ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಭಾನುವಾರ ರಾತ್ರಿ ಸಾಂಸ್ಕೃತಿಕ ವೈಭವದೊಂದಿಗೆ ಆರಂಭವಾದ ಪಲ್ಲಕ್ಕಿ ನಂದಿ ಧ್ವಜಗಳ ಮೆರವಣಿಗೆ ಸೋಮವಾರ ಬೆಳಗ್ಗೆ ಥೇರ ಮೈದಾನಕ್ಕೆ ಬಂದಾಗ ಮೈದಾನದಲ್ಲಿ ಎಲ್ಲೆಡೆ ಜನ ಸಾಗರದಂತೆ ಕಂಡು ಬಂದರು. ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಜೈಘೋಷಗಳು ಮೋಳಗಿದವು.
ಇದೇ ವೇಳೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಕೃಷಿಕರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ನಡೆದ ಪಶು ಪ್ರದರ್ಶನದಲ್ಲಿ ಭಾಗವಹಿಸಿದ ಅತ್ಯುತ್ತಮ ತಳಿ ಆಯ್ಕೆ ಮಾಡಿ ಇವುಗಳ ಮಾಲಿಕರಿಗೆ (ರೈತರಿಗೆ) ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ. ಜಿ.ಎಸ್ ಭುರಳೆ, ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ, ವಿಶ್ವಸ್ಥರಾದ ಗದಗೆಪ್ಪಾ ಹಲಶೆಟ್ಟೆ, ಸೋಮಶೇಖರಯ್ಯ ವಸ್ತ್ರದ, ಮಲ್ಲಿನಾಥ ಮಂಠಾಳೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಸುಭಾಷ ಹೊಳಕುಂದೆ, ಮಲ್ಲಯ್ಯ ಹಿರೇಮಠ, ಅಶೋಕ ನಾಗರಾಳೆ, ಕಾಶೆಪ್ಪಾ ಸಕ್ಕರಭಾವಿ, ಜಗನ್ನಾಥ ಖೂಬಾ, ಭದ್ರಿನಾಥ ಪಾಟೀಲ, ಅನೀಲಕುಮಾರ ರಗಟೆ, ರೇವಣಪ್ಪ ರಾಯವಾಡೆ, ಶಿವಶರಣ ನೂಲಿ ಚಂದಯ್ಯ ಸಮಾಜದ ಅಧ್ಯಕ್ಷ ಧರ್ಮಣ್ಣ ಭೆಂಡೆ ಹಾಗೂ ಮುಖಂಡರು, ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು, ಗಣ್ಯರು, ಅಪಾರ ಸಂಖ್ಯೆಯಲ್ಲಿ ಬಸವ ಭಕ್ತರು ಭಾಗವಹಿಸಿದ್ದರು. ಡಾ.ಭೀಮಾಶಂಕರ ಬಿರಾದಾರ, ಡಾ. ರುದ್ರಮಣಿ ಮಠಪತಿ ಹಾಗೂ ಬಸವರಾಜ ಖಂಡಾಳೆ ನಿರೂಪಿಸಿದರು.
ಭಾನುವಾರ ರಾತ್ರಿ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಥೇರ್ ಮೈದಾನದವರೆಗೆ ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿದ್ದ ಹೆಡೆಯಿರುವ ನಂದಿ ಧ್ವಜ ಸೇರಿ ಐದು ನಂದಿ ಧ್ವಜಗಳ ಹಾಗೂ ಪಲ್ಲಕಿ ಮೆರವಣಿಗೆ ಸಾಂಸ್ಕೃತಿಕ ವೈಭವದೊಂದಿಗೆ ಜರುಗಿತು. ವಿಶೇಷ ಸಮವಸ್ತ್ರ ಧರಿಸಿದ ಬಸವ ಭಕ್ತರು ನಂದಿ ಧ್ವಜ ಹಿಡಿದು ಹೆಜ್ಜೆ ಹಾಕಿದರು.
ಕೋಟೆ ಬಳಿ ನಂದಿಧ್ವಜ ಪೂಜೆಯನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬವಣ್ಣ ಲಂಗೋಟೆ ನೆರವೇರಿಸಿದರು. ಶಾಸಕ ಶರಣು ಸಲಗರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಪದಾಧಿಕಾರಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ದಾರಿಯುದಕ್ಕೂ ಮನೆಗಳ ಹಾಗೂ ಅಂಗಡಿಗಳ ಮುಂದೆ ನಿಂತ ಮಹಿಳೆಯರು ಪಲ್ಲಕಿಗೆ ಆರತಿ ಬೆಳಗಿ ಭಕ್ತಿ ಶ್ರದ್ಧೆಯಿಂದ ಪೂಜೆ ಸಲ್ಲಿಸಿದರು.ಎರಡು ದಿನ ರಾತ್ರಿ ನಡೆದ ಮೆರವಣಿಗೆಯಲ್ಲಿ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ, ವಿಶ್ವಸ್ಥ ಸಮಿತಿ ಪದಾಧಿಕಾರಿಗಳು, ಶಿವಶರಣ ನೂಲಿಚಂದಯ್ಯ ಹಾಗೂ ಮಾದಾರ ಚನ್ನಯ್ಯ ದೇವಸ್ಥಾನ ಪಂಚ ಕಮಿಟಿ ಪದಾಧಿಕಾರಿ-ಪ್ರಮುಖರು ಭಾಗವಹಿಸಿದರು.