ಳಿ ಮುನಿರಾಜು, ಮತ್ತಿತರರು ಇದ್ದರು.